ಮುಂದಿನ ದಿನಗಳಲ್ಲಿ ಈ ರೀತಿಯ ಹವಾಮಾನ ವೈಪರಿತ್ಯಗಳು ಮರುಕಳಿಸದ ರೀತಿ ನೋಡಿಕೊಳ್ಳಬೇಕೆಂ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಇಂದಿನ ದಿನಗಳಲ್ಲಿ ಮಾನವನ ಅತಿ ಬುದ್ಧಿವಂತಿಕೆಯಿಂದಾಗಿ ಪರಿಸರ ನಾಶವಾಗುತ್ತಾ ಸಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವೇಣುಗೋಪಾಲ್ ಬೇಸರ ವ್ಯಕ್ತಪಡಿಸಿದರು.ಎಚ್.ಡಿ. ಕೋಟೆ ತಾಲೂಕಿನ ಸೋನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಅಭಿವೃದ್ಧಿ ಪಥದತ್ತ ಹೋಗುತ್ತಾ ಮರಗಳನ್ನು ನಾಶ ಮಾಡುತ್ತಾ ಸಾಗಿದಂತೆ ನೀರಿನ ಅಭಾವ ಎದುರಾಗುತ್ತಿದೆ, ಅಲ್ಲದೇ ಈ ಭಾರಿ ನಿಗಧಿಗಿಂತ ತಡವಾಗಿ ಮಳೆ ಆರಂಭವಾಗಿದ್ದರಿಂದಾಗಿ ಈ ಭಾರಿ ಬಿಸಿಲಿ ತಾಪಮಾನ ಹೆಚ್ಚಾಗಿ ಜೀವಿಸಲು ತೊಂದರೆ ಎದುರಾಗಿತ್ತು, ಮುಂದಿನ ದಿನಗಳಲ್ಲಿ ಈ ರೀತಿಯ ಹವಾಮಾನ ವೈಪರಿತ್ಯಗಳು ಮರುಕಳಿಸದ ರೀತಿ ನೋಡಿಕೊಳ್ಳಬೇಕೆಂದೆರೆ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಜಿಲ್ಲಾ ಜನಜಾಗೃತಿ ಸದಸ್ಯ ಸ್ವಾಮಿ ಮಾತನಾಡಿ, ಮನೆಗೊಂದು ಮರ ಊರಿಗೊಂದು ವನ ಎಂಬ ಘೋಷಾವಾಕ್ಯದಂತೆ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಿಂದಿನ ದಿನಗಳಲ್ಲಿ ಮನೆಯಂಗಳದಲ್ಲಿ ಹತ್ತಾರು ಮರಗಿಡಗಳು ಇರುತ್ತಿದ್ದವು, ಆದರೀಗ ಮರಗಳ ಹನನ ಯಥೇಚ್ಛವಾಗಿ ನಡೆದಿರುವ ಹಿನ್ನೆಲೆ ನಾವು ಗಿಡಗಳನ್ನು ನೆಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ರೈತರು ಅರಣ್ಯ ಇಲಾಖೆಯಲ್ಲಿ ದೊರೆಯುವ ಗಿಡಗಳನ್ನು ಜಮೀನುಗಳಲ್ಲಿ ಬೆಳೆಯುವ ಮನಸ್ಸು ಮಾಡಬೇಕು. ಅಲ್ಲದೇ ಅರಣ್ಯ ಇಲಾಖೆಯೆ ಅರಣ್ಯೀಕರಣ ಯೋಜನೆಯಡಿ ರಸ್ತೆಯ ಇಕ್ಕೆಲದಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ, ಅಲ್ಲದೇ ಬೆಟ್ಡ ಗುಡ್ಡ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.ಮಕ್ಕಳು ತಮ್ಮ ಮನೆ ಮತ್ತು ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸುವ ಪಣತೊಡಬೇಕು, ಆ ರೀತಿಯಾಗಿ ಪಣತೊಟ್ಟಾಗ ಮಾತ್ರ ಅವರ ಜೀವನ ಸುಖಮಯವಾಗಿರಲಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್, ಕೃಷಿ ಅಧಿಕಾರಿ ತಿರುಮಲ್ಲೇಶ್, ಚೈತ್ರಾ, ಸ್ವಾಮಿ, ಶಿಕ್ಷಕರಾದ ವಸಂತಾ, ಸುಧಾ, ರೇಷ್ಮಾ ಭಾನು ಇದ್ದರು.