ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಸರ್ಕಾರದಿಂದಲೇ ಪ್ಲಾಸ್ಟಿಕ್‌ ಬ್ಯಾನರ್‌ ಅಲವಡಿಕೆ

| Published : Feb 13 2025, 12:45 AM IST

ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಸರ್ಕಾರದಿಂದಲೇ ಪ್ಲಾಸ್ಟಿಕ್‌ ಬ್ಯಾನರ್‌ ಅಲವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ಧ ಮೈಲಾರ ಜಾತ್ರೆಗೆ ಇನ್ನೆರಡು ದಿನ ಮಾತ್ರ ಬಾಕಿ ಇದ್ದು ಅವ್ಯವಸ್ಥೆ, ಅಪಸವ್ಯಗಳು ಮುಂದುವರಿದಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಇತಿಹಾಸ ಪ್ರಸಿದ್ಧ ಮೈಲಾರ ಜಾತ್ರೆಗೆ ಇನ್ನೆರಡು ದಿನ ಮಾತ್ರ ಬಾಕಿ ಇದ್ದು ಅವ್ಯವಸ್ಥೆ, ಅಪಸವ್ಯಗಳು ಮುಂದುವರಿದಿದ್ದು, ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯೇ ಮುಂದಾಗಿ ದೊಡ್ಡ ದೊಡ್ಡ ಪ್ಲಾಸ್ಟಿಕ್‌ ಬ್ಯಾನರ್‌ಗಳನ್ನು ಅಳವಡಿಸಿ ಹುಬ್ಬೇರಿಸುವಂತೆ ಮಾಡಿದೆ.

ಜಾತ್ರೆಗೆ ಯಾವುದೇ ತರಹದ ಪ್ರಚಾರದ ಅಗತ್ಯವಿಲ್ಲ ಎಂದು ಹೇಳುವ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ, ಮೈಲಾರ ಇತರೆ ಕಡೆಗಳಲ್ಲಿ 25ಕ್ಕೂ ಹೆಚ್ಚು ಪ್ಲಾಸ್ಟಿಕ್‌ ಬ್ಯಾನರ್‌ಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಂಸದ ಈ.ತುಕಾರಾಂ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಕೃಷ್ಣನಾಯ್ಕ ಅವರ ಭಾವಚಿತ್ರಗಳಿರುವ ಪ್ಲಾಸ್ಟಿಕ್‌ ಬ್ಯಾನರ್‌ ಅಳವಡಿಸಿದ್ದಾರೆ.2016ರಲ್ಲಿ ಸರ್ಕಾರ ಪ್ಲಾಸ್ಟಿಕ್‌ ನಿಷೇಧ ಕಾಯ್ದೆ ಸಿದ್ಧವಾಗಿತ್ತು. 2022ರಲ್ಲಿ ಸರ್ಕಾರ ಈ ಕುರಿತು ಪರಿಸರದ ಮೇಲಾಗುತ್ತಿರುವ ಹಾನಿ ತಡೆಗಟ್ಟಲು, ಕಟ್ಟುನಿಟ್ಟಾಗಿ ಪ್ಲಾಸ್ಟಿಕ್‌ ಬ್ಯಾನರ್‌, ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದೆ. ಆದರೆ ಮೈಲಾರಲಿಂಗೇಶ್ವರ ದೇವಸ್ಥಾನದ ಇಒ ಜಾತ್ರೆ ಹಾಗೂ ಇತರೆ ಕಡೆಗಳಲ್ಲಿ ಪ್ಲಾಸ್ಟಿಕ್‌ ಬ್ಯಾನರ್‌ ಅಳವಡಿಸಿದ್ದಾರೆ. ಜನಸಾಮಾನ್ಯರು ಈ ರೀತಿ ಪ್ಲಾಸ್ಟಿಕ್‌ ಬ್ಯಾನರ್‌ ಬಳಕೆ ಮಾಡಿದರೆ ತಪ್ಪು ಎನ್ನುವ ಸರ್ಕಾರಿ ಅಧಿಕಾರಿಗಳೇ ಕಾಯ್ದೆ ಉಲ್ಲಂಘನೆ ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎನ್ನುವುದು ಭಕ್ತರ ಅಭಿಪ್ರಾಯ.

