ಗದಗ: ಹರ್ಡೇಕರ್ ಮಂಜಪ್ಪನವರು ಸತ್ಯ, ಅಹಿಂಸೆ, ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದವರು. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಸವತತ್ವ ಪ್ರಸಾರಕ್ಕೆ ಹರ್ಡೇಕರ ಮಂಜಪ್ಪನವರ ಕೊಡುಗೆ ಬಹಳ ದೊಡ್ಡದು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2786ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಕ್ಷರ ಹಾಗೂ ಸಂಸ್ಕೃತಿಯ ಪ್ರತೀಕ ಹರ್ಡೇಕರ್ ಮಂಜಪ್ಪನವರು. ಪತ್ರಿಕೆಯ ಮೂಲಕ ಸ್ವಾತಂತ್ರ್ಯ ಮತ್ತು ಧರ್ಮ ಜಾಗೃತಿ ಕೆಲಸ ಮಾಡಿದ್ದಾರೆ. ಹಸ್ತನಿರ್ಮಿತ ಪತ್ರಿಕೆಗಳನ್ನು ಬರೆದು, ಸ್ವಾತಂತ್ರ‍್ಯ, ಧರ್ಮ ಜಾಗೃತಿಯ ವಿಷಯವನ್ನು ಪ್ರಚಾರ ಮಾಡುತ್ತಾ ಯುವಕರಲ್ಲಿ ಸ್ವಾತಂತ್ರ‍್ಯದ ಬಗ್ಗೆ, ಬಡತನದ ನಿರ್ಮೂಲನೆಯ ಬಗ್ಗೆ ಹೋರಾಡಿದರು. ಮಕ್ಕಳ ಸಾಹಿತ್ಯವನ್ನು ಮೊಟ್ಟಮೊದಲು ಪ್ರಸ್ತುತ ಪಡಿಸಿದರು. ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾರಿದರು. ಬಸವಣ್ಣನವರ ಚರಿತ್ರೆಯನ್ನು ಹಿಂದಿಯಲ್ಲಿ ಬರೆದು ಗಾಂಧಿಯವರಿಗೆ ಓದಲು ಕೊಟ್ಟರು. ಬಸವಣ್ಣನವರ ತತ್ವಗಳನ್ನು ತಿಳಿದುಕೊಂಡು ಗಾಂಧೀಜಿಯವರು ಮಾರು ಹೋಗಿದ್ದರು ಎಂದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಸುಂಡಿ ಮಾತನಾಡಿ, ಹರ್ಡೇಕರ್ ಮಂಜಪ್ಪನವರು 1913ರಲ್ಲಿ ಮೊಟ್ಟ ಮೊದಲು ಬಸವ ಜಯಂತಿಯನ್ನು ಆಚರಿಸಿದರು. ಅಂದಿನಿಂದ ಬಸವ ತತ್ವ ಪ್ರಸಾರ ನಾಡಿನ ಮಠ ಮಾನ್ಯಗಳಲ್ಲಿ ಪ್ರಾರಂಭವಾಯಿತು. ಭಜನೆಗಳನ್ನು ನಡೆಸಿದರು. ನಾಡಿನ ಸೇವೆಗಾಗಿ ಮದುವೆಯಾಗದೇ ಸನ್ಯಾಸತ್ವ ಸ್ವೀಕರಿಸಿ, ಆಹಾರ ಉಡುಗೆ ತೊಡುಗೆಯಲ್ಲಿ ಬದಲಾವಣೆ ತಂದರು ಎಂದರು. ಆಯುರ್ವೇದ ಚಿಕಿತ್ಸಾ ತಜ್ಞೆ ಡಾ. ಪರವೀನ್ ನದಾಫ್ ಮಾತನಾಡಿ, ದೈಹಿಕ ಮಾನಸಿಕ ಸಮತೋಲನದ ಸ್ಥಿತಿಯೇ ಅಧ್ಯಾತ್ಮ. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಭಾಗ್ಯ ಮಹತ್ವದ್ದು. ಆರೋಗ್ಯವಂತ ವ್ಯಕ್ತಿಯೇ ಅತಿ ಶ್ರೀಮಂತ. ಆಹಾರವೇ ಔಷಧವಾಗಬೇಕು. ಆರೋಗ್ಯದ ಕಡೆಗೆ ಎಲ್ಲರೂ ಗಮನಹರಿಸಬೇಕು. ಉತ್ತಮ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಕೀರ್ತಿ ಹುಡೇದ ಹಾಗೂ ವಚನ ಚಿಂತನ ರತ್ನಾ ಪಾಟೀಲ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಡಾ. ಎನ್.ಬಿ. ನಿಂಬಣ್ಣನವರ ವಹಿಸಿದ್ದರು. ಈ ವೇಳೆ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ್ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಇದ್ದರು. ಐ.ಬಿ. ಬೆನಕೊಪ್ಪ ಅವರು ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.