ನಿಯಮ ಬಿಟ್ಟು ರೇವಣ್ಣ ಹಾಸನಾಂಬೆ ದರ್ಶನ

| N/A | Published : Oct 14 2025, 10:52 AM IST

HD Revanna Hassanamba Darshana

ಸಾರಾಂಶ

ಈ ಬಾರಿ ಸಾಮಾನ್ಯ ಜನರು ಕೂಡ ಸುಗಮವಾಗಿ ಹಾಸನಾಂಬೆ ದರ್ಶನ ಮಾಡಲಿಕ್ಕಾಗಿ ಜಿಲ್ಲಾಡಳಿತ ಹತ್ತುಹಲವು ನಿಯಮಗಳನ್ನು ಮಾಡಿದೆ. ಈ ಶಿಷ್ಟಾಚಾರವನ್ನು ಸೋಮವಾರ ಶಾಸಕ ಎಚ್‌.ಡಿ.ರೇವಣ್ಣ ಉಲ್ಲಂಘಿಸಿ ನೇರವಾಗಿ ದೇವಸ್ಥಾನಕ್ಕೆ ಹೋಗಿ ಗರ್ಭಗುಡಿಯಲ್ಲಿ ಅರ್ಧಗಂಟೆ ಪೂಜೆ ಸಲ್ಲಿಸಿದರು.

 ಹಾಸನ :  ಈ ಬಾರಿ ಸಾಮಾನ್ಯ ಜನರು ಕೂಡ ಸುಗಮವಾಗಿ ಹಾಸನಾಂಬೆ ದರ್ಶನ ಮಾಡಲಿಕ್ಕಾಗಿ ಜಿಲ್ಲಾಡಳಿತ ಹತ್ತುಹಲವು ನಿಯಮಗಳನ್ನು ಮಾಡಿದೆ. ಈ ಶಿಷ್ಟಾಚಾರವನ್ನು ಸೋಮವಾರ ಶಾಸಕ ಎಚ್‌.ಡಿ.ರೇವಣ್ಣ ಉಲ್ಲಂಘಿಸಿ ನೇರವಾಗಿ ದೇವಸ್ಥಾನಕ್ಕೆ ಹೋಗಿ ಗರ್ಭಗುಡಿಯಲ್ಲಿ ಅರ್ಧಗಂಟೆ ಪೂಜೆ ಸಲ್ಲಿಸಿದರು.

ಹಾಸನಾಂಬೆ ದೇರ್ಶನಕ್ಕೆಂದು ನಗರಸಭೆ ಮುಂದಿನ ಗೇಟಿಗೆ ಕಾರಿನಲ್ಲಿ ಬಂದಾಗ ಕಂದಾಯ ಇಲಾಖೆಯ ಸಿಬ್ಬಂದಿ ರೇವಣ್ಣ ಅವರ ಕಾರನ್ನು ದೇವಾಲಯದ ಗೇಟ್ ಬಳಿ ತಡೆದರು. ಇದರಿಂದ ಸ್ವಲ್ಪ ಅಸಮಾಧಾನಗೊಂಡ ರೇವಣ್ಣ ಕ್ಷಣಕಾಲ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅವರು ಪತ್ನಿ ಭವಾನಿ ಅವರೊಂದಿಗೆ ನಡೆದುಕೊಂಡು ದೇವಸ್ಥಾನದತ್ತ ಮುನ್ನಡೆದರು. ಈ ವೇಳೆ ಹಾಸನ ಮಹಾನಗರ ಪಾಲಿಕೆಯ ಮೇಯರ್‌ ಆದ ಗಿರೀಶ್‌ ಚನ್ನವೀರಪ್ಪ ಅವರೇ ಕೌಂಟರ್‌ಗೆ ಹೋಗಿ ₹1 ಸಾವಿರ ಬೆಲೆಯ ಎರಡು ಟಿಕೆಟ್‌ಗಳನ್ನು ತಂದರು. ಆದರೆ, ರೇವಣ್ಣ ದಂಪತಿ ಈ ಕಾರ್ಡಿನ ಸಾಲಿನಲ್ಲಿ ಹೋಗದೆ ಶಿಷ್ಟಾಚಾರದ ವಾಹನಗಳು ಸಂಚರಿಸುವ ಮಾರ್ಗದಲ್ಲಿ ನಡೆದುಕೊಂಡು ಹೋಗಿ ರಾಜಗೋಪುರದ ಬಳಿ ಬರುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಬ್ಯಾರಿಕೇಡ್‌ ತೆಗೆದು ಒಳಬಿಟ್ಟರು.

ದರ್ಶನದ ಬಳಿಕ ಎಚ್.ಡಿ.ರೇವಣ್ಣ ಮಾಧ್ಯಮದ ಜೊತೆ ಮಾತನಾಡಿ, ದೇವಾಲಯದ ವ್ಯವಸ್ಥೆ ಬಗ್ಗೆ ನನಗೆ ಗೊತ್ತಿಲ್ಲ, ನಾನೂ ಕೇಳಲು ಹೋಗಲ್ಲ, ಟೈಂ ಬರುತ್ತದೆ ಬಿಡಿ. ಎಂಪಿ ಅವರ ಕಾರು ಮಾತ್ರ ಯಾವಾಗ ಬೇಕಾದರೂ ಇಲ್ಲಿ ಓಡಾಡಬಹುದಾ ಎಂದು ಪ್ರಶ್ನಿಸಿದರು.

ನಾನು ಸಾವಿರ ರುಪಾಯಿಯ ಟಿಕೆಟ್ ಖರೀದಿಸಿ ಬಂದಿದ್ದೇನೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ದೇವೇಗೌಡರು ಆರೋಗ್ಯವಾಗಿರಲಿ ದೇವಿಯ ಅನುಗ್ರಹ ಎಲ್ಲರ ಮೇಲಿರಲಿ ಎಂದರು.

Read more Articles on