ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ವರದಾನ: ಜಗದೀಶ ರೋಹನ್‌

| Published : Nov 11 2025, 02:30 AM IST

ಸಾರಾಂಶ

ನೌಕರರಿಗೆ ವೇತನ ಪಾವತಿ ಸಹ ತಾಂತ್ರಿಕ ಪರಿಣಿತ ನಿರ್ವಾಹಕನಿಂದ ಮಾತ್ರ ಸಾಧ್ಯ. ಎಚ್ಆರ್‌ಎಂಎಸ್ ಹಾಗೂ ಖಜಾನೆ- 2 ತಂತ್ರಾಂಶವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ನೌಕರರಿಗೆ ತಿಂಗಳ ಕೊನೆಯಲ್ಲಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು.

ಗದಗ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗೆ ತಿಂಗಳ ಕೊನೆಯಲ್ಲಿ ಸರಿಯಾಗಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ ರೋಹನ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಭವನ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಖಜಾನೆ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಎಚ್‌ಆರ್‌ಎಂಎಸ್‌ ತಂತ್ರಾಂಶ- 2.0 ಹಾಗೂ ಕೆಎಎಸ್‌ಎಸ್‌ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ನೌಕರರಿಗೆ ವೇತನ ಪಾವತಿ ಸಹ ತಾಂತ್ರಿಕ ಪರಿಣಿತ ನಿರ್ವಾಹಕನಿಂದ ಮಾತ್ರ ಸಾಧ್ಯ. ಎಚ್ಆರ್‌ಎಂಎಸ್ ಹಾಗೂ ಖಜಾನೆ- 2 ತಂತ್ರಾಂಶವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ನೌಕರರಿಗೆ ತಿಂಗಳ ಕೊನೆಯಲ್ಲಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದರು.ರಾಜ್ಯ ಸರ್ಕಾರಿ ನೌಕರರಿಗೆ ಇತ್ತೀಚೆಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಎಂಬ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಯೋಜನೆ ಜಾರಿ ಮಾಡಲಾಗಿದೆ. ಇದರ ನೋಂದಣಿ ಸರಿಯಾದ ಅನುಷ್ಠಾನಕ್ಕೆ ಇರುವ ಗೊಂದಲಗಳ ನಿವಾರಣೆಗೆ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಮಾಜಿ ಉಪಾಧ್ಯಕ್ಷ ರವಿ ಗುಂಜೀಕರ್ ಮಾತನಾಡಿ, ನೌಕರರ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಸಂಜೀವಿನಿ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಪ್ರತಿ ತಿಂಗಳು ಸಣ್ಣ ಪ್ರಮಾಣದ ವಂತಿಗೆ ನೀಡಬೇಕು, ಅನಾರೋಗ್ಯದ ಸಂದರ್ಭದಲ್ಲಿ ಆರ್ಥಿಕವಾಗಿ ಹೆಚ್ಚು ಸಹಾಯವಾಗಲಿದೆ ಎಂದರು.

ನಗದುರಹಿತ ಸೇವೆ ಜಾರಿಗೊಳಿಸಲು ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಯತ್ನಿಸಿ ಯಶಸ್ವಿಯಾಗಿದೆ. ಇದರ ಸದ್ಬಳಕೆ ನೌಕರರು ಮಾಡಿಕೊಳ್ಳುವಂತೆ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಇತ್ತೀಚೆಗೆ ಸರ್ಕಾರದ ಎಲ್ಲ ಯೋಜನೆಗಳು ಅನುಷ್ಠಾನದಲ್ಲಿ ತಾಂತ್ರಿಕತೆ ಅಳವಡಿಸಲಾಗಿದೆ. ಅದೇ ರೀತಿ ನೌಕರರ ವೇತನ ಹಾಗೂ ಸೇವೆಗಳ ಕುರಿತಂತೆ ಎಲ್ಲವುಗಳನ್ನು ಸಹ ತಾಂತ್ರಿಕ ಸಿಬ್ಬಂದಿ ನಿರ್ವಹಿಸಬೇಕಿದೆ. ನೌಕರರ ಜಿಪಿಎಫ್, ಕೆಜಿಐಡಿ ವಿಮಾ ಸೇರಿದಂತೆ ಎಲ್ಲವುಗಳನ್ನು ಸಹ ಬೆರಳು ತುದಿಯಲ್ಲಿ ಬಳಸುವ ತಂತ್ರಜ್ಞಾನ ರೂಪಿಸಿದೆ. ಅದೇ ತರ ಆರೋಗ್ಯ ಸಂಜೀವಿನಿ ನೋಂದಣಿ ಎಲ್ಲರೂ ಮಾಡಿಕೊಳ್ಳುವ ಮೂಲಕ ಅನಾರೋಗ್ಯ ಸಂದರ್ಭದಲ್ಲಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಕಾರ್ಯಾಗಾರದಲ್ಲಿ ಯೋಜನಾಧಿಕಾರಿಗಳಾದ ನೀಲಮಾ ಬಿ. ಅವರು, ಎಚ್‌ಆರ್‌ಎಂಎಸ್‌- 2.0 ಮತ್ತು ಪರಿಚಯ, ಇಎಸ್‌ಆರ್‌ ಕುರಿತು, ಸುಧಾಮಣಿ ಕೆಎಎಸ್‌ಎಸ್‌ ಮತ್ತು ಇಎಸ್‌ಎಸ್‌ ಕುರಿತು, ತಾಂತ್ರಿಕ ತರಬೇತುದಾರ ಸುಮಂತ್ ಅವರು, ಎಚ್‌ಆರ್‌ಎಂಎಸ್‌- 2.0 ಮಾಡ್ಯುಲ್ಸ್‌ ಕುರಿತು ತರಬೇತಿ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ‌, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎಸಿ‌ ಗಂಗಪ್ಪ ಎಂ., ಆರ್.ಎಸ್. ಬುರಡಿ, ಹರಿನಾಥಬಾಬು, ಜಿ.ಎಂ. ಮುಂದಿನಮನಿ ಸೇರಿದಂತೆ ಇತರರು ಇದ್ದರು.