ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿರುವ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ಕೊನೆ ದಿನ ರಾಯರ ವರ್ಧಂತೋತ್ಸ ನಿಮಿತ್ತ ಶನಿವಾರ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಲಿಯುಗ ಕಲ್ಪತರು ಶ್ರೀಗುರುರಾಯರ 429ನೇ ವರ್ಧಂತೋತ್ಸವ ಹಿನ್ನೆಲೆಯಲ್ಲಿ ನಸುಕಿಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ ಸೇವೆ, ವಿದ್ವಾಂಸರಿಂದ ಪ್ರವಚನ, ಶ್ರೀಗುರುರಾಯರ ಮೂಲ ಬೃಂದಾವನಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಪಂಚಾಮೃತ ಅಭಿಷೇಕ, ರಥೋತ್ಸವ, ಶ್ರೀಮೂಲರಾಮದೇವರಿಗೆ ಮಹಾಸಂಸ್ಥಾನ ಪೂಜೆ ಹಾಗೂ ನಾದಹಾರ ಸೇವೆ ಸೇರಿ ಮೊದಲಾದ ಕಾರ್ಯಕ್ರಮಗಳು ನಡೆದವು.
ಪ್ರತಿವರ್ಷದ ಸಂಪ್ರದಾಯದಂತೆ ವರ್ಧಂತಿ ಉತ್ಸವದ ವೇಳೆ ತಿರುಮಲ ತಿರುಪತಿ ದೇವಸ್ಥಾನದಿಂದ ತರಲಾಗಿದ್ದ ಶೇಷವಸ್ತ್ರವನ್ನು ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.ಟಿಟಿಡಿ ಜೆಇಒ ವೀರಬ್ರಹ್ಮಮ್ ಅವರು ಶ್ರೀವಾರಿ ಪ್ರಸಾದ ರೂಪದ ಶ್ರೀವಾರಿ ವಸ್ತ್ರವನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ಬಳಿಕ ಶ್ರೀ ವೆಂಕಟೇಶ್ವರ ದೇವರ ಶೇಷವಸ್ತ್ರವನ್ನು ತಲೆ ಮೇಲೆ ಇರಿಸಿಕೊಂಡು ಪ್ರದಕ್ಷಣೆ ಹಾಕಿ ಶ್ರೀಗಳು ಶ್ರೀಗುರುರಾಯರ ಮೂಲ ಬೃಂದಾನದ ಮುಂದೆಯಿಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಪ್ರಕಾರಾದ ಉಯ್ಯಾಲೆ ಮಂಟಪದಲ್ಲಿ ರಾಯರ ಪ್ರತೀಕದ ಮುಂದೆ ಶ್ರೀವಾರಿ ವಸ್ತ್ರ ಪ್ರಸಾದವನ್ನಿರಿಸಿ ಪೂಜಿಸಿದರು. ಇದೇ ವೇಳೆ ರಾಯರ ಭಕ್ತ ಶ್ರೀನಿವಾಸ ಮೂರ್ತಿಯವರು ಶ್ರೀಬ್ರಹ್ಮ ಕರಾಚಿತ ಶ್ರೀಮೂಲ ರಾಮದೇವರಿಗೆ ದೇಣಿಗೆಯಾಗಿ ನೀಡಿದ ವೈಜಯಂತಿ ವರಮಾಲಾವನ್ನು ಶ್ರೀಗಳು ಸಮರ್ಪಿಸಿ ನೆರೆದ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.ಬಳಿಕ ಶ್ರೀಮಠದ ಪ್ರಾಕಾರದಲ್ಲಿ ನವರತ್ನ ಖಚಿತ ರಥದಲ್ಲಿ ರಾಯರ ರಜತ ಪ್ರತೀಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಯರ ವರ್ಧಂತಿ ದಿನ ಪ್ರತಿ ವರ್ಷದಂತೆ ಈ ಸಲವೂ ನಾದಹಾರ ಸೇವೆ ನಡೆಯಿತು. ಚೆನ್ನೈನ ಶ್ರೀರಾಘವೇಂದ್ರ ಸ್ವಾಮಿ ನಾದಹಾರಂ ಟ್ರಸ್ಟ್ನ 350 ಕಲಾವಿದರು ಏಕಕಾಲದಲ್ಲಿ ವಿವಿಧ ವಾದ್ಯಗಳನ್ನು ನುಡಿಸಿ, ಗಾಯನ ಮಾಡಿ ರಾಯರ ಸ್ಮರಣೆ ಮುಖಾಂತರ ಅವರಿಗೆ ಸಂಗೀತ ಸೇವೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತ ಕೇಸರಿ ರಾಜಾ ಎಸ್.ಗಿರಿರಾಜ ಆಚಾರ್, ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ಸೇರಿದಂತೆ ಪಂಡಿತರು, ವಿದ್ವಾಂಸರು, ಆಡಳಿತಾಧಿಕಾರಿಗಳು, ಸಿಬ್ಬಂದಿ, ಭಕ್ತ ಸಮುದಾಯವು ಭಾಗವಹಿಸಿತ್ತು.ರಾಯರ ದರ್ಶನ ಪಡೆದ ನಟ ಜಗ್ಗೇಶ್: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 429ನೇ ವರ್ಧಂತೋತ್ಸವ ಹಿನ್ನೆಲೆಯಲ್ಲಿ ಚಿತ್ರನಟ ಜಗ್ಗೇಶ ಅವರು ಶ್ರೀಮಠಕ್ಕೆ ಆಗಮಿಸಿದ್ದರು. ಶ್ರೀಗುರುರಾಯರ ಮೂಲಬೃಂದಾವನದ ದರ್ಶನ ಪಡೆದ ಜಗ್ಗೇಶ ಅವರಿಗೆ ಶ್ರೀಗಳು ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.