ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಆಳಂದ ತಾಲೂಕು ಪ್ಲಾಸ್ಟಿಕ್ ಮುಕ್ತ ಗ್ರಾಮಗಳ ವಿಶೇಷ ಅಭಿಯಾನ ಗಮನ ಸೆಳೆದಿದೆ. ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಗ್ರಾಪಂ, ತಾಪಂ, ಜಿಪಂ ಹಾಗೂ ಕರ್ನಾಟಕ ಕೇದ್ರೀಯ ವಿವಿ ವಿದ್ಯಾರ್ಥಿಗಳ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಾಗೂ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಪ್ಲಾಸ್ಟಿಕ್ ಕೊಟ್ಟವರಿಗೆ ಸ್ವಚ್ಛತಾ ಅರಿವು ಮೂಡಿಸಲು ಎಣ್ಣೆ ನೀಡಲಾಗುತ್ತಿದೆ.ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಯೋಜನಾ ನಿರ್ದೇಶಕ ಜಗದೇವಪ್ಪ ಇವೆಲ್ಲ ಯೋಜನೆಗಳು ಗ್ರಾಪಂಗಳಿಗೆ ಸಣ್ಣ ಪ್ರಮಾಣದ ಆರ್ಥಿಕ ಆದಾಯವು ತಂದುಕೊಡಲಿದೆ ಎಂದರು.
ಜಿಲ್ಲೆಯ ಕಲಬುರಗಿ ತಾಲೂಕಿನ ಭೀಮಳ್ಳಿ, ಪಟ್ನಾ, ಔರಾದ ಹೀಗೆ 52 ಗ್ರಾಪಂನಲ್ಲಿ ತ್ಯಾಜ್ಯಸಂಗ್ರಾಹ ಸಂಗ್ರಹಿಸಿದ ಪ್ಲಾಸ್ಟಿಕ್ನಿಂದ ಮರುಬಳಕೆ ಸಾಧ್ಯವಿದೆ. ಆರಂಭಿಕವಾಗಿ ತಲಾ 15 ಸಾವಿರ ರುಪಾಯಿ ಆದಾಯ ತಂದುಕೊಟ್ಟಿದೆ.ಆಳಂದ ತಾಲೂಕಿನ ಕಡಗಂಚಿ ಸೇರಿ ಹಲವು ಗ್ರಾಪಂಗಳಲ್ಲಿ ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರ ನೇತೃತ್ವದಲ್ಲಿ ಕೈಗೆತ್ತಿಕೊಂಡ ಪ್ಲಾಸ್ಟಿಕ್ ಮುಕ್ತ ವಿಶೇಷ ಅಭಿಯಾನ ಮಾದರಿಯಾಗಿದೆ ಎಂದರು.
ಗ್ರಾಪಂ ಕಸವಿಲೆವಾರಿ ವಾಹನಕ್ಕೆ ಮಹಿಳಾ ಚಾಲಕರನ್ನು ನೇಮಿಸಿ ಅವರಿಗೆ ಚಾಲನಾ ಪರವಾನಿಗೆ ನೀಡಿದ್ದು, ರಾಜ್ಯದಲ್ಲಿ ಸರ್ಕಾರ 6 ಸಾವಿರ ಮಹಿಳಾ ಚಾಲಕರು ನೇಮಿಸಿ ವಾಹನ ಚಾಲನಾ ಪರವಾನಿಗೆ ನೀಡಿ ಕಸ ಸಂಗ್ರಹಿಸುವ ಯಶಸ್ವಿ ಕಾರ್ಯು ನಡೆದಿದೆ .ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮಾತನಾಡಿ, ಕಳೆದ 15 ದಿನಗಳಿಂದ ವಿವಿಧ ಗ್ರಾಪಂಗಳಲ್ಲಿ ಪ್ಲಾಸ್ಟಿಕ್ ಮುಕ್ತ ವಿಶೇಷ ಅಭಿಯಾನ ಆರಂಭಗೊಂಡಿದೆ. 42 ಗ್ರಾಪಂನಿಂದ 30 ಕೆಜಿ ಪ್ಲಾಸ್ಟಿಕ್ ಸಂಗ್ರಗೊಂಡಿದೆ. ಗ್ರಾಪಂ ವೊಂದಕ್ಕೆ ಒಂದು ಕ್ವಿಂಟಲ್ ಪ್ಲಾಸ್ಟಿಕ್ ಸಂಗ್ರಹಿಸುವ ಗುರಿಹೊಂದಲಾಗಿದೆ ಎಂದರು.
ಸಿಯುಕೆ ವಿದ್ಯಾರ್ಥಿ ಬಾಬುಲಾಲ ಮತ್ತು ಐಶ್ವರ್ಯ ಅವರು ಮಾತನಾಡಿ, ಕೇವಲ ಸ್ವಚ್ಛತೆ, ಉತ್ತಮ ಪರಿಸರ ನಿರ್ಮಾಣಕ್ಕೆ ಮಾತಿಗೆ ಸೀಮಿತವಾಗದೆ ಕೃತಿಯಲ್ಲಿ ಬರುವಂತಾಗಲು ನಮ್ಮಿಂದಾದ ನಿಸರ್ಗದ ನಷ್ಟವನ್ನು ನಾವು ಸರಿದ್ಯೋಗಿಸಲು ಪ್ರಯತ್ನಿಸಬೇಕಾಗಿದೆ ಎಂದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಷಾ ಪಾಟೀಲ, ಸಾಹಾಸ ಸಂಸ್ಥೆಯ ರಾಜಶೇಖರ ಬಿರಾದಾರ ಈ ಸಂದರ್ಭದಲ್ಲಿ ಮಾತನಾಡಿದರು.
ಗ್ರಾಪಂ ಹಿರಿಯ ಸದಸ್ಯ ನಾಗೇಂದ್ರಪ್ಪ ಪಾಳಾ, ವಿಠ್ಠಲ ಆಲೂರ, ಪ್ರಕಾಶ ಸೂರನ್, ಅಶೋಕ ಭೂಗಶೆಟ್ಟಿ, ತಾಪಂ ಮಾಜಿ ಸದಸ್ಯ ಶಿವುಪುತ್ರಪ್ಪ ಕೊಟ್ಟರಗಿ, ಎಚ್ಎಂ ಸಿದ್ರಾಮಪ್ಪ ಡೊಣಿ, ಎಇಇ ವಿಜಯಕುಮಾರ, ಇಂಜಿನಿಯರ್ ಸಂಗಮೇಶ ಬಿರಾದಾರ ಸೇರಿದಂತೆ ಸಿಯುಕೆ ಮತ್ತು ಗ್ರಾಮದ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಜಿಪಂನ ಗುರುಬಾಯಿ ಪಾಟೀಲ ನಿರೂಪಿಸಿ ವಂದಿಸಿದರು. ಬಳಿಕ ಗ್ರಾಮದ ತಾಯಂದಿರು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತಂದುಕೊಟ್ಟಿದ್ದರಿಂದ ಸಭೆಯಲ್ಲಿ ತಲಾ ಅರ್ಧ ಕೆಜಿ ಒಳ್ಳೆಯಣ್ಣೆ ಕೊಟ್ಟು ಪ್ರೋತ್ಸಾಹಿಸಿ ಈ ಪ್ರಕ್ರಿಯೆ ಕ್ವಿಂಟಲ ಪ್ಲಾಸ್ಟಿಕ್ ಸಂಗ್ರಹದವರೆಗೆ ಮುಂದುವರೆಯಲಿದೆ ಎಂದು ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಹೇಳಿದರು.