ಸರಕಾರಿ ಸೇವೆ ನಿಮ್ಮ ಮನೆ ಬಾಗಿಲಿಗೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Jun 14 2024, 01:01 AM IST

ಸಾರಾಂಶ

ಅಬಕಾರಿ ಅಧಿಕಾರಿಗಳು ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮವಹಿಸಬೇಕು. ಪೊಲೀಸರು ಅಕ್ರಮ ಜೂಜು ಅಡ್ಡೆಗಳ ಮೇಲೆ ಕ್ರಮ ವಹಿಸಬೇಕು. ಹೆಣ್ಣು ಭ್ರೂಣಹತ್ಯೆ, ಬಾಲ್ಯ ವಿವಾಹದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾರ್ವಜನಿಕರು ಅರ್ಜಿಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರದ ಸೇವೆಗಳು ಜನರಿಗೆ ಸಮರ್ಪಕವಾಗಿ ತಲುಪುವಂತೆ ಮಾಡಲು, ಸರಕಾರಿ ಸೇವೆ ನಿಮ್ಮ ಮನೆ ಬಾಗಿಲಿಗೆ ಎಂಬ ಕಾರ್‍ಯಕ್ರಮ ಉಪಯುಕ್ತವಾಗಿದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕೆನ್ನಾಳು ಗ್ರಾಪಂ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸರಕಾರಿ ಸೇವೆ ನಿಮ್ಮ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮವು ನನ್ನ ಕನಸಿನ ಕೂಸು ಎಂದು ಹೇಳಿದರೆ ತಪ್ಪಾಗಲಾರದು ಎಂದರು.

ಜನರು ಸರ್ಕಾರಿ ಕಚೇರಿ, ತಾಪಂಗಳಲ್ಲಿ ಅಲೆಯುತ್ತಿರುವುದನ್ನು ನಾನು ನೋಡಿದ್ದೇನೆ. ನನ್ನ ಕ್ಷೇತ್ರದ ಜನರು ಇನ್ನು ಮುಂದೆ ಯಾವುದೇ ಕಚೇರಿಗಳಿಗೆ ಅಲೆಯುವುದು ಬೇಡ. ಸ್ವತಃ ನಾನೇ ಗ್ರಾಮಸ್ಥರ ಬಳಿ ತೆರಳುತ್ತಿದ್ದೇನೆ ಎಂದು ತಿಳಿಸಿದರು.

ಜನರು ಯಾವುದೇ ಸಮಸ್ಯೆಗಳನ್ನು ಹೊತ್ತು ಕಚೇರಿಗೆ ಅಲೆದಾಡಬಾರದು, ಬಗೆಹರಿಸಬಹುದಾದ ಎಲ್ಲಾ ಸಮಸ್ಯೆಗಳನ್ನು ಜನರಿಂದ ಅರ್ಜಿ ಪಡೆದು ಅಧಿಕಾರಿಗಳು ಸ್ಥಳದಲ್ಲಿಯೇ ಬಗೆಹರಿಸಬೇಕು. ಇದಕ್ಕಾಗಿ ಇಂದಿನಿಂದ 15 ದಿನಗಳವರೆಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದಕ್ಕೆ ಜನಗಳ ಸಹಕಾರ ಬಹಳ ಮುಖ್ಯ ಎಂದು ಹೇಳಿದರು.

ಗ್ರಾಪಂ ಸದಸ್ಯರು ಮನೆಗಳಿಗೆ ತೆರಳಿ ಜನರಿಂದ ಅರ್ಜಿ ಹಾಕಿಸುವ ಕೆಲಸ ಮಾಡಬೇಕು. ಹೊಸ ಪ್ರಯತ್ನದಿಂದ ಅಧಿಕಾರಿಗಳಿಗೆ ಒತ್ತಡ, ಜನರಿಗೆ ಸಮಸ್ಯೆಗಳು ಉಂಟಾಗಬಹುದು. ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ನಾವೆಲ್ಲ ಸೇರಿ ಮಾಡಬೇಕಾಗಿದೆ ಎಂದರು.

ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರಕಾರಿ ಜಾಗ, ಗೋಮಾಳ, ಗ್ರಾಮಠಾಣಗಳನ್ನು ಸರ್ವೇ ಮಾಡಿಸಿ, ಸ್ಮಶಾನ ಜಾಗ, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಕೆಲಸ ಮಾಡಬೇಕು. ಸರ್ವೇ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕುಳಿತು ಚರ್ಚಿಸಿ ಕ್ರಮವಹಿಸಬೇಕು ಎಂದರು.

ಸ್ಥಳದಲ್ಲಿ ಬಗೆಹರಿಸಬಹುದಾದ ಕೆಲಸವನ್ನು ಸ್ಥಳದಲ್ಲೇ ಪೂರ್ಣಗೊಳಿಸಿ. ಬಗೆಹರಿಯದ ಸಮಸ್ಯೆಗಳನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ. ಪಂಚಾಯಿತಿಯಿಂದ ಜನರು ಅರ್ಜಿ ಹಿಡಿದುಕೊಂಡು ಕಚೇರಿಗಳಿಗೆ ಅಲೆದಾಡಬಾರದು. ಅದರಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.

