ಸಾರಾಂಶ
ಬಸವರಾಜ ಹಿರೇಮಠ
ಶಿಗ್ಗಾಂವಿ: ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ನಮ್ಮ ಪರಿಸ್ಥಿತಿ... ಇದು ತಾಲೂಕಿನಲ್ಲಿ ಹಸಿ ಮೆಣಸಿನಕಾಯಿ ಬೆಳೆದಿರುವ ರೈತರ ಗೋಳು. ತಾಲೂಕಿನ ನೂರಾರು ರೈತರು ಸಾಲ ಮಾಡಿ ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮೆಣಸಿನಕಾಯಿ ಉದುರಿ ಬಿದ್ದಿದೆ. ಇನ್ನೊಂದೆಡೆ ಇದ್ದ ಬೆಳೆಗೂ ಬೆಲೆ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.ತಾಲೂಕಿನಲ್ಲಿ ಈ ಬಾರಿ ಮೆಣಸಿನಕಾಯಿ ಬೆಳೆಯನ್ನು ಸುಮಾರು ೭೩೮ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಟಾವು ಹಂತದಲ್ಲಿ ಇದ್ದಾಗ ಭಾರಿ ಮಳೆಯಿಂದ ಮೆಣಸಿನಕಾಯಿಗಳು ಉದುರಿ ಬೀಳುತ್ತಿವೆ. ಸತತವಾಗಿ ಒಂದು ವಾರದಿಂದ ಬಿಡದೆ ಸುರಿದ ಮಳೆಗೆ ತಾಲೂಕಿನಾದ್ಯಂತ ಮೆಣಸಿನಕಾಯಿ ಬೆಳೆಗಾರರು ತತ್ತರಿಸಿದ್ದಾರೆ.ತಾಲೂಕಿನ ದುಂಡಶಿ ಹೋಬಳಿಯ ಹೊಸೂರ, ಚಂದಾಪುರ, ಕೋಣನಕೇರಿ, ಯತ್ತಿನಹಳ್ಳಿ, ಮಮದಾಪೂರ, ಮಡ್ಲಿ ಕುನ್ನೂರ ಗ್ರಾಮಗಳ ಹಲವು ರೈತರು ಮೆಣಸಿನಕಾಯಿ ಬೆಳೆಯನ್ನು ಎರಡು ತಿಂಗಳ ಹಿಂದೆ ನಾಟಿ ಮಾಡಿದ್ದರು. ಹಸಿ ಮೆಣಸಿನಕಾಯಿ ಕೆಲವು ದಿನಗಳಲ್ಲೇ ಕಟಾವು ಮಾಡುವ ಹಂತದಲ್ಲಿತ್ತು. ಆಗ ಬಿಡದೆ ಸುರಿದ ಮಳೆಯಿಂದ ಸಾಕಷ್ಟು ಹಾನಿ ಮಾಡಿದೆ.ಹಸಿ ಮೆಣಸಿನಕಾಯಿ ದರವು ಈ ವರ್ಷ 1 ಕ್ವಿಂಟಲ್ಗೆ ₹೬ ರಿಂದ ₹೭ ಸಾವಿರ ಇದೆ. ಉತ್ತಮ ಫಸಲನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರು ಹಗಲುಗನಸನ್ನು ಕಾಣುವಂತಾಗಿದೆ. ಎರಡು ತಿಂಗಳ ಹಿಂದೆ ಒಂದು ಹೆಕ್ಟೇರ್ ಪ್ರದೇಶಕ್ಕೆ ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದೇವೆ. ಆದರೆ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಹೊಸೂರು ಗ್ರಾಮದ ರೈತ ಶಿವಣ್ಣ ತಮ್ಮ ಅಳಲು ತೋಡಿಕೊಂಡರು.ಸಮೃದ್ಧವಾಗಿ ಬೆಳೆದಿದ್ದ ಬೆಳೆಯು ಸತತ ಮಳೆಗೆ ಹಸಿ ಮೆಣಸಿನಕಾಯಿ ಉದುರಿವೆ. ಗಿಡದ ಎಲೆಗಳೂ ಬೋಳಾಗಿ ನಿಂತಿವೆ. ಸಾಲ ಮಾಡಿ ಹಾಕಿರುವ ಹಣವೂ ಕೈಗೆ ಬರುತ್ತಿಲ್ಲ. ಒಂದು ಎಕರೆಗೆ ₹೪೦ರಿಂದ ₹೫೦ ಸಾವಿರ ಖರ್ಚು ಮಾಡಿದ್ದು, ಸರ್ಕಾರ ಮೆಣಸಿನಕಾಯಿ ಬೆಳೆದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ರೈತರಾದ ಅರ್ಜಪ್ಪ ಲಮಾಣಿ, ಡಾಕಪ್ಪ, ಯಲ್ಲಪ್ಪ, ದೇವಣ್ಣ, ಖೀಮಣ್ಣ ಆಗ್ರಹಿಸಿದರು.
ಜಂಟಿ ಸಮೀಕ್ಷೆ: ರೈತರಿಗೆ ಪರಿಹಾರ ನೀಡುವ ಕುರಿತು ಮೇಲಧಿಕಾರಿಗಳ ಜತೆ ಚರ್ಚಿಸಲಾಗುವುದು. ಅಲ್ಲದೆ ಮೆಣಸಿಕಾಯಿ ಬೆಳೆಯನ್ನು ತಹಸೀಲ್ದಾರರು, ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡುತ್ತಿದ್ದು, ತಕ್ಷಣ ಹಾನಿಗೊಳಗಾದ ಕುರಿತು ಸರ್ಕಾರಕ್ಕೆ ವರದಿ ನೀಡಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಿಶೋರ ನಾಯ್ಕ ತಿಳಿಸಿದರು.ಸರ್ಕಾರಕ್ಕೆ ವರದಿ: ತಾಲೂಕಿನಲ್ಲಿ ಹಸಿ ಮೆಣಸಿಕಾಯಿಯನ್ನು ಸಾಕಷ್ಟು ರೈತರು ಬೆಳೆದಿದ್ದು, ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದ್ದು, ಈ ಕುರಿತು ಸಮೀಕ್ಷೆ ಮಾಡುತ್ತಿದ್ದು, ವರದಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು. ರೈತರಿಗೆ ಪರಿಹಾರ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು.