ಕನ್ನಡಪ್ರಭ ವಾರ್ತೆ ಬೀಳಗಿ

ನಮ್ಮ ದೇಶದಲ್ಲಿ ಹಿಂದುತ್ವ ಉಳಿಯಬೇಕಾದರೆ ನಾವುಗಳು ಹೆಚ್ಚು ಹೆಚ್ಚು ಮಕ್ಕಳನ್ನು ಪಡಿಯಬೇಕು. ಯುವಕರು ಸೇರಿದಂತೆ ಇನ್ನೂ ಯಾ ರ‌್ಯಾರಿಗೆ ಎಷ್ಟು ಮಕ್ಕಳನ್ನು ಪಡಿಯಲು ಸಾಧ್ಯವಿದೆ ಅಷ್ಟು ಮಕ್ಕಳನ್ನು ಪಡಿಯಿರಿ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮುರುಗೇಶ್ ನಿರಾಣಿ ಕರೆ ನೀಡಿದರು.

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸುನಗ ಮತ್ತು ತೋಳಮಟ್ಟಿ ಬೈಪಾಸ್ ಸಮೀಪದ ರಾಮಣ್ಣ ಕಾಳಪ್ಪಗೋಳ ತೋಟದಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಭಾರತದಲ್ಲಿ 140 ಕೋಟಿ ಜನಸಂಖ್ಯೆ ಇದೆ, ಇನ್ನೂ 2 ಕೋಟಿ ಆಗಲಿ ಅನ್ನ ಹಾಕುವ ಶಕ್ತಿ ನಮ್ಮ ಭಾರತ ಮಾತೆಗೆ ಇದೆ. ನಾವೇಕೆ ಹೆದರಬೇಕು, ಹುಟ್ಟಿದ ದೇವರು ಹುಲ್ಲು ಮೇಯುಸುವುದಿಲ್ಲ ಎಂದ ಅವರು, ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಡೆದು ಹಿಂದುತ್ವ ಉಳಿಸಿ. ಇಂದಿನ ಮಕ್ಕಳಿಗೆ ಶಿಕ್ಷಣ ಕಲಿಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ತಂದಿವೆ. ಅವುಗಳ ಸದ್ಭಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಕೋಲ್ಹಾರದ ಕಲ್ಲಿನಾಥ ದೇವರು ಹಾಗೂ ನಾಗರಾಳ ಶೇಷಪ್ಪಯ್ಯ ಗುರುನಿಂಗಪ್ಪಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ, ಪಿ.ಎಚ್.ಪೂಜಾರಿ, ಸಿಪಿಐ ಹನಮಂತ ಸಣಮನಿ, ಹುಚ್ಚಪ್ಪ ಕುಂಬಾರ ಮಾತನಾಡಿದರು.

ಪ್ರಗತಿಪರ ರೈತ ದೊಡ್ಡಣ್ಣ ಕಾಳಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ರಾಮಣ್ಣ ಕಾಳಪ್ಪಗೋಳ, ರಾಮನಗೌಡ ಜಕ್ಕನಗೌಡ, ಮಲ್ಲಿಕಾರ್ಜುನ ಅಂಗಡಿ, ಮುತ್ತು ಬೋರ್ಜಿ, ಶಿವಪ್ಪ ಅವಟಿ, ಗುಂಡಪ್ಪ ಕಾಳಪ್ಪಗೋಳ, ಮಲ್ಲಿಕಾರ್ಜುನ ತೊದಲಬಾಗಿ ಉಪನ್ಯಾಸ ನೀಡಿದರು, ಗುರುರಾಜ್ ಲೂತಿ ಇತರರು ಇದ್ದರು.


ಜಾತ್ಯತೀತವಾಗಿ ತಾಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿಯ 200ಕ್ಕಿಂತ ಅಧಿಕ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.--------

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡದ ವಿದ್ಯಾರ್ಥಿಗಳಿಗೆ ನಮ್ಮ ನಿರಾಣಿ ಪೌಂಡೇಶನ್‌ದಿಂದ ಉಚಿತವಾಗಿ ಬುಕ್, ಡ್ರೇಸ್ ಸೇರಿದಂತೆ ಅವರು ಪದವಿಯ ವರೆಗೂ ಕಲಿಯುವ ಸಂಪೂರ್ಣ ಶಿಕ್ಷಣ ವೆಚ್ಚ ನಾವೇ ಭರಿಸುತ್ತೇವೆ. ಕಲಿಯುವ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹಣದ ಕಷ್ಟ ಇದ್ದರೆ ನೇರವಾಗಿ ನಮಗೆ ಕಾಲ್ ಮಾಡಿ ನಾವು ನಿಮಗೆ ಸಹಾಯ ಮಾಡುತ್ತೇವೆ. ಬಡತನದಲ್ಲಿ ಬೆಳೆದ ಮಕ್ಕಳೇ ಸಾಧನೆ ಮಾಡಿರುವುದು ಹೆಚ್ಚು. ಸತತ ಪ್ರಯತ್ನದಿಂದ ಸಾಧನೆ ಸಾಧ್ಯ.

-ಡಾ.ಮುರುಗೇಶ್ ನಿರಾಣಿ, ಉಪಾಧ್ಯಕ್ಷ ರಾಜ್ಯ ಬಿಜೆಪಿ.

ಪಾಲಕರು ಇಂದು ತಮ್ಮ ಮಕ್ಕಳಿಗೆ ಪ್ರಾಮಾಣಿಕ ಶಿಕ್ಷಣ ಕೊಡುತ್ತಿದ್ದಾರೆ. ಶಿಕ್ಷಣಕ್ಕೆ ಇಂದು ಹೆಚ್ಚು ಮಹತ್ವ ಬಂದಿದೆ. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣ ಪಡೆಯಲು ಶ್ರಮಿಸಿ. ಮಕ್ಕಳು ವಿದ್ಯೆಯ ಜತೆಗೆ ಸಂಸ್ಕಾರ ಪಡೆಯಬೇಕು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದ ಪ್ರಗತಿಪರ ರೈತ ರಾಮಣ್ಣ ಕಾಳಪ್ಪಗೋಳ ಕೈಗೊಂಡ ಈ ಕಾರ್ಯ ಶ್ಲಾಘನೀಯ.

-ಪಿ.ಸಿ.ಗದ್ದಿಗೌಡರ, ಸಂಸದ