ಸಾರಾಂಶ
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ನಾಡಿನ ಪ್ರಸಿದ್ಧ ಹಾನಗಲ್ಲ ಗ್ರಾಮದೇವಿ ಜಾತ್ರೆ ಮಾ. 18ರಿಂದ 26ರ ವರೆಗೆ ನಡೆಯಲಿದ್ದು, ಸರ್ವ ಸಿದ್ಧತೆಗಳು ಚಾಲನೆ ಪಡೆದುಕೊಂಡಿವೆ. ಶುಕ್ರವಾರ ದೇವಸ್ಥಾನ ಅಂಗಳದಲ್ಲಿ ಜಾತ್ರೆಯ ಬ್ಯಾನರ್ ಬಿಡುಗಡೆ ಮಾಡಲಾಯಿತು.
ಹಾನಗಲ್ಲ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ನಾಡಿನ ಪ್ರಸಿದ್ಧ ಹಾನಗಲ್ಲ ಗ್ರಾಮದೇವಿ ಜಾತ್ರೆ ಮಾ. 18ರಿಂದ 26ರ ವರೆಗೆ ನಡೆಯಲಿದ್ದು, ಸರ್ವ ಸಿದ್ಧತೆಗಳು ಚಾಲನೆ ಪಡೆದುಕೊಂಡಿವೆ. ಶುಕ್ರವಾರ ದೇವಸ್ಥಾನ ಅಂಗಳದಲ್ಲಿ ಜಾತ್ರೆಯ ಬ್ಯಾನರ್ ಬಿಡುಗಡೆ ಮಾಡಲಾಯಿತು.
ಅರ್ಚಕ ಶಂಕರಭಟ್ ಜೋಶಿ ಅವರಿಂದ ಗ್ರಾಮದೇವಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಬ್ಯಾನರ್ ಬಿಡುಗಡೆ ಮತ್ತು ಜಾತ್ರಾ ಉತ್ಸವದ ತಯಾರಿಗಳಿಗೆ ವಿಧ್ಯುಕ್ತ ಚಾಲನೆ ಸಿಕ್ಕಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲ ಯುವಕರು ಸೇರಿ ಸಾಮೂಹಿಕ ನಾಯಕತ್ವದಲ್ಲಿ ವಿಜೃಂಭಣೆಯಿಂದ ಗ್ರಾಮದೇವಿ ಜಾತ್ರೆ ಆಯೋಜಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸಮಿತಿಗಳನ್ನು ರಚನೆ ಮಾಡಿಕೊಳ್ಳುವ ಪ್ರಕ್ರಿಯೆಗಳು ನಡೆದಿವೆ.ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಸದಸ್ಯೆ ಶೋಭಾ ಚಂದ್ರಶೇಖರ ಉಗ್ರಣ್ಣನವರ, ಪ್ರಮುಖರಾದ ರಾಜು ಗೌಳಿ, ಗಣೇಶ ಮೂಡ್ಲಿಯವರ, ನಾಗರಾಜ ಉದಾಸಿ, ಗುರುರಾಜ ನಿಂಗೋಜಿ, ಮಂಜಣ್ಣ ನಾಗಜ್ಜನವರ, ಆದರ್ಶ ಶೆಟ್ಟಿ, ಅಶೋಕ ಆರೆಗೊಪ್ಪ, ಭೋಜರಾಜ ಕರೂದಿ, ಬಾಳಾರಾಮ ಗುರ್ಲಹೊಸೂರ, ಪರಶುರಾಮ ಖಂಡೂನವರ, ರಾಮು ಯಳ್ಳೂರ, ಬಸವರಾಜ ಹಾದಿಮನಿ, ಮಹೇಶ ಪವಾಡಿ, ವಿರೂಪಾಕ್ಷಪ್ಪ ಕಡಬಗೇರಿ, ಯಲ್ಲಪ್ಪ ಶೇರಖಾನಿ, ಹನುಮಂತಪ್ಪ ಬಾಳೂರ, ಸಂಜು ಬೇದ್ರೆ, ಪಿ.ಕೆ. ಪಾರಗಾವಕರ, ಶಿವು ಭದ್ರಾವತಿ, ಕೃಷ್ಣ ಮರವಂತೆ, ರಾಜು ಶಿರಪಂತಿ, ರಾಜು ಗುಡಿ ಮತ್ತಿತರರು ಇದ್ದರು.
8ನೇ ಜಾತ್ರೆ: ಹಲವು ದಶಕಗಳಿಂದ ನಿಂತುಹೋಗಿದ್ದ ಗ್ರಾಮದೇವಿ ಜಾತ್ರೆಯನ್ನು ಮಾಜಿ ಸಚಿವ ಸಿ.ಎಂ. ಉದಾಸಿ ನೇತೃತ್ವದಲ್ಲಿ ಮತ್ತೆ ಆರಂಭಿಸಿದ ಫಲವಾಗಿ ಈಗ 7 ಜಾತ್ರೆಗಳು ಪೂರ್ಣಗೊಂಡಿವೆ. ಹಿಂದಿನ 7 ಜಾತ್ರೆಗಳನ್ನು ಸಿ.ಎಂ. ಉದಾಸಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. 8ನೇ ಜಾತ್ರೆ ಸಿ.ಎಂ. ಉದಾಸಿ ಅನುಪಸ್ಥಿತಿಯಲ್ಲಿ ನಡೆಯುತ್ತಿದ್ದು, ನೂತನ ಜಾತ್ರಾ ಕಮಿಟಿ ಅಸ್ತಿತ್ವಕ್ಕೆ ಬರುವುದು ಬಾಕಿ ಇದೆ. ಮುಖ್ಯ ಸಮಿತಿ ಮತ್ತು 16 ಉಪ ಸಮಿತಿಗಳನ್ನು ರಚಿಸುವ ಪ್ರಕ್ರಿಯೆಗಳು ಚಾಲನೆ ಪಡೆದುಕೊಂಡಿವೆ. ಅಲ್ಲದೆ, ಜಾತ್ರೆಯ ವ್ಯವಸ್ಥೆಗಳಿಗಾಗಿ ಶೀಘ್ರದಲ್ಲಿ ಕಚೇರಿಯನ್ನು ತೆರೆಯಲಾಗುತ್ತಿದೆ.