ಗೋವಿಂದ ಕಾರಜೋಳರಿಗೆ ಲಕ್ಷ ಮತಗಳ ಅಂತರದ ಗೆಲುವು

| Published : Apr 21 2024, 02:19 AM IST

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸುವುದು ನಮ್ಮ ಗುರಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ತಿಳಿಸಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸುವುದು ನಮ್ಮ ಗುರಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಕೋಟೆ ರಸ್ತೆಯಲ್ಲಿನ ಕಾಳಮ್ಮ ದೇವಾಲಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸಿ ಪ್ರಚಾರ ಕಾರ್ಯವನ್ನು ಆರಂಭಿಸಿ ನಂತರ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರಾದ ದೇವೇಗೌಡರವರು ಮತ್ತು ರಾಜ್ಯ ನಾಯಕರಾದ ಕುಮಾರಸ್ವಾಮಿ ಯವರು ಬಿಜೆಪಿಯ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಪಕ್ಷ ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ರವರ ಪರವಾಗಿ ಪ್ರಚಾರವನ್ನು ಮಾಡುವುದಲ್ಲದೆ ಅವರ ಗೆಲುವಿಗಾಗಿ ಶ್ರಮ ಹಾಕಲಿದೆ ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 8 ಕ್ಷೇತ್ರಗಳಿದ್ದು ಇದರಲ್ಲಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿಯೊಂದಿಗೆ ನಮ್ಮ ಪಕ್ಷ ಸಾಥ್ ನೀಡಲಿದೆ. ಎಂಟು ಕ್ಷೇತ್ರದಲ್ಲಿಯೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಗೆಲುವಿಗೆ ತಮ್ಮ ಶ್ರಮವನ್ನು ಹಾಕಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಮತದಾರ ಕೇಂದ್ರ ದಲ್ಲಿ ಮೋದಿಯವರೇ ಇರಬೇಕು ಎಂದು ಆಸೆಪಟ್ಟಿದ್ದಾನೆ. ಕಳೆದ ಎರಡು ಬಾರಿ ಮೋದಿಯವರು ಪ್ರಧಾನ ಮಂತ್ರಿಯಾಗಿ ಹಲವಾರು ಅಭೀವೃದ್ಧಿ ಕಾರ್ಯವನ್ನು ಮಾಡಿದ್ದಾರೆ ಮುಂದೆ ಇವರೇ ಪ್ರಧಾನ ಮಂತ್ರಿಯಾದರೆ ದೇಶ ಮತ್ತಷ್ಟು ಅಭೀವೃದ್ಧಿ ಹೊಂದಲಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮತದಾರ ಕೇಂದ್ರದಲ್ಲಿ ಮೋದಿಯನ್ನು ಪ್ರಧಾನ ಮಂತ್ರಿಯಾಗಿ ನೋಡಲು ಬಯಸಿದ್ದರಿಂದ ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧ್ಯ ವಾಗಲಿದೆ ಎಂದು ಕಾಂತರಾಜ್ ಭವಿಷ್ಯ ನುಡಿದರು.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಂದಾಗಿ ಬೀದಿಗಿಳಿದು ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಇಬ್ಬರೂ ಅಭ್ಯರ್ಥಿಗಳು ಕಣದಲ್ಲಿದ್ದು ಗಣನೀಯ ಮತ ಪಡೆದಿದ್ದರು. ಎರಡೂ ಪಕ್ಷಗಳು ಒಟ್ಟಾಗಿರುವುದರಿಂದ ಎಲ್ಲ ಮತಗಳು ನಮಗೆ ಬರುತ್ತವೆ. ತುಸುವೇ ಶ್ರಮ ಹಾಕಿದ್ದಲ್ಲಿ ಬಿಜೆಪಿ ಗೆಲವು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಕಾಂತರಾಜ್ ಹೇಳಿದರು.

ನಗರಸಭಾ ಸದಸ್ಯರಾದ ವೆಂಕಟೇಶ್, ತಿಪ್ಪಮ್ಮ ವೆಂಕಟೇಶ್, ಶಶಿಧರ್, ಭಾಸ್ಕರ್, ಹರೀಶ್, ತಾರಕೇಶ್ವರಿ, ಭಾಗ್ಯಮ್ಮ, ವಿರೇಶ್, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯ್ಕ್, ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ಮಂಜುನಾಥ್, ಬಿಜೆಪಿ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯ ಲಿಂಗರಾಜು ಸೇರಿ ದಂತೆ ಇತರರು ಭಾಗವಹಿಸಿದ್ದರು. ಚಿತ್ರದುರ್ಗ ನಗರಸಭೆಯ 1ರಿಂದ 5ನೇ ವಾರ್ಡ್‌ವರೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ರವರ ಪರವಾಗಿ ಮತಯಾಚನೆ ಮಾಡಿದರು.