ಸರ್ಕಾರದಿಂದ ಹಿಂದೂಗಳನ್ನು ಹತ್ತಿಕ್ಕುವ ಯತ್ನ

| Published : Jun 03 2025, 12:54 AM IST

ಸಾರಾಂಶ

ಮೈಸೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಮೈಸೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ದೊರಕಿದಂತಾಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಅರುಣ್ ಪುತ್ತಿಲಗೆ ನೋಟೀಸ್ ಜಾರಿಗೊಳಿಸಲಾಗಿದೆ. ದಕ್ಷಿಣ ಕನ್ನಡದಲ್ಲಿನ ಹಿಂದೂಗಳಲ್ಲಿ ಅಭದ್ರತೆ, ಆತಂಕ ಇದೆ. ಅರುಣ್ ಪುತ್ತಿಲ, ಕಲಡ್ಕ ಪ್ರಭಾಕರ ಭಟ್‌ ಗೆ ನೋಟಿಸ್ ನೀಡಿರುವುದು ತಾಲಿಬಾನಿ ಸರ್ಕಾರ ಸ್ಥಾಪನೆಗೆ ಇಟ್ಟಿರುವ ಹೆಜ್ಜೆ ಎಂದು ಕಿಡಿಕಾರಿದರು.

ಪ್ರವೀಣ್ ನೆಟ್ಟಾರ್ ಹತ್ಯೆ ಆಗದಿದ್ದಿರೆ ಈ ಸರಣಿ ಹತ್ಯೆಗಳು ನಡೆಯುತ್ತಿದ್ವಾ? ಪ್ರವೀಣ್ ನೆಟ್ಟಾರ್ ಕೊಲೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದರೆ ಈ ಹತ್ಯೆಗಳು ಆಗುತ್ತಿರಲಿಲ್ಲ. ಪಿಎಫ್‌ಐ, ಕೆ.ಎಫ್‌.ಡಿಯನ್ನು ಮಟ್ಟ ಹಾಕುವುದು ಬಿಟ್ಟು ಹಿಂದೂ ನಾಯಕರಿಗೆ ನೋಟೀಸ್ ಕೊಟ್ಟಿರುವುದು ಎಷ್ಟು ಸರಿ? ಹಿಂದೂಗಳ ಧ್ವನಿ ಅಡಗಿಸಲು ಮಾಡಿರುವ ಕೆಲಸ ಇದು ಎಂದು ಅವರು ವಾಗ್ದಾಳಿ ನಡೆಸಿದರು.

ಕಮಲ್ ಹಾಸನ್ ಒಬ್ಬ ವಿತಂಡ ವಾದಿ. ಅವನನ್ನು ತಮಿಳು ನಾಡಿನ ಜನರೇ ತಿರಸ್ಕರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವನ ಪಕ್ಷ ಮತ್ತು ಆತನನ್ನು ತಿರಸ್ಕರಿಸಿ ತಿಪ್ಪೆಗೆ ಹಾಕಿದ್ದಾರೆ. ಅವನ ಹೇಳಿಕೆಯನ್ನು ನಮ್ಮ ಕನ್ನಡದ ಅನ್ನ ತಿಂದು, ನೀರು ಕುಡಿದು ಸಮರ್ಥಿಸಿಕೊಳ್ಳುತ್ತಿರುವ ಕೆಲ ಕಿಡಿಗೇಡಿಗಳಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಕನ್ನಡಕ್ಕೆ ಯಾರು ತಂದೆ ತಾಯಿ ಇಲ್ಲ. ಅದಕ್ಕೆ ಅದರದೇ ಆದ ಸ್ವಂತಿಕೆ, ಅಸ್ಮಿತೆ, ಸಂಸ್ಕೃತಿ ಇದೆ. ಕನ್ನಡ ಸಂಸ್ಕೃತಿಯ ಪ್ರತೀಕ ಎಂದರು.

ನಮ್ಮ ಕನ್ನಡದಲ್ಲಿ ಅಭಿಮಾನ ಇದೆ. ಅದರದೇ ಆದ ಬಾವುಟವೂ ಇದೆ. ಅರಿಶಿನ ಕುಂಕುಮ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಯಾವನೋ ಚಲಾವಣೆ ಇಲ್ಲದ ವ್ಯಕ್ತಿ ಹೇಳಿದ್ದನ್ನು ನಮ್ಮ ಕೆಲವು ಚಲನಚಿತ್ರ ನಾಯಕರು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಇದು ನಿಮ್ಮ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ನಿಮಗೆ ನಾಚಿಕೆಯಾಗಬೇಕು ಎಂದು ಅವರು ಕಿಡಿ ಕಾರಿದರು.