ಜನರ ಜೀವನ ಮಟ್ಟ ಅರಿಯಲು ಸರ್ಕಾರಿ ಅಧ್ಯಯನ

| N/A | Published : Jun 30 2025, 12:35 AM IST / Updated: Jun 30 2025, 09:54 AM IST

ಸಾರಾಂಶ

ಜಾತಿ ಆಧಾರಿತ ಜನಗಣತಿ, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಜತೆಗೆ ಇದೀಗ ಮತ್ತೊಂದು ವರದಿ ಸಿದ್ಧಪಡಿಸಲು ಮುಂದಾಗಿರುವ ಸರ್ಕಾರ, ರಾಜ್ಯದ ಜನರ ಜೀವನ ಮಟ್ಟವನ್ನು ಗುರುತಿಸುವ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಸಲು ಸಿದ್ಧತೆ ಮಾಡಿಕೊಂಡಿದೆ.

ಗಿರೀಶ್‌ ಗರಗ 

ಬೆಂಗಳೂರು :  ಜಾತಿ ಆಧಾರಿತ ಜನಗಣತಿ, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಜತೆಗೆ ಇದೀಗ ಮತ್ತೊಂದು ವರದಿ ಸಿದ್ಧಪಡಿಸಲು ಮುಂದಾಗಿರುವ ಸರ್ಕಾರ, ರಾಜ್ಯದ ಜನರ ಜೀವನ ಮಟ್ಟವನ್ನು ಗುರುತಿಸುವ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಸಲು ಸಿದ್ಧತೆ ಮಾಡಿಕೊಂಡಿದೆ.ಜನರ ಸಾಮಾಜಿಕ, ಶೈಕ್ಷಣಿಕ ಮಾನದಂಡ ಅರಿಯುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಜಾತಿ ಆಧಾರಿತ ಜನಗಣತಿಯ ಮರುಸಮೀಕ್ಷೆಗೆ ಮುಂದಾಗಿದೆ. 

ಅದರ ಜತೆಗೆ ಒಳಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನೂ ಮಾಡಲಾಗುತ್ತಿದೆ. ಅದರ ಜತೆಜತೆಗೆ ಜಿಲ್ಲಾ ಮಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜಿಲ್ಲೆಗಳ ಸಮಸ್ಯೆಗಳು ಮತ್ತು ಅದರ ನಿವಾರಣಾ ಕ್ರಮಗಳು ಸೇರಿದಂತೆ ಮತ್ತಿತರ ಅಂಶಗಳನ್ನೊಳಗೊಂಡ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025-26 ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, 2026ರ ಜನವರಿ ವೇಳೆಗೆ ವರದಿ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. 

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಜಿಲ್ಲಾ ಮಾನವ ಅಭಿವೃದ್ಧಿ ವರದಿ ಸಿದ್ಧಪಡಿಸಲು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದೆ. ವರದಿ ಸಿದ್ಧಪಡಿಸಲು ಪ್ರತಿ ಜಿಲ್ಲೆಗೆ ತಲಾ 20 ಲಕ್ಷ ರು.ಗಳಂತೆ 6.20 ಕೋಟಿ ರು. ಅನುದಾನ ಒದಗಿಸಲಾಗುತ್ತಿದೆ. ಅದರಲ್ಲಿ ಈಗಾಗಲೇ ಎಲ್ಲ 31 ಜಿಲ್ಲೆಗಳಿಗೂ ತಲಾ 10 ಲಕ್ಷ ರು.ಗಳಂತೆ 3.10 ಕೋಟಿ ರು.ಗಳನ್ನೂ ನೀಡಲಾಗಿದೆ. ಜತೆಗೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದ ಮೂಲಕ ಸೂಚನೆಯನ್ನೂ ನೀಡಲಾಗಿದೆ.

ಯಾವೆಲ್ಲ ಅಂಶಗಳ ಪತ್ತೆ? : ಜಿಲ್ಲಾ ಮಾನವ ಅಭಿವೃದ್ಧಿ ವರದಿಯಲ್ಲಿ ಆಯಾ ಜಿಲ್ಲೆಯ ಜನರ ಜೀವನ ಮಟ್ಟ, ಶಿಕ್ಷಣ, ಆರೋಗ್ಯದ ಸರಾಸರಿ, ಜಿಲ್ಲೆಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜಿಲ್ಲೆಗಳ ಸಮಸ್ಯೆಗಳು ಮತ್ತು ನಿವಾರಣಾ ಕ್ರಮ ಹಾಗೂ ಯಶೋಗಾಥೆಯಂತಹ ಅಂಶಗಳಿರಲಿವೆ. ಅದರಲ್ಲೂ ಜಿಲ್ಲೆಯಲ್ಲಿ ಶಾಲೆಗೆ ಹೋಗುವ ಮಕ್ಕಳ ಪ್ರಮಾಣ, ವಿದ್ಯಾವಂತ ಜನರ ಸಂಖ್ಯೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಆರೋಗ್ಯದಲ್ಲಿ ಶಿಶು ಮರಣ ಪ್ರಮಾಣ, ತಾಯಂದಿರ ಮರಣ ಪ್ರಮಾಣ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಮತ್ತಿತರ ಅಂಶಗಳನ್ನು ಗಮನಿಸಲಾಗುತ್ತದೆ.

