ಕುಷ್ಟಗಿ: ಮಾನವನ ದೇಹ ಪ್ರಕೃತಿಯ ಅದ್ಭುತ ಸೃಷ್ಟಿಯಾಗಿದೆ. ದೇಹದ ಅಂಗಾಂಗಗಳ ಕಾರ್ಯವೈಖರಿ ಅರಿತು ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಸದಸ್ಯ ಡಾ. ಎಸ್. ಬಿ.ಹಂದ್ರಾಳ ಹೇಳಿದರು.
ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಇನ್ನರ್ ವೀಲ್ ಕ್ಲಬ್ ವತಿಯಿಂದ ಯೋಗ ದಿನಾಚರಣೆ ಅಂಗವಾಗಿ ನಡೆಯುತ್ತಿರುವ 7ನೇ ದಿನದ ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.ಶಿಸ್ತಿನ ಜೀವನವೇ ಯಶಸ್ಸಿನ ಮೂಲ ಮಂತ್ರವಾಗಿದೆ. ಸಮಯ ಪಾಲನೆ, ಉತ್ತಮ ಚಿಂತನೆ, ನಿಯಮಿತ ವ್ಯಾಯಾಮ ಮತ್ತು ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯಕರ ಬದುಕು ಸಾಧ್ಯ. ಯೋಗ ಮತ್ತು ಶಿಸ್ತು ಪರಸ್ಪರ ಪೂರಕವಾಗಿದ್ದು ನಿಯಮಿತ ಯೋಗಾಭ್ಯಾಸದಿಂದ ದೇಹ ಸದೃಢವಾಗುವುದರ ಜತೆಗೆ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ವಿರೇಶ ಬಂಗಾರಶೆಟ್ಟರ ಮಾತನಾಡಿ, ಇಂದಿನ ಜೀವನ ಶೈಲಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿಗೆ ಹೆಚ್ಚಿನ ಮಹತ್ವ ನೀಡಬೇಕು. ಪೌಷ್ಟಿಕಾಂಶಯುಕ್ತ ಆಹಾರ, ಹಸಿರು ತರಕಾರಿ, ಹಣ್ಣುಗಳು ಮತ್ತು ಸಾಕಷ್ಟು ನೀರಿನ ಸೇವನೆ ದೇಹದ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ. ಜಂಕ್ ಫುಡ್ಗಳಿಂದ ದೂರವಿದ್ದು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಲತಾ ಸ್ಥಾವರಮಠ, ಕುಸುಮಾ ಶ್ಯಾಟಿ, ಶಿವಲೀಲಾ ದಾವಣಗೆರೆ, ಶಾರದಾ ಶೆಟ್ಟರ್, ಗಿರಿಜಾ ಮಾಲಿಪಾಟೀಲ,ಕಸ್ತೂರಿ ಉಪ್ಪಿನ, ಅಚಲರಾಮ್ಜಿ, ಕುಮಾರ ಬಡಿಗೇರ, ಹನುಮೇಶ ನಾಯಕ, ಶರಣಬಸವ ಮಾಟೂರ, ಗಣೇಶ ಗುಡ್ಡದ, ನಾಗಪ್ಪ ಬಿಳಿಯಪ್ಪನವರ, ಪಂಕಜಕುಮಾರ ಸೇರಿದಂತೆ ಅನೇಕರು ಇದ್ದರು.