ಗೃಹಜ್ಯೋತಿ: ಉತ್ತರ ಕನ್ನಡ ಶೇ.100 ಸಾಧನೆ

| Published : Feb 22 2024, 01:47 AM IST

ಸಾರಾಂಶ

ಗೃಹ ಬಳಕೆಗಾಗಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಯಡಿ ಅರ್ಹ ಎಲ್ಲ ಕುಟುಂಬಗಳನ್ನು ನೋಂದಣಿ ಮಾಡಿ, ಶೇ. 100ರಷ್ಟು ಹೆಸ್ಕಾಂ ಗುರಿ ಸಾಧಿಸಿದೆ.

ಕಾರವಾರ:

ಗೃಹ ಬಳಕೆಗಾಗಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಯಡಿ ಅರ್ಹ ಎಲ್ಲ ಕುಟುಂಬಗಳನ್ನು ನೋಂದಣಿ ಮಾಡಿ, ಶೇ. 100ರಷ್ಟು ಹೆಸ್ಕಾಂ ಗುರಿ ಸಾಧಿಸಿದೆ ಎಂದು ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಎಂಜಿನಿಯರ್ ದೀಪಕ ಕಾಮತ್ ತಿಳಿಸಿದ್ದಾರೆ.ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿದ್ದು, ಜಿಲ್ಲೆಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಿರುವ 3,76,419 ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ನೋಂದಣಿ ಮಾಡಿ ಅವರಿಗೆ ಶೂನ್ಯ ದರದ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.ಭಾಗ್ಯಜ್ಯೋತಿ, ಕುಟೀರ ಜ್ಯೋತಿ (ಎಲ್‌ಟಿ1) ಮತ್ತು ಗೃಹಬಳಕೆಯ (ಎಲ್‌ಟಿ1) ಸೇರಿದಂತೆ ಒಟ್ಟೂ 4,21,599 ಮೀಟರ್‌ಗಳಿದ್ದು ಇದರಲ್ಲಿ ಯೋಜನೆಗೆ ಅರ್ಹವಾಗಿಲ್ಲದ ಮೀಟರ್‌ ಸಂಖ್ಯೆ 30,490 ಮತ್ತು ವಿವಿಧ ಕಾರಣಗಳಿಂದ ನೋಂದಣಿ ತಿರಸ್ಕರಿಸಿದ ಮತ್ತು ನೋಂದಣಿಗೆ ಆಸಕ್ತಿ ತೋರದ ಗ್ರಾಹಕರ ಸಂಖ್ಯೆ 14,690 ಆಗಿದೆ. ಬಾಕಿ ಉಳಿದ 3,76,419 ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದಿದ್ದಾರೆ.ಶಿರಸಿ ವಿಭಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ವ್ಯಾಪ್ತಿಯಲ್ಲಿ 1,23,427, ದಾಂಡೇಲಿ ವಿಭಾಗದ ದಾಂಡೇಲಿ ಮತ್ತು ಹಳಿಯಾಳ ವ್ಯಾಪ್ತಿಯಲ್ಲಿ 55,077, ಕಾರವಾರ ವ್ಯಾಪ್ತಿಯ ಕಾರವಾರ, ಅಂಕೋಲ, ಸದಾಶಿವಗಡದಲ್ಲಿ 31,801, ಹೊನ್ನಾವರ ವಿಭಾಗದ ಹೊನ್ನಾವರ, ಕುಮಟಾ, ಭಟ್ಕಳದಲ್ಲಿ 1,19,600 ಅರ್ಹ ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಲಾಗಿದೆ. ಒಟ್ಟೂ 4,21,599 ವಿದ್ಯುತ್ ಮೀಟರ್‌ಗಳಿದ್ದು ಅವುಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಹವಿಲ್ಲದ, 200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಕುಟುಂಬಗಳ ಸಂಖ್ಯೆ 12,887, ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳ ಸಂಖ್ಯೆ 2,369, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಟ್ಟಡಗಳ ಸಂಖ್ಯೆ 5,140, ನೋಂದಣಿಗೆ ಆಸಕ್ತಿ ತೋರದ ಮತ್ತು ನೋಂದಣಿಯನ್ನು ತಿರಸ್ಕರಿಸಿರುವ ಗ್ರಾಹಕರ ಸಂಖ್ಯೆ 11,409, ಖಾಲಿ ಮನೆ/ಎರಡಕ್ಕಿಂತ ಹೆಚ್ಚು ಮನೆ ಹೊಂದಿರುವ 10,094 ಮೀಟರ್‌ ಸೇರಿದಂತೆ 41,899 ಮೀಟರ್‌ ಗೃಹಜ್ಯೋತಿ ಯೋಜನೆಯಲ್ಲಿ ನೋಂದಣಿಗೆ ಅರ್ಹವಾಗಿಲ್ಲ ಎಂದು ಹೇಳಿದ್ದಾರೆ.

ಗೃಹಜ್ಯೋತಿ ಯೋಜನೆ ಜಾರಿಯಾದ ದಿನದಿಂದ ಜನವರಿ 2024ರ ವರೆಗೆ ಜಿಲ್ಲೆಯಲ್ಲಿ ಹೆಸ್ಕಾಂನಿಂದ ₹ 100 ಕೋಟಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದೆ. ಶಿರಸಿ ವಿಭಾಗದಲ್ಲಿ ₹ 27.66 ಕೋಟಿ, ದಾಂಡೇಲಿ ವಿಭಾಗದಲ್ಲಿ ₹ 11.45 ಕೋಟಿ, ಕಾರವಾರ ವಿಭಾಗದಲ್ಲಿ ₹ 23.45 ಕೋಟಿ ಹಾಗೂ ಹೊನ್ನಾವರ ವಿಭಾಗದಲ್ಲಿ ₹ 37.75 ಕೋಟಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ ಎಂದು ವಿವರಿಸಿದ್ದಾರೆ.ಗೃಹಜ್ಯೋತಿ ಯೋಜನೆಯನ್ನು ಜಿಲ್ಲೆಯಲ್ಲಿ ಶೇ. 100ರಷ್ಟು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಸ್ಕಾಂ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲಾಖೆಯ ಮೀಟರ್ ರೀಡರ್ ಮತ್ತು ಲೈನ್‌ಮೆನ್ ಮೂಲಕ ಜಿಲ್ಲೆಯ ಪ್ರತಿ ಮನೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ನೀಡಿ ಹಾಗೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಕ್ಯಾಂಪ್ ಆಯೋಜಿಸಿ ನೋಂದಣಿಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಪ್ರಸ್ತುತ ನೋಂದಣಿಗೆ ಅರ್ಹವಾಗಿಲ್ಲದ ಖಾಲಿ ಮನೆ ಮತ್ತು ಎರಡಕ್ಕಿಂತ ಹೆಚ್ಚು ಮನೆಗಳ ಗ್ರಾಹಕರ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅರ್ಹ ಗ್ರಾಹಕರು ಹಾಗೂ ಯೋಜನೆಗೆ ನಿರಾಸಕ್ತಿ ತೋರಿರುವವರನ್ನು ಗೃಹಜ್ಯೋತಿ ಯೋಜನೆಗೆ ವ್ಯಾಪ್ತಿಗೆ ತರುವ ಕುರಿತಂತೆ ಗರಿಷ್ಠ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ದೀಪಕ್‌ ಕಾಮತ್‌ ಹೇಳಿದ್ದಾರೆ.