ಜನರ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಅಳತೆ ಮಾಡಲಿದ್ದು, ಬಡತನ ರೇಖೆಗಿಂತ ಕೆಳಗಿರುವ ಜನರ ಪ್ರಮಾಣ, ಬಡತನಕ್ಕೆ ಮುಖ್ಯ ಕಾರಣಗಳನ್ನು ವಿಶ್ಲೇಷಿಸಲಾಗುತ್ತದೆ. ಜತೆಗೆ ಜಿಲ್ಲೆಯ ಜನರ ಸರಾಸರಿ ಆದಾಯ ಮತ್ತು ಆದಾಯ ಹಂಚಿಕೆಯ ವಿವರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಜಿಲ್ಲೆಗಳ ರ್‍ಯಾಂಕಿಂಗ್‌ ನಿರ್ಧರಿಸಲಾಗುತ್ತದೆ.

ವರದಿಯಿಂದೇನು ಲಾಭ? ಜಿಲ್ಲಾ ಮಾನವ ಅಭಿವೃದ್ಧಿ ವರದಿಯಿಂದ ಜಿಲ್ಲೆಗಳ ಅಭಿವೃದ್ಧಿಯ ಪ್ರಮಾಣ, ಅಲ್ಲಿರುವ ಸಮಸ್ಯೆಗಳನ್ನು ಅರಿಯಲು ಸಹಕಾರಿಯಾಗಲಿದೆ. ಜತೆಗೆ ಶೈಕ್ಷಣಿಕ ಮಟ್ಟ, ಆರೋಗ್ಯ ಮಟ್ಟವನ್ನು ವೃದ್ಧಿಸಲು ಯಾವೆಲ್ಲ ಅಂಶಗಳ ಮೇಲೆ ಕೆಲಸ ಮಾಡಬೇಕು ಎಂಬ ನಿಖರ ಮಾಹಿತಿ ದೊರೆಯಲಿದೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ಬಡತನ, ಅಸಮಾನತೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಜುಲೈನಿಂದ ದತ್ತಾಂಶ ಸಂಗ್ರಹ : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ನಿಗದಿ ಮಾಡಿರುವ ಕಾಲಮಿತಿಯಂತೆ ಜುಲೈನಿಂದ ಸೆಪ್ಟೆಂಬರ್‌ ತಿಂಗಳವರೆಗೆ ಇಲಾಖಾವಾರು ದತ್ತಾಂಶಗಳನ್ನು ಕಲೆಹಾಕುವ, ಕ್ರೋಢೀಕರಿಸುವ ಹಾಗೂ ವಿಶ್ಲೇಷಿಸಿ, ಸೂಚ್ಯಂಕವನ್ನು ಅಂತಿಮಗೊಳಿಸುವ ಕಾರ್ಯ ಮಾಡಲಾಗುತ್ತದೆ. ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025ಕ್ಕೆ ಸಂಬಂಧಿಸಿದಂತೆ ಅಧ್ಯಾಯಗಳನ್ನು ಸಿದ್ಧಪಡಿಸಲಾಗುತ್ತದೆ.

 ಡಿಸೆಂಬರ್‌ನಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025ರ ಕರಡು ವರದಿಯನ್ನು ಅಂತಿಮಗೊಳಿಸಿ, ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಅದಾದ ಒಂದು ತಿಂಗಳಲ್ಲಿ ಅಂದರೆ 2026ರ ಜನವರಿಯಲ್ಲಿ ಅಂತಿಮಗೊಳಿಸಿದ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025ನ್ನು ಜಿಲ್ಲಾ ಯೋಜನಾ ಸಮಿತಿಯಲ್ಲಿ ಅನುಮೋದನೆ ಪಡೆದು ಬಿಡುಗಡೆ ಮಾಡಲಾಗುತ್ತದೆ.

Read more Articles on