ಪಾರ್ವತಿನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುಪೌರ್ಣಿಮೆ ಪ್ರಯುಕ್ತ ಸಂಸ್ಕಾರ ಭಾರತಿ ಸಂಸ್ಥೆಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಳ್ಳಾರಿ: ಇಲ್ಲಿನ ಪಾರ್ವತಿನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುಪೌರ್ಣಿಮೆ ಪ್ರಯುಕ್ತ ಸಂಸ್ಕಾರ ಭಾರತಿ ಸಂಸ್ಥೆಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಚಾಲನೆ ನೀಡಿ ಮಾತನಾಡಿದ ಆಧ್ಯಾತ್ಮಿಕ ಚಿಂತಕ ಮಸೀದಿಪುರ ಚಂದ್ರಶೇಖರಗೌಡ, ಗುರುವಂದನೆ ಕಾರ್ಯಕ್ರಮವು ನಮ್ಮ ಜೀವನವನ್ನು ರೂಪಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಒಂದು ಪವಿತ್ರ ಸಂಪ್ರದಾಯವಾಗಿದೆ ಎಂದು ತಿಳಿಸಿದರು.ಪ್ರಾಸ್ತಾವಿಕ ಮಾತನಾಡಿದ ಸಂಸ್ಕಾರ ಭಾರತಿ ಸಂಸ್ಥೆಯ ಕಾರ್ಯದರ್ಶಿ ಅಮರೇಶ ಹಚ್ಚೊಳ್ಳಿ, ಕಲೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡಿ ರಾಷ್ಟ್ರಭಕ್ತಿ ಹಾಗೂ ಭಾರತೀಯ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸುವುದು ಸಂಸ್ಕಾರ ಭಾರತಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಕೆ.ಎಂ. ರಾಜಶೇಖರಯ್ಯ, ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಪ್ರತಿಭೆಯ ಜೊತೆಗೆ ಶಿಸ್ತು, ಪರಿಶ್ರಮ, ಸಮಯಪ್ರಜ್ಞೆ ಮತ್ತು ಸಂಸ್ಕಾರವೂ ಅತ್ಯಗತ್ಯ. ನಿಮ್ಮ ಗುರುಗಳನ್ನು ಗೌರವಿಸಿ, ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಮುದ್ದಟನೂರು ಎಚ್.ತಿಪ್ಪೇಸ್ವಾಮಿ, ಶಾಲೆಯ ಹಳೆಯ ವಿದ್ಯಾರ್ಥಿನಿ ಕೆ.ಎಚ್. ನೀಲಗಂಗಾ, ಎಸ್.ಗುರುರಾಜ್, ನಿವೃತ್ತ ಶಿಕ್ಷರಾದ ಕೆ.ಎಂ.ಸಿದ್ಧಲಿಂಗಯ್ಯ, ಜೋಳದರಾಶಿ ಬಸವರಾಜ್, ಹಿರಿಯರಂಗಕರ್ಮಿ ಶಿವೇಶ್ವರಗೌಡ ಕಲ್ಲುಕಂಬ, ತೊಗಲುಗೊಂಬೆ ಕಲಾವಿದ ಸುಬ್ಬಣ್ಣ, ವೀರೇಶ ದಳವಾಯಿ, ನೇತಿ ರಘುರಾಮ್ ಇದ್ದರು. ಶಿಕ್ಷಕಿ ಪದ್ಮಾವತಿ, ಜೆ.ನರಸಿಂಹಮೂರ್ತಿ ಗುರುವಿನ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಗುರುಪೌರ್ಣಿಮೆ ಅಂಗವಾಗಿ ಕುರುಗೋಡಿನ ಸಂಗೀತ ಶಿಕ್ಷಕ ವಿ.ಎಂ. ವೀರಭದ್ರಯ್ಯಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ವಿಷ್ಣು ಹಡಪದ ಕಾರ್ಯಕ್ರಮ ನಿರ್ವಹಿಸಿದರು.