ಮುಂದುವರೆದ ಶೀತಲ ಸಮರ:

ಜಾತ್ರೆಯ ಸಂದರ್ಭದಲ್ಲೇ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌, ದೇವಸ್ಥಾನ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ನಡುವೆ ಶೀತಲ ಸಮರ ಮುಂದುವರಿದಿದೆ. ಜಾತ್ರೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳು, ದೇಗುಲದ ವಂಶ ಪಾರಂಪರ್ಯ ಗುರು ವೆಂಕಪ್ಪಯ್ಯ ಒಡೆಯರ್‌ ಸಮ್ಮುಖದಲ್ಲಿ ನಡೆಯುತ್ತಿವೆ. ಆದರೆ ಈಚಿಗೆ ಡಿಸಿ ಆದೇಶದ ಮೇರೆಗೆ ಗುರು ವೆಂಕಪ್ಪಯ್ಯ ಒಡೆಯರ್‌ ವಂಶಸ್ಥರನ್ನು ದೇಗುಲದಿಂದ ಹೊರಗೆ ಹಾಕಿರುವ ದೇವಸ್ಥಾನದ ಇಒ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ.

ಇನ್ನು ಪಾದಯಾತ್ರಿಗಳಿಗೆ ಧೂಳು ರಸ್ತೆಯೇ ಗತಿಯಾಗಿದ್ದು, ಮಾರ್ಗದ ಮಧ್ಯದಲ್ಲಿ ದಣಿವು ಆರಿಸಿಕೊಳ್ಳಲು ಮೈಲಾರದಲ್ಲಿ ತಂಗುದಾಣ ಇಲ್ಲ. ಇಡೀ ಉತ್ತರ ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಿಂದ ಮೈಲಾರಲಿಂಗೇಶ್ವರ ಜಾತ್ರೆಗೆ ಎತ್ತಿನಬಂಡಿ, ಟ್ರ್ಯಾಕ್ಟರ್‌ ಸೇರಿದಂತೆ ಇತರೆ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ವಿಜಯನಗರ, ದಾವಣಗೆರೆ, ಹಾವೇರಿ, ರಾಣಿಬೆನ್ನೂರು, ಗದಗ, ಕೊಪ್ಪಳ ಇತರೆ ಭಾಗಗಳಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ.

ಜಾತ್ರೆಗೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಆಸಕ್ತಿ ತೋರಿಲ್ಲ. ಹೊಳಲುನಿಂದ ಮೈಲಾರವರೆಗೂ ಡಾಂಬರೀಕರಣ ಮಾಡದೇ ತಗ್ಗು ಗುಂಡಿಗಳಿಗೆ ಮಣ್ಣು ಹಾಕಿದೆ. ಇದರಿಂದ ಭಕ್ತರಿಗೆ ಧೂಳು ರಸ್ತೆಯೇ ಗತಿಯಾಗಿದೆ. ಇದಕ್ಕೆ ನೀರು ಸಿಂಪರಣೆ ಮಾಡುವ ಗೋಜಿಗೂ ಅಧಿಕಾರಿಗಳು ಹೋಗಿಲ್ಲ.

ಹೊಳಲಿನಿಂದ ಮೈಲಾರವರೆಗೂ ₹5 ಕೋಟಿ ವೆಚ್ಚದ ರಸ್ತೆ ಮಂಜೂರಾಗಿದೆ. ಜಾತ್ರೆ ಸಂದರ್ಭ ರಸ್ತೆ ಅಗೆವ ಬದಲು ಮಣ್ಣು ಹಾಕಿದ್ದೇವೆ. ಇದಕ್ಕೆ ನೀರು ಸಿಂಪರಣೆಗೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಇಇ ಜಾಹೀರ್‌.