ಹರಜಾತ್ರೆ: ಸಿಎಂ ಗೆ ಆಹ್ವಾನ ನೀಡುವ ನಿರ್ಣಯಕ್ಕೆ ಖಂಡನೆ

| Published : Jan 12 2025, 01:16 AM IST

ಸಾರಾಂಶ

ದಾವಣಗೆರೆ: ಹರಿಹರ ಪೀಠದಲ್ಲಿ ಇದೇ ಜ.14 ರಂದು ನಡೆಯುವ ಹರಜಾತ್ರೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಪೀಠ ತೀರ್ಮಾನ ಕೈಗೊಂಡಿರುವುದು ಖಂಡನೀಯವಾಗಿದೆ ಎಂದು ಅಖಿಲ ಭಾರತ ಅಂಗಾಯತ ಪಂಚಮಸಾಲಿ ಮಹಾಸಭಾ ಅಸಮಾಧಾನ ವ್ಯಕ್ತಪಡಿಸಿದೆ.

ದಾವಣಗೆರೆ: ಹರಿಹರ ಪೀಠದಲ್ಲಿ ಇದೇ ಜ.14 ರಂದು ನಡೆಯುವ ಹರಜಾತ್ರೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಪೀಠ ತೀರ್ಮಾನ ಕೈಗೊಂಡಿರುವುದು ಖಂಡನೀಯವಾಗಿದೆ ಎಂದು ಅಖಿಲ ಭಾರತ ಅಂಗಾಯತ ಪಂಚಮಸಾಲಿ ಮಹಾಸಭಾ ಅಸಮಾಧಾನ ವ್ಯಕ್ತಪಡಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಕುರಿತು ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ವಿ.ಅಶೋಕ್ ಗೋಪನಾಳು ಮಾತನಾಡಿ, ಪಂಚಮಸಾಲಿ ಸಮಾಜದ ನ್ಯಾಯಯುತ ಬೇಡಿಕೆಯಾದ 2ಎ ಮೀಸಲಾತಿ ನೀಡುವುದನ್ನು ವಿರೋಧಿಸಿ, ಆಡಳಿತವನ್ನು ದುರ್ಬಳಕೆ ಮಾಡಿಕೊಂಡು ಲಾಠಿಚಾರ್ಜ್ ಮಾಡಿಸಿ ನಮ್ಮ ಸಮಾಜದ 200ಕ್ಕೂ ಹೆಚ್ಚು ಹೋರಾಟಗಾರರು ಗಾಯಗೊಂಡಿರುವ ನೋವು ಇನ್ನೂ ಮಾಸಿಲ್ಲದಿದ್ದರೂ, ಹರಿಹರದ ಶ್ರೀಗಳು ಲಾಠಿ ಚಾರ್ಜ್ ಮಾಡಲು ಕಾರಣರಾದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿರುವುದು ಖಂಡನೀಯ ಎಂದರು. ಹರಿಹರದ ಶ್ರೀಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 2ಎ ಮೀಸಲಾತಿ ವಿರೋಧ ಮಾಡಿದಾಗಲೂ ಅವರನ್ನು ಕರೆದು ಸನ್ಮಾನ ಮಾಡಿದರು. ಬೊಮ್ಮಾಯಿಯವರು 2ಎ ಮೀಸಲಾತಿ ಕೊಡದೆ ಇದ್ದರೂ ಅವರನ್ನು ಪೀಠಕ್ಕೆ ಕರೆದು ಸನ್ಮಾನ ಮಾಡಿದರು. ಈಗ ಸಿದ್ದರಾಮಯ್ಯನವರು ಮೀಸಲಾತಿಗೆ ಬಹಿರಂಗ ವಿರೋಧ ಮಾಡಿ, ಸಮಾಜದ ಹೋರಾಟಗಾರರ ಮೇಲೆ ಆಡಳಿತವನ್ನು ದುರ್ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆಯಿಂದ ಲಾಠಿಚಾರ್ಜ್ ಮಾಡಿರುವವರನ್ನು ಪೀಠಕ್ಕೆ ಕರೆದು ಹರ ಜಾತ್ರೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಸುತ್ತಿರುವುದು ಏನನ್ನೂ ಸೂಚಿಸುತ್ತದೆ ಎಂಬುದನ್ನು ಶ್ರೀಗಳು ಅರಿಯಬೇಕಾಗಿದೆ ಎಂದು ಹೇಳಿದರು. ಶ್ರೀಗಳ ಒಲವು ಸಮಾಜದ ಪರವೋ ಅಥವಾ ಸಮಾಜದ ನ್ಯಾಯಯುತ ಬೇಡಿಕೆಗಳನ್ನು ವಿರೋಧಿಸುತ್ತಿರುವ ರಾಜಕಾರಣಿಗಳ ಪರವೋ ಇವೆಲ್ಲ ವಿಷಯ ಚರ್ಚೆ ಮಾಡುವುದು ಅನಿವಾರ್ಯವಾಗಿದೆ. ಸಮಾಜದ ಒಳತಿಗಾಗಿ ಶ್ರಮಿಸುವ ದಾವಣಗೆರೆ ಜಿಲ್ಲೆಯ ಹಾಲಿ ಸಚಿವರು ಹಾಗೂ ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರುಗಳು ಹಾಗೂ ಮುಖಂಡರನ್ನು, ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಸೇವಾ ಮುಖಂಡರನ್ನು ಕರೆದು ಕಾರ್ಯಕ್ರಮ ಮಾಡಿದರೆ, ಅವರಿಗೂ ಸಹ ಪ್ರೋತ್ಸಾಹಿಸಿದಂತಾಗುತ್ತದೆ. ಆದರೆ, ಸಮಾಜದ ನ್ಯಾಯಯುತ ಬೇಡಿಕೆಗಳನ್ನು ವಿರೋಧಿಸುತ್ತಿರುವ ಮುಖಂಡರನ್ನು ಕರೆದು ಹರ ಜಾತ್ರೆ ಕಾರ್ಯಕ್ರಮ ಮಾಡುತ್ತಿರುವುದನ್ನು ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಕೀಲ ಎಚ್.ಎಸ್.ಯೋಗೇಶ್, ಅಭಿ ಕಾಟನ್ ಬಕ್ಕೇಶ್, ಮಂಜು ಪೈಲ್ವಾನ್, ಕಲ್ಲೇಶಪ್ಪ ಕಾರಿಗನೂರು, ಗಿರೀಶ್ ಮರಡಿ, ಕೊಳೇನಹಳ್ಳಿ ನಾಗರಾಜ, ಕ್ಯಾರಕಟ್ಟೆ ಕೊಟ್ರೇಗೌಡರು, ಶಂಕರ್ ಇತರರು ಇದ್ದರು.