ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ರೈತರು ಅಡಕೆ ಬೆಳೆ ಜೊತೆ ಮಿಶ್ರ ಬೆಳೆ ಬೆಳೆಯುವುದರಿಂದ ಅಧಿಕ ಲಾಭಗಳಿಸಲು ಸಾಧ್ಯ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ್ ತಿಳಿಸಿದರು.ಅವರು ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ಆವರಣದಲ್ಲಿ ರೈತರ ಅಡಕೆ ಬೆಳೆಯಲ್ಲಿ ಸಮಗ್ರ ಬೇಸಾಯ ಪದ್ಧತಿ ಹಾಗೂ ರೋಗ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ರೈತರಿಗೆ ಹಮ್ಮಿಕೊಳ್ಳಲಾದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ರೈತರು ಅಡಕೆ ಒಂದನ್ನೇ ಕೃಷಿಯಾಗಿಟ್ಟುಕೊಂಡು ಹೆಚ್ಚಿನ ಲಾಭಗಳಿಸದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಡಕೆ ಬೆಳೆ ಜೊತೆಯಲ್ಲಿ ವಿವಿಧ ವಾಣಿಜ್ಯ ಮಿಶ್ರ ಬೆಳೆಗಳಾದ ವೀಳ್ಯದೆಲೆ, ಕಾಳು ಮೆಣಸು, ಜಾಯಿಕಾಯಿ, ಅರಿಶಿಣ, ಲಾವಂಗ, ಕಾಫಿ, ಏಲಕ್ಕಿ ಇದರ ಜೊತೆಗೆ ಅಡಕೆ ತೋಟದ ಸುತ್ತ ಹಲಸು, ಮಾವು, ಗೇರು, ಪೇರಲೆ ಸೇರಿ ಅನೇಕ ಬೆಳೆ ಬೆಳೆಯಬಹುದು ಇದರಿಂದ ರೈತರು ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ. ಹಾಗೂ ಕೀಟ ಬಾಧೆಗೆ ಸೂಕ್ತ ಸಮಯದಲ್ಲಿ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಔಷಧಿ ಸಿಂಪಡಣೆ ಮಾಡಬೇಕು. ಪ್ರತಿಯೊಬ್ಬ ಅಡಕೆ ಬೆಳೆಯುವ ರೈತರು ಮಿಶ್ರ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಮಾತ್ರ ಆರ್ಥಿಕವಾಗಿ ಅಧಿಕ ಲಾಭಗಳಿಕೆ ಮಾಡಲು ಸಾಧ್ಯ ಎಂದರು.
ಕುಲಸಚಿವ ಕೆ.ಸಿ ಶಶಿಧರ್, ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕ ಹೇಮ್ಲಾ ನಾಯಕ್, ವಿಸ್ತರಣಾ ನಿರ್ದೇಶಕ ಡಾ. ಕೆ. ಟಿ ಗುರುಮೂರ್ತಿ, ರೈತ ತರಬೇತಿ ಸಂಸ್ಥೆ ಮುಖ್ಯಸ್ಥರಾದ ಡಾ. ಬಿ.ಕೆ ಶಿವಣ್ಣ, ಸಹ ವಿಸ್ತರಣಾಧಿಕಾರಿ ಹನುಮಂತ ಸ್ವಾಮಿ, ಅಡಿಕೆ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಅಡಿವೆಪ್ಪರ್. ಉಪಸ್ಥಿತರಿದ್ದು ನೂರಾರು ರೈತರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.