ನಶೆಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸಿ

| Published : Nov 25 2024, 01:03 AM IST

ಸಾರಾಂಶ

ಹಿರಿಯ ನಾಗರಿಕರ ಸಂರಕ್ಷಣೆ ಕಾನೂನಗಳ ಅರಿವು ಮೂಡಿಸುವುದರ ಜತೆಗೆ ನಶೆಮುಕ್ತ ಭಾರತ ನಿರ್ಮಾಣದ ಧ್ಯೇಯದೊಂದಿಗೆ ಈ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳಿಗೆ ಸಹಾಯವಾಣಿ ೧೦೯೦ ಅಥವಾ ೧೪೫೬೭ ಕ್ಕೆ ಸಂಪರ್ಕಿಸಿ ಸಲಹೆ ಪಡೆಯಲು ಅವಕಾಶವಿದೆ

ಕನ್ನಡಪ್ರಭ ವಾರ್ತೆ ಕೋಲಾರಯುವಕರು ಮತ್ತು ವಿದ್ಯಾರ್ಥಿಗಳು ಧೂಮಪಾನ, ಗುಟ್ಕಾ, ಗಾಂಜಾ, ಮದ್ಯ, ಹೇರಾಯಿನ್, ಮುಂತಾದ ಮಾದಕ ವಸ್ತುಗಳನ್ನು ಬಳಸುವ ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಹಾಗೂ ನಶೆಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ ಕರೆ ನೀಡಿದರು. ತಾಲೂಕಿನ ನಾಯಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ದಿವ್ಯಜ್ಯೋತಿ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ, ಎಸ್ಪಿ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಶೆಮುಕ್ತ ಭಾರತ ಕುರಿತ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಸಹಾಯವಾಣಿ ೧೦೯೦ ಬಳಸಿ

ಹಿರಿಯ ನಾಗರಿಕರ ಸಂರಕ್ಷಣೆ ಕಾನೂನಗಳ ಅರಿವು ಮೂಡಿಸುವುದರ ಜತೆಗೆ ನಶೆಮುಕ್ತ ಭಾರತ ನಿರ್ಮಾಣದ ಧ್ಯೇಯದೊಂದಿಗೆ ಈ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳಿಗೆ ಸಹಾಯವಾಣಿ ೧೦೯೦ ಅಥವಾ ೧೪೫೬೭ ಕ್ಕೆ ಸಂಪರ್ಕಿಸಿ ಸಲಹೆ ಪಡೆಯಲು ಅವಕಾಶವಿದೆ. ಮಾದಕ ವಸ್ತುಗಳ ನಿರ್ಮೂಲನೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದ ಅವರು, ಯುವಕರು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅರಿವುಂಟಾಗುವಂತೆ ಸಮಾಜಕ್ಕೆ ಸಂದೇಶಗಳನ್ನು ನೀಡುವಂತಾಗಬೇಕು ಎಂದರು.

ಮಾದಕ ವಸ್ತುಗಳ ಬಳಕೆ, ಸಾಗಾಣಿಕೆ, ಮಾರಾಟ ಇವುಗಳು ಕಾನೂನು ಬಾಹಿರ ಎನ್.ಡಿ.ಪಿ.ಎಸ್.ಕಾಯ್ದೆ ಪ್ರಕಾರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸ ಬಹುದಾಗಿದೆ ಇದಕ್ಕೆ ಅವಕಾಶ ಕಲ್ಪಿಸದಂತೆ ಕೋಟ್ಟಾ ಕಾಯಿದೆಯ ೨೦೦೩ರ ಕಾನೂನುಗಳನ್ನು ಪಾಲಿಸ ಬೇಕು, ೧೮ ರಿಂದ ೨೨ ವರ್ಷದ ಯುವಕರು ಈ ವ್ಯಸನಕ್ಕೆ ಬಲಿಯಾಗಿ ಕಾರಾಗೃಹಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ ಎಂದರು.ಗಾಂಜಾ ಬೆಳೆಯುವುದು ಅಪರಾಧ

ಹಣದ ಆಸೆಗಾಗಿ ರೈತರು ಸಹ ಗಾಂಜಾವನ್ನು ಬೆಳೆದು ಅಪರಾಧಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ವಿದ್ಯಾವಂತರು ಸಹ ಒತ್ತಡಗಳಿಂದ ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಜೀವನ ಪರ್ಯಾಂತ ಮಾದಕ ವಸ್ತುಗಳ ಚಟದ ದಾಸರಾಗಿ ಕೊನೆಗೆ ಕ್ಯಾನ್ಸರ್ ಮುಂತಾದ ರೋಗಗಳಲ್ಲಿ ನರಳಾಡುವ ಮೂಲಕ ಅಂತ್ಯ ಕಾಣುವಂತಾಗುತ್ತಾರೆ ಎಂದು ವಿಷಾಧಿಸಿದರು.ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಸದ್ಬಳಿಕೆ ಮಾಡಿ ಕೊಳ್ಳಬೇಕೆ ಹೊರತು ಅವುಗಳಿಂದ ಹಾದಿ ತಪ್ಪುವಂತಾಗಬಾರದು. ಪುಸ್ತಕಗಳನ್ನು ಹೆಚ್ಚಾಗಿ ಓದುವ ಮೂಲಕ ಜ್ಞಾನ ಪಡೆಯಿರಿ ಎಂದರು. ಇದೇ ಸಂದರ್ಭದಲ್ಲಿ ಎನ್‌ಎಲ್‌ಎಸ್‌ಎ ಸಹಾಯವಾಣಿ ೧೫೧೦೦ ಬಳಕೆ ಕುರಿತು ನ್ಯಾಯಾಧೀಶರು ಮಾಹಿತಿ ನೀಡಿದರು.ದುಶ್ಚಟಗಳ ದಾಸರಗಾಬೇಡಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕಿ ಯಶೋಧಮ್ಮ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ನೀವು ಇಲ್ಲಿ ಬದುಕು ರೂಪಿಸಿಕೊಳ್ಳುವ ಆಲೋಚನೆ ಮಾಡಿ, ಶ್ರಮವಹಿಸಿ ಓದಿ ಅದು ಬಿಟ್ಟು ದುಶ್ಚಟಗಳಿಗೆ ದಾಸರಾಗಿ ಇಡೀ ನಿಮ್ಮ ಜೀವನ ನಾಶಮಾಡಿಕೊಳ್ಳಲು ನೀವೇ ಕಾರಣರಾಗದಿರಿ ಎಂದು ಎಚ್ಚರಿಸಿದರು.ಕಾಯಕ್ರಮದಲ್ಲಿ ಅಂಗವಿಕಲ ಕಲ್ಯಾಣಾಧೀಕಾರಿ ಎಂ.ರಮ್ಯ, ಯೋಜನಾಧಿಕಾರಿ ಸಿ.ಎಚ್.ಹರೀಶ್, ಹಿರಿಯ ನಾಗರೀಕರ ಸಹಾಯವಾಣಿಯ ದಿವ್ಯಜ್ಯೋತಿ, ಶಿಕ್ಷಕರಾದ ಲೋಕೇಶ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.