ಸಾರಾಂಶ
ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಸಂಸ್ಕಾರವಂತನಾಗಲು ಶ್ರೇಷ್ಠ ಗುರುವಿನ ಮಾರ್ಗದರ್ಶನ ಬೇಕು.
ಬಳ್ಳಾರಿ: ಇಲ್ಲಿನ ಬಾಲಭಾರತಿ ವಿದ್ಯಾಶಾಲೆಯ ಆವರಣದಲ್ಲಿ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಹಾಗೂ ವಿಶೇಷ ಕರಾಟೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಸಿದ್ಧಾರೂಢ ಮಠದಸತ್ಚಿದಾನಂದ ಭಾರತಿ ಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಸಂಸ್ಕಾರವಂತನಾಗಲು ಶ್ರೇಷ್ಠ ಗುರುವಿನ ಮಾರ್ಗದರ್ಶನ ಬೇಕು ಎಂದು ಹೇಳಿದರು.
ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ನ ಮುಖ್ಯಸ್ಥರಾದ ಬಂಡ್ರಾಳು ಮೃತ್ಯುಂಜಯಸ್ವಾಮಿಗಳು ವಿದ್ಯಾರ್ಥಿಗಳಿಗೆ ಕರಾಟೆ, ಧ್ಯಾನ ಕಲಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯದ ಚೈತನ್ಯ ತುಂಬುತ್ತಿದ್ದಾರೆ. ಬಾಲಕಿಯರಿಗೆ ಉಚಿತವಾಗಿ ಕರಾಟೆ ಕಲಿಸಿ, ಅವರ ಆತ್ಮರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದಾರೆ. ಈ ರೀತಿಯ ಸತ್ಕಾರ ನಿರಂತರವಾಗಿ ನಡೆಯುವಂತಾಗಬೇಕು. ಮಕ್ಕಳಲ್ಲಿ ದೇಶಪ್ರೇಮ, ನಾಡ ಪ್ರೇಮ ಮೂಡಿಸುವ ಕೆಲಸವೂ ಆಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವಿ. ದೊಡ್ಡಕೇಶವ ರೆಡ್ಡಿ ಕೊರ್ಲಗುಂದಿ ಅವರು ಕರಾಟೆ ಮತ್ತಿತರ ಆತ್ಮರಕ್ಷಣೆಯ ಕೌಶಲ್ಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಜಿ.ಕೆ. ಫೌಂಡೇಶನ್ನ ಅಧ್ಯಕ್ಷ ಜಿ.ಕೆ.ವಿಜಯಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಗುರುಪೂರ್ಣಿಮೆ ಮಹತ್ವ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪಾತ್ರ ಕುರಿತು ತಿಳಿಸಿದರು.ಮುಖಂಡರಾದ ಗುರುಮೂರ್ತಿ, ಸಾಮಾಜಿಕ ಹೋರಾಟಗಾರ ಜೆ.ವಿ. ಮಂಜುನಾಥ್, ಉದ್ಯಮಿ ಕೆ. ಹನುಮನ ಗೌಡ, ತಿಪ್ಪೇಸ್ವಾಮಿ, ಕೋಳೂರು ಪಾಲಾಕ್ಷಿ ಗೌಡ, ಗಾಜುಲು ಆನಂದ, ವಿಶ್ವನಾಥ್ ಸ್ವಾಮಿ ಮತ್ತಿತರರಿದ್ದರು.
ಹಿರಿಯ ಕರಾಟೆ ಶಿಕ್ಷಕರಾದ ಶ್ರೀಹನ್ಸಿ ಅನ್ನಪ್ಪ ಮಾರ್ಕಲ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ ಬಂಗಾರ ಪಡೆದು ಉತ್ತರಕಾಂಡ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ದೆಯಲ್ಲಿ ಉತ್ತಮ ಸಾಧನೆ ಮಾಡಿದ ಟ್ರಸ್ಟ್ನ ವಿದ್ಯಾರ್ಥಿ ಗಗನ್ ಹೆಗಡೆ ಅವರನ್ನು ಶ್ರೀಗಳು ಸನ್ಮಾನಿಸಿ, ಶುಭ ಹಾರೈಸಿದರು.ಟ್ರಸ್ಟ್ನ ಅಧ್ಯಕ್ಷ ಬಂಡ್ರಾಳು ಮೃತ್ಯುಂಜಯಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
ದೀಕ್ಷಾ ಸ್ವಾಮಿ, ಶ್ರೇಯ ಸ್ವಾಮಿ ಹಾಗೂ ಹೆಚ್.ಎಂ. ರವೀಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಜರುಗಿದ ವಿದ್ಯಾರ್ಥಿಗಳ ಕರಾಟೆ ಪ್ರದರ್ಶನ ಹಾಗೂ ಶಿಬಿರದಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.