ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ನರಸಿಂಹ ಪಂಡಿತ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕಿನ ಗುಣವಂತೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ, ಧರ್ಮಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ, ಧಾರ್ಮಿಕ ಪ್ರವಚನ, ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಏ.10ರಿಂದ ಏ.19ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ನರಸಿಂಹ ಪಂಡಿತ ಮತ್ತು ಇತರ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ದಿ. ಆರ್.ಎನ್. ಶೆಟ್ಟಿ ಅವರ ಸುಪುತ್ರ ಸುನಿಲ್ ಶೆಟ್ಟಿ ಬಹುಕೋಟಿ ವೆಚ್ಚದಲ್ಲಿ ಶಿಲಾಮಯ ಕಟ್ಟಡವನ್ನು ನಿರ್ಮಿಸಿ, ಲೋಕಾರ್ಪಣೆ ಮಾಡುತ್ತಿರುವುದು ಶಿವ ಭಕ್ತರಿಗೆ ಸಂಭ್ರಮ ತಂದಿದೆ. ಏಪ್ರಿಲ್ 10ರಿಂದ ಆರಂಭಗೊಳ್ಳುವ ದೇವತಾ ಕಾರ್ಯಗಳು ಏ. 19ರ ವರೆಗೆ ಪ್ರತಿದಿನ ನಡೆಯಲಿದೆ. ಪ್ರತಿದಿನ ಸಂಜೆ ನಾಡಿನ ಖ್ಯಾತ ವಾಗ್ಮಿಗಳಿಂದ ಭಾಷಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನಗಳು ಕಾರ್ಯಕ್ರಮ ನಡೆಯಲಿದೆ.19ರಂದು ಅಭಿನಂದನಾ ಸಮಾರಂಭ ನಡೆಯಲಿದೆ. ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ, ಕಾಗೇರಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಶಾಸಕ ಭೀಮಣ್ಣ ನಾಯ್ಕ, ಶಾಸಕ ದಿನಕರ ಶೆಟ್ಟಿ, ಮತ್ತು ಮಾಜಿ ಶಾಸಕ ಸುನೀಲ್ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವೈಭವದ ಭಾಗವಾಗಿ ಊರ ನುರಿತ ಕಲಾವಿದರಿಂದ ನಾಟಕ ಮತ್ತು ಯಕ್ಷಗಾನ ಪ್ರಸ್ತುತಿಯೊಂದಿಗೆ ಮಹಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯ ಗೋವಿಂದ ಗೌಡ, ಎಂ.ಎಸ್. ಹೆಗಡೆ, ಎಂ.ವಿ. ಹೆಗಡೆ, ಶಿವಾನಂದ ನಾಯ್ಕ, ಶಿವಾನಂದ ಗೌಡ, ಎಂ.ಆರ್. ಹೆಗಡೆ ಉಪಸ್ಥಿತರಿದ್ದರು.