ಹೆಮ್ಮಾಡಿ ಜನತಾ ಪ.ಪೂ. ಕಾಲೇಜಿನಲ್ಲಿ ‘ಜನತಾ ಅವಿಷ್ಕಾರ್ 2ಕೆ25‘ ಬಿಸಿನೆಸ್ ಡೇ ಇತ್ತೀಚೆಗೆ ಸಂಪನ್ನಗೊಂಡಿತು.

ಕುಂದಾಪುರ: ಪ್ರತಿಯೊಂದು ಕ್ಷೇತ್ರದಲ್ಲೂ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶಗಳಿರುತ್ತವೆ. ಈ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು. ಮಾರುಕಟ್ಟೆ ಅಧ್ಯಯನ ಮಾಡಿ ವ್ಯವಹಾರ ಕುದುರಿಸುವುದು ಕೂಡ ಒಂದು ಕಲೆ. ಎಲ್ಲರೂ ವೈದ್ಯರು, ಎಂಜಿನಿಯರ್ ಆಗಲೂ ಸಾಧ್ಯವಿಲ್ಲ. ಅವರರ ಆಸಕ್ತಿಗೆ ಅನುಗುಣವಾಗಿ ಭವಿಷ್ಯದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ನಾಡೋಜ ಡಾ.ಜಿ.ಶಂಕರ್ ಹೇಳಿದ್ದಾರೆ.

ಇಲ್ಲಿನ ಹೆಮ್ಮಾಡಿ ಜನತಾ ಪ.ಪೂ. ಕಾಲೇಜಿನಲ್ಲಿ ನಡೆದ ‘ಜನತಾ ಅವಿಷ್ಕಾರ್ 2ಕೆ25‘ ಬಿಸಿನೆಸ್ ಡೇಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ವ್ಯವಹಾರ ಮಳಿಗೆ ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ವಿಜ್ಞಾನ, ವಾಣಿಜ್ಯ, ಕಲಾ ಕ್ಷೇತ್ರಗಳಲ್ಲಿ ಬೇರೆ ಬೇರೆಯಾದ ಅವಕಾಶಗಳಿವೆ. ಸಂತೆ ವ್ಯಾಪಾರ ಹಾಗೂ ವಹಿವಾಟಿನಿಂದ ಮಾರಾಟಗಾರರಿಗೆ ಸಂತೃಪ್ತಿ ದೊರಕುತ್ತದೆ. ಸ್ವಾವಲಂಬಿ ಬದುಕು ಕಟ್ಟಿಕೊಂಡು, ಕನಿಷ್ಠ 10 ಜನರಿಗೆ ಉದ್ಯೋಗಾವಕಾಶ ನೀಡುವ ಸಾಧನೆ ನಿಮ್ಮದಾಗಬೇಕು. ಗುರಿ, ಪ್ರಾಮಾಣಿಕತೆ, ಕಠಿನ ಪರಿಶ್ರಮ ಹಾಗೂ ಬದ್ಧತೆಯಿದ್ದರೆ ಸಾಧನೆ ಸಾಧ್ಯ ಎಂದರು.ವಿವಿವಿ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಜನತಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಮಾರ್ಗದರ್ಶಕಿ ಚಿತ್ರಾ ಕಾರಂತ್, ಆದಿಪರಾಶಕ್ತಿ ಗುರುಪೀಠ ಯಡಮೊಗೆಯ ರಾಜಾರಾಮ ಗುರೂಜಿ, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ., ಉದ್ಯಮಿಗಳಾದ ಕಿರಣ್ ದೇವಾಡಿಗ, ಚಂದ್ರ ಕುಂದರ್ ಬೆಂಗಳೂರು, ಯೋಗೀಂದ್ರ ತಿಂಗಳಾಯ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ, ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಉದಯ್‌ಕುಮಾರ ಹಟ್ಟಿಯಂಗಡಿ, ಪ್ರಗತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್, ಕಲಾವಿದ ಚೇತನ್‌ ಕುಮಾರ್ ಹಳ್ಳಿಹೊಳೆ ಮತ್ತಿತರರು ಉಪಸ್ಥಿತರಿದ್ದರು.

ಜನತಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಪ್ರಸ್ತಾವಿಸಿದರು. ಉಪನ್ಯಾಸಕರಾದ ಅಭಿಲಾಷ್ ಕ್ಷತ್ರೀಯ ಸ್ವಾಗತಿಸಿ, ಉದಯ್ ನಾಯ್ಕ್ ನಿರೂಪಿಸಿದರು. ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ವಂದಿಸಿದರು.