ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ. ಸದೃಢ ಆರೋಗ್ಯವಂತ ಮನುಷ್ಯರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ದೈಹಿಕ ಅನಾರೋಗ್ಯಕ್ಕೆ ನಮ್ಮ ಮಾನಸಿಕ ಆರೋಗ್ಯ ಅಥವಾ ಮನಸ್ಥಿತಿಯೇ ಕಾರಣ ಎಂದು ಅರುಣ ಕುಮಾರ ಗುರೂಜಿ ಹೇಳಿದರು.ಸ್ಥಳೀಯ ಟೊಣಪಿನಾಥ ಸಮುದಾಯ ಭವನದಲ್ಲಿ ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯೋಗ ಬ್ರಹ್ಮ ಋಷಿ ಪ್ರಭಾಕರ ಗುರೂಜಿಯವರಿಂದ ಸೃಷ್ಟಿ ಮಾಡಿದ ಸಿದ್ಧ ಸಮಾಧಿ ಯೋಗ ಶಿಬಿರದಲ್ಲಿ ಮಾತನಾಡಿದರು. ಯೋಗವೇ ಶ್ರೀರಕ್ಷೆ. ಯೋಗದಿಂದ ಪ್ರತಿಯೊಬ್ಬ ಮನುಷ್ಯನು ಸಾಧಾರಣದಿಂದ ಅಸಾಧಾರಣದೆಡೆಗೆ ಸುಲಭವಾಗಿ ಚಲಿಸಬಹುದು ಎಂದು ಹೇಳಿದರು.
ಒಂದು ರಾಷ್ಟ್ರದ ಅಭಿವೃದ್ಧಿ ಆ ದೇಶದ ನಾಗರಿಕರ ತಲಾ ಆರೋಗ್ಯ ಅವಲಂಬಿಸಿರುತ್ತದೆ. ಹೀಗಾಗಿ ಆರೋಗ್ಯವಂತರು ಸಮಾಜದ ಮತ್ತು ರಾಷ್ಟ್ರದ ಆಸ್ತಿಯಾಗುತ್ತಾರೆ. ನೈಸರ್ಗಿಕ ಪರಿಪೂರ್ಣ ಆಹಾರ ಸೇವನೆ, ನಿರಂತರ ಧ್ಯಾನ, ಪ್ರಾಣಾಯಾಮ ಮತ್ತು ಶುದ್ಧ ಮನಸಿನ ಆರೋಗ್ಯಕರ ಚಿಂತನೆಗಳಿಂದ ನಮ್ಮನ್ನು ನಾವು ಸುಧಾರಿಸಿಕೊಂಡು ಸಮಾಜಕ್ಕೆ ಮಾದರಿಯಾಗೋಣ. ಸ್ವಸ್ಥ ಸಮಾಜದಿಂದ ಸುಭದ್ರ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.ನಾವು ಸೇವಿಸುವ ಆಹಾರ ನಮ್ಮ ಮನಸ್ಥಿತಿ ಮತ್ತು ಆಲೋಚನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ತಾಮಸಿ ಆಹಾರಗಳು ಮನುಷ್ಯನಲ್ಲಿ ದ್ವೇಷ, ಕೋಪ, ಅಸೂಯೆ ಮುಂತಾದ ಗುಣಗಳನ್ನು ಹಾಗೂ ಸಾತ್ವಿಕ ಆಹಾರಗಳು ಮನುಷ್ಯನಲ್ಲಿ ಸಹನೆ, ಸಹಬಾಳ್ವೆ, ಪ್ರೀತಿ ವಿಶ್ವಾಸ ಮುಂತಾದ ಗುಣಗಳನ್ನು ಬೆಳೆಸುತ್ತವೆ. ಹಾಗಾಗಿ ತಾವೆಲ್ಲರೂ ಸಾತ್ವಿಕ ಆಹಾರ ಸೇವಿಸುವುದರಿಂದ ಸಜ್ಜನರಾಗಬೇಕು ಎಂದು ಆಶಿಸಿದರು.
ಕಳೆದ ಹತ್ತು ದಿನಗಳಿಂದ ಪ್ರತಿನಿತ್ಯ ಬೆಳಗ್ಗೆ ೫:೩೦ ರಿಂದ ಬೆಳಗ್ಗೆ 9 ರವರೆಗೆ ಪ್ರಾಣಾಯಾಮ, ಧ್ಯಾನ, ವ್ಯಾಯಾಮಗಳ ಮೂಲಕ ತರಬೇತಿ ನೀಡಿ ಉತ್ತಮ ಆರೋಗ್ಯಕ್ಕಾಗಿ ಆಹಾರದ ಪದ್ಧತಿಗಳ ಬಗ್ಗೆ ವಿವರಿಸಿದರು. ತರಬೇತಿಯಲ್ಲಿ 15ಕ್ಕಿಂತ ಹೆಚ್ಚು ಮಹಿಳೆಯರು ಸೇರಿದಂತೆ 40ಕ್ಕೂ ಅಧಿಕ ಶಿಬಿರಾರ್ಥಿಗಳು ಇದರ ಲಾಭ ಪಡೆದರು. ಬುಧವಾರ ಬೆಳಗ್ಗೆ ಕೊನೆಯ ತರಬೇತಿಯೊಂದಿಗೆ ಶಿಬಿರ ಮುಕ್ತಾಯವಾಯಿತು. ನಂತರ ನಾಲ್ಕು ದಿನಗಳ (ಎಎಂಸಿ) ನಿತ್ಯ ಸಮಾಧಿ ಯೋಗ ತರಬೇತಿಗೆ ಸಮೀಪದ ಕಲಹಳ್ಳಿ ಗ್ರಾಮದ ಸತ್ಯಕಾಮ ಪ್ರತಿಷ್ಠಾನದ ಸುಮ್ಮನೆಯ ಆವರಣಕ್ಕೆ ಶಿಬಿರಾರ್ಥಿಗಳಿಗೆ ನಿತ್ಯ ಸಮಾಧಿ ಯೋಗ ಆಯೋಜಿಸಲಾಗಿದೆ ಎಂದು ಅರುಣಕುಮಾರ ಗುರೂಜಿ ಹೇಳಿದರು.
-----------
ಕೋಟ್....ಆಧುನಿಕತೆ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿ ಮತ್ತು ಆಹಾರಕ್ಕೆ ಮಾರುಹೋಗುತ್ತಿರುವ ನಮ್ಮ ಜನರಿಗೆ ಇಂತಹ ಶಿಬಿರಗಳು ಅತ್ಯವಶ್ಯಕ. ಈ ಶಿಬಿರದಲ್ಲಿ ಭಾಗಿಯಾದ ಪ್ರತಿಯೊಬ್ಬ ವ್ಯಕ್ತಿಯು ಸದೃಢ ಆರೋಗ್ಯವನ್ನು ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಾನಸಿಕ ಮತ್ತು ದೈಹಿಕ ಸದೃಢತೆಯಿಂದ ಶಿಬಿರಾರ್ಥಿಯ ಕುಟುಂಬ ಸದೃಢಗೊಂಡು ವ್ಯಕ್ತಿ ಶಕ್ತಿಯಾಗಿ ರಾಷ್ಟ್ರದ ಆಸ್ತಿಯಾಗಬಲ್ಲ.
- ರವಿ ಜವಳಗಿ, ನಿಂಗಪ್ಪ ಬಾಳಿಕಾಯಿ, ಬಸವರಾಜ ಕರೆಹೊನ್ನ. ಶಿಬಿರಾರ್ಥಿಗಳು.