ಸಾರಾಂಶ
ದಾಂಡೇಲಿ:
ಸೌಹಾರ್ದ ಪರಂಪರೆ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನ ರಾಜ್ಯ ವ್ಯಾಪ್ತಿ ಹಮ್ಮಿಕೊಂಡ ಸೌಹಾರ್ದತಾ ಮಾನವ ಸರಪಳಿ ಕಾರ್ಯಕ್ರಮ ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಮಂಗಳವಾರ ನಡೆಯಿತು.ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ, ಗಾಂಧೀಜಿ ಜಾತಿ, ಧರ್ಮ, ಪ್ರದೇಶ ಮೀರಿ ಈ ದೇಶ ಒಂದುಗೂಡಿಸಿ ಸ್ವಾತಂತ್ರ್ಯ ಹೋರಾಟ ರೂಪಿಸಿದ್ದರು. ಜತೆಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ನಾಯಕತ್ವ ವಹಿಸಿದ್ದರು. ಅವರು ಮನಸ್ಸು ಮಾಡಿದರೆ ಸ್ವಾತಂತ್ರ್ಯಾ ನಂತರ ಈ ದೇಶದ ಚುಕ್ಕಾಣಿ ಹಿಡಿಯಬಹುದಿತ್ತು, ಆದರೆ ಅದನ್ನು ಬಯಸದ ಅವರು ಸ್ವಾತಂತ್ರ್ಯ ನಂತರದಲ್ಲಿ ಅಸಮಾನತೆಯ ವಿರುದ್ಧದ ಚಳವಳಿಗೆ ತೊಡಗಿಸಿಕೊಂಡರು. ಆದರೆ ಸ್ವಾತಂತ್ರ್ಯ ನಂತರ ಅವರನ್ನು ವರ್ಷದೊಳಗೆ ಕಳೆದುಕೊಳ್ಳಬೇಕಾಯ್ತು ಎಂದರು.ಗಾಂಧೀಜಿ ಹುತಾತ್ಮರಾದ ದಿನವನ್ನು ನಾವು ಅತ್ಯಂತ ವಿಷಾದದಿಂದ ಆಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಗಾಂಧೀಜಿ ರಾಮ ರಾಜ್ಯದ ಕನಸು ಕಂಡಿದ್ದರು. ಆದರೆ ಕನಸು ಇಂದಿದೆಯೇ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದ ಅವರು, ಜಾತಿ, ಧರ್ಮ, ಬಣ್ಣ, ಬಾವುಟ, ಗಡಿ, ನುಡಿಗಳ ವಿಚಾರದಲ್ಲಿ ಒಬ್ಬರನ್ನೊಬ್ಬರು ದ್ವೇಷಿಸುತ್ತಿರುವ ನಾವು ಇಂದು ಸೌಹಾರ್ದತೆ ಮರೆತಿದ್ದೇವೆ. ಈ ದೇಶದ ಪರಂಪರೆಯಾಗಿರುವ ಸಹಬಾಳ್ವೆ ಮರೆತಿದ್ದೇವೆ. ಆ ಕಾರಣಕ್ಕಾಗಿ ಈ ದೇಶವನ್ನು ಸಮಗ್ರವಾಗಿ ಹಾಗೂ ಸೌಹಾರ್ದತೆಯಿಂದ ಉಳಿಸಿಕೊಳ್ಳಲು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಬದುಕು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ಸಮಾಜ ಸೇವಕರಾದ ಎಸ್.ಎಸ್. ಪೂಜಾರ, ಮೋಹನ ಹಲವಾಯಿ, ಕಾರ್ಮಿಕ ಮುಖಂಡ ರಾಜೀಸಾಬ್ ಕೇಸನೂರ, ಹಿರಿಯ ಸಾಹಿತಿ ಮುರ್ತುಜಾ ಹುಸೇನ್, ಆನೆ ಹೊಸೂರ ಮುಂತಾದವರು ಮಾತನಾಡಿ, ನಾವೆಲ್ಲರೂ ಒಂದು ಎನ್ನುವ ಭಾವದಲ್ಲಿ ನಡೆಯಬೇಕಾಗಿದೆ. ನಮ್ಮೊಳಗಿನ ಸಂಘರ್ಷದ ವಿಚಾರಗಳನ್ನು ಧೂರೀಕರಿಸಿ ಸಮ ಭಾವದಿಂದ ಬೆರೆಯಬೇಕಾಗಿದೆ ಎಂದರು.ಆನಂತರ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಜನವಾದಿ ಮಹಿಳಾ ಸಂಘಟನೆಯ ರತ್ನದೀಪ ಎನ್.ಎಂ. ಪ್ರತಿಜ್ಞಾವಿಧಿ ಬೋಧಿಸಿದರು. ಯುವ ಜನ ಸಂಘಟನೆ ಮುಖಂಡ ಡಿ. ಸ್ಯಾಮಸನ್ ಸ್ವಾಗತಿಸಿ ನಿರೂಪಿಸಿದರು. ಕಾರ್ಮಿಕ ಮುಖಂಡ ಸಲೀಂ ಸೈಯದ್ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ತಸವರ ಸೌದಾಗರ, ಯಸ್ಮಿನ್ ಕಿತ್ತೂರು, ಕೀರ್ತಿ ಗಾಂವ್ಕರ್, ಅನಿಲ್ ನಾಯ್ಕರ್, ಆರ್.ಪಿ. ನಾಯ್ಕ್, ಫಿರೋಜ್ ಫಿರ್ಜಾದೆ , ದಿವಾಕರ ನಾಯ್ಕ, ರೇಣುಕಾ ಬಂದ, ಜಗದೀಶ ನಾಯ್ಕ, ಅವಿನಾಶ್ ಗೋಡ್ಕೆ , ಸತೀಶ್ ನಾಯ್ಕ, ಬಾಬಣ್ಣ ಶ್ರೀವತ್ಸ, ಜಾಫರ್ ಮಸನಕಟ್ಟಿ, ರಾಮಾಂಜನೇಯ, ಪದ್ಮಾ ಕಾಳೆ, ಸೇವಂತಿ ದಬಾಲಿ, ಇಮ್ರಾನ್ ಖಾನ್, ಮೆಥ್ಯುಸ್ ಕೊಂಡಿಟ್ಟಿ, ಕಾಂತರಾವ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.