ಸಾರಾಂಶ
ಮೈಸೂರು ಭಾಗದ ಯಾವುದೇ ವಿಚಾರಗಳನ್ನು ಜನರಿಗೆ ತಿಳಿಸುವಲ್ಲಿ ಪ್ರೊ ಮಲೆಯೂರು ಗುರುಸ್ವಾಮಿ ಪ್ರೌಡಿಮೆ ಮೆರೆದಿದ್ದರು ಎಂದು ಅಂಕಣಕಾರ ಎಸ್. ಲಕ್ಷ್ಮೀನರಸಿಂಹ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಸೂರು ಭಾಗದ ಯಾವುದೇ ವಿಚಾರಗಳನ್ನು ಜನರಿಗೆ ತಿಳಿಸುವಲ್ಲಿ ಪ್ರೊ ಮಲೆಯೂರು ಗುರುಸ್ವಾಮಿ ಪ್ರೌಡಿಮೆ ಮೆರೆದಿದ್ದರು ಎಂದು ಅಂಕಣಕಾರ ಎಸ್. ಲಕ್ಷ್ಮೀನರಸಿಂಹ ಅಭಿಪ್ರಾಯಪಟ್ಟರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಸಾಹಿತಿ ದಿ. ಮಲೆಯೂರು ಗುರುಸ್ವಾಮಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸುವ ಮೂಲಕ ಮಾತನಾಡಿದರು.ಅವರ ಹುಟ್ಟೂರು ಸಮೀಪದ ಕನಕಗಿರಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ನಿಲ್ಲಿಸುವಲ್ಲಿ ಇವರ ಪಾತ್ರ ದೊಡ್ಡದು. ಅವರ ಮಹಾಯಾತ್ರಿಕ ,ಅಪ್ರತಿಮ ವೀರ, ಕಪಿಲೇ ಹರಿದಳು ಕಡಲಿಗೆ ಕೃತಿಗಳು ಬಹುದೊಡ್ಡ ಹೆಸರನ್ನು ತಂದು ಕೊಟ್ಟಿದ್ದು, ನಾಡಿನಲ್ಲೆ ಬಹಳ ಓದುಗರನ್ನು ಸಂಪಾದಿಸಿದ್ದರು. ಸಾಹಿತಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡದ ಸೇವೆಯನ್ನು ಸಲ್ಲಿಸಿದ ಮಲೆಯೂರು ಗುರುಸ್ವಾಮಿಯನ್ನು ಸ್ಮರಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 3 ಬಾರಿ ಜಿಲ್ಲಾಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದವರಲ್ಲಿ ಮಲೆಯೂರು ಗುರುಸ್ವಾಮಿ ಗಣ್ಯರು. ಗಡಿ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡದ ನೆಲ ,ಜಲ, ಭಾಷೆ ಮತ್ತು ಸಾಹಿತ್ಯ, ವಿಚಾರವಂತ ವಿಷಯಗಳನ್ನು ಅಪಾರವಾಗಿ ಸಂಗ್ರಹಿಸಿದ್ದರು. ಯಾವುದೇ ಸಂದರ್ಭದಲ್ಲಿ ವಿಚಾರವನ್ನು ಮಂಡಿಸುವ ಮೂಲಕ ಸಭಿಕರನ್ನು ತಮ್ಮ ಮಾತಿನ ಮೂಲಕ ಗಮನ ಸೆಳೆಯುತ್ತಿದ್ದರು. ಮಗು ಎಂದೇ ಪ್ರಸಿದ್ಧರಾಗಿದ್ದ ಮಲೆಯೂರು ಗುರುಸ್ವಾಮಿ ಅವರ ಸಾಹಿತ್ಯ ಕೃತಿಗಳ ಮೂಲಕ ಮತ್ತು ಅವರ ಕನ್ನಡ ಕಟ್ಟುವಿಕೆಯ ಮೂಲಕ ಸದಾ ಜೀವಂತವಾಗಿದ್ದಾರೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕಹಳೆ ರವಿಚಂದ್ರಪ್ರಸಾದ್, ಶಿವಲಿಂಗಮೂರ್ತಿ, ವೀರಶೆಟ್ಟಿ ಗೋವಿಂದರಾಜು ಇತರರು ಹಾಜರಿದ್ದರು.