ದೊಡ್ಡಬಳ್ಳಾಪುರ: ಇಲ್ಲಿನ ಪಾರಂಪರಿಕ ಉತ್ಸವಗಳಲ್ಲಿ ಪ್ರಮುಖವಾದ ಶ್ರೀಧರ್ಮರಾಯಸ್ವಾಮಿ ದೇವಾಲಯದ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ಕರಗ ಮಹೋತ್ಸವದ ಅಂಗವಾಗಿ ಗುರುವಾರ ನಸುಕಿನಜಾವ ಸಾಂಪ್ರದಾಯಿಕ ಹಸಿಕರಗ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಡಿಕ್ರಾಸ್ ಮುಖ್ಯರಸ್ತೆಯಲ್ಲಿರುವ ಗಗನಾರ್ಯ ಮಠದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳ ಬಳಿಕ ಆಭರಣಾಲಂಕೃತ ಕರಗ ಕಳಶವನ್ನು ಕಂಕುಳಲ್ಲಿ ಹೊತ್ತ ಪೂಜಾರಿ ಹೊಸಕೋಟೆಯ ಉಪ್ಪಾರಹಳ್ಳಿಯ ಪೂಜಾರಿ ವೈ.ಭೀಮರಾಜ್, ಏಳುಸುತ್ತಿನಕೋಟೆ, ಸಪ್ತಮಾತೃಕೆ ಮಾರಿಯಮ್ಮ ದೇವಾಲಯ, ಕೋಟೆ ರಸ್ತೆ, ಸಿದ್ದಲಿಂಗಯ್ಯ ವೃತ್ತ, ನೆಲದಾಂಜನೇಯ ದೇವಾಲಯ ಮಾರ್ಗವಾಗಿ ಸಂಚರಿಸಿ ಶ್ರೀಧರ್ಮರಾಯಸ್ವಾಮಿ ದೇವಾಲಯ ಸೇರಿತು.ಕಂಕುಳಲ್ಲಿ ಕರಗ ಕುಂಭ ಹಾಗೂ ಕೈಯಲ್ಲಿ ಕತ್ತಿಯನ್ನು ಹಿಡಿದು ತಮಟೆಯ ಸದ್ದಿಗೆ ಹೆಜ್ಜೆ ಹಾಕುತ್ತಾ ಸಂಚರಿಸಿದ ಪೂಜಾರಿಗೆ ಮನೆಮನೆಗಳ ಮುಂದೆ ದೀಪಾರತಿಗಳನ್ನು ಬೆಳಗಿ ಮಹಿಳೆಯರು ಸಂಪ್ರದಾಯ ಮೆರೆದರು. ಪ್ರಮುಖ ವೃತ್ತಗಳಲ್ಲಿ ಆಕರ್ಷಕ ಹಸಿಕರಗ ನೃತ್ಯ ಗಮನ ಸೆಳೆಯಿತು.
ಬೆಳ್ಳಂಬೆಳಗ್ಗೆಯೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಹಸಿ ಕರಗವನ್ನು ಕಣ್ತುಂಬಿಕೊಂಡರು. ಏಳುಸುತ್ತಿನ ಕೋಟೆ ಅಂಗಳಲ್ಲಿ ಹೂಗಳಲ್ಲಿ ಬಿಡಿಸಲಾಗಿದ್ದ ಆಕರ್ಷಕ ರಂಗವಲ್ಲಿಯ ಮೇಲೆ ಧಾರ್ಮಿಕ ನಡಿಗೆಯ ಮೂಲಕ ಹಸಿಕರಗ ಹೊತ್ತ ಪೂಜಾರಿ ಹೆಜ್ಜೆ ಹಾಕಿದರು.ಕರಗದ ಅಂಗವಾಗಿ ಇಲ್ಲಿನ ಅನೇಕ ಗರಡಿಮನೆಗಳು, ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಅರವಂಟಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮುಖ್ಯರಸ್ತೆಗಳಲ್ಲಿ ಎಲ್ಇಡಿ ಬಲ್ಬ್ಗಳಿಂದ ರೂಪಿಸಲಾಗಿರುವ ದೇವತೆಗಳ ಪ್ರತಿಕೃತಿಗಳು ವಿಶೇಷ ಆಕರ್ಷಣೆಯಾಗಿವೆ. ಎಲ್ಲೆಡೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ
30ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಗುರುವಾರ ನಸುಕಿನಜಾವ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ದೇವಿ ಹಸಿಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
--
30ಕೆಡಿಬಿಪಿ2- ದೊಡ್ಡಬಳ್ಳಾಪುರದ ಧರ್ಮರಾಯಸ್ವಾಮಿ ಆದಿಶಕ್ತ್ಯಾತ್ಮಕೆ ದ್ರೌಪತಮ್ಮ ಹಸಿಕರಗಕ್ಕೆ ಪೂಜಾರತಿ.--