ನೀರಾವರಿ, ವಿದ್ಯುತ್, ಲೋಕೋಪಯೋಗಿ, ಆರೋಗ್ಯ, ಕಂದಾಯ, ಕೃಷಿ, ತೋಟಗಾರಿಗೆ ಹಾಗೂ ರೇಷ್ಮೆ ಸೇರಿ ಯಾವುದೇ ಇಲಾಖೆಯ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಬರುವ ರೈತರ ಕೆಲಸಗಳನ್ನು ಮಾಡಿಕೊಡಬೇಕು ತಾಕೀತು ಮಾಡಿದರು.

ಅಕ್ರಮ ಜೂಜು ಅಡ್ಡ, ಮದ್ಯ ಮಾರಾಟಕ್ಕೆ ಕ್ರಮ:

ಅಬಕಾರಿ ಅಧಿಕಾರಿಗಳು ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮವಹಿಸಬೇಕು. ಪೊಲೀಸರು ಅಕ್ರಮ ಜೂಜು ಅಡ್ಡೆಗಳ ಮೇಲೆ ಕ್ರಮ ವಹಿಸಬೇಕು. ಹೆಣ್ಣು ಭ್ರೂಣಹತ್ಯೆ, ಬಾಲ್ಯ ವಿವಾಹದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಬಾಲ್ಯವಿವಾಹ, ಬಾಲ್ಯ ಕಾರ್ಮಿಕ ಪದ್ಧತಿ ಮುಂತಾದ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಲು, ಕಸ ವಿಲೇವಾರಿ, ಹಣ ಉಳಿತಾಯ ಮುಂತಾದ ಸಾರ್ವಜನಿಕ ಉಪಯುಕ್ತ ಕೆಲಸಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಡೆಸಲಾಗುವುದು. ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಇರುತ್ತಾರೆ. ಸಾರ್ವಜನಿಕರು ನೇರವಾಗಿ ಸಂಪರ್ಕಿಸಬಹುದು ಎಂದು ಹೇಳಿದರು.

15 ದಿನಗಳು, ಹಲವು ಕಾರ್ಯಕ್ರಮಗಳು:

15 ದಿನಗಳ ಕಾಲ ಪ್ರತಿದಿನ ಸಂಜೆ 4 -5 ಗಂಟೆಯವರೆಗೆ ಹಲವು ಅರಿವು ಮೂಡಿಸುವ ಜಾಗೃತಿ ಕಾರ್‍ಯಕ್ರಮಗಳನ್ನು ನಡೆಸಲಾಗುವುದು. ಜೂ.13 ರಂದು ಕಸ ವಿಲೇವಾರಿ, ಒಣ ಮತ್ತು ಹಸಿ ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜೂ.14ರಂದು ಹಣಕಾಸು ನಿರ್ವಹಣೆ ಬಗ್ಗೆ ಜಾಗೃತಿ, ಜೂ.15 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನಸಂಪರ್ಕ ಸಭೆ., ಜೂ.18ರಂದು ಆರೋಗ್ಯದ ಬಗ್ಗೆ ಅರಿವು, ಜೂ.19ರಂದು ಪಿಡಿಒಗಳು, ಗ್ರಾಪಂ ಸದಸ್ಯರಿಗೆ ಬ್ಲಾಕ್ ಹಂತದಲ್ಲಿ ಕೆಲಸಮಾಡುವುದು, ನರೇಗಾ ಯೋಜನೆ ಕಾರ್‍ಯಕ್ರಮಗಳ ಅನುಷ್ಠಾನಗೊಳಿಸುವ ಬಗ್ಗೆ ಜಾಗೃತಿ, ಜೂ.20ರಂದು ಅಬಕಾರಿ ಇಲಾಖೆಯಿಂದ ಜನರಿಗೆ ಅರಿವು ಮೂಡಿಸುವ ಕಾರ್‍ಯಕ್ರಮ. ಜೂ.21ರಂದು ನೀರು ನಿರ್ವಹಣೆ ಬಗ್ಗೆ ಅರಿವು, ಜೂ.22ರಂದು ವಾತಾವರಣ ಕುರಿತು ಜಾಗೃತಿ, ಜೂ.23ರಂದು ವಿದ್ಯಾರ್ಥಿಗಳಿಗೆ ಸಾಪ್ಟ್ ಸ್ಕಿಲ್ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಶ್ರೇಯಸ್, ಗ್ರೇಡ್-1 ತಹಸೀಲ್ದಾರ್ ಸಂತೋಷ್, ತಾಪಂ ಆಡಳಿತಾಧಿಕಾರಿ ಅಶೋಕ್, ಇಒ ಲೋಕೇಶ್‌ಮೂರ್ತಿ, ಗ್ರಾಪಂ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ದೇವಿಕ ಸೇರಿ ಎಲ್ಲಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.