ಧಾರವಾಡ:

ಆರು ತಿಂಗಳಿನಿಂದ ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ ಹೋರಾಟ ಮಾಡುತ್ತಿರುವ ಉದ್ಯೋಗಾಕಾಂಕ್ಷಿಗಳ ಹೋರಾಟ ಹತ್ತಿಕ್ಕಿದ ಪೊಲೀಸರಿಗೆ ಧಾರವಾಡ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೇ, ಮುಖಂಡರ ಮೇಲೆ ಹಾಕಿದ್ದ ಎಫ್‌ಐಆರ್‌ಗೆ ತಡೆ ನೀಡಿದೆ. ವಿದ್ಯಾರ್ಥಿ ಮುಖಂಡ ಕಾಂತಕುಮಾರ್ ಸೇರಿ ಉದ್ಯೋಗಾಕಾಂಕ್ಷಿಗಳ ಮೇಲೆ 4 ಎಫ್ಐಆರ್ ದಾಖಲಾಗಿದ್ದವು. ಇದಕ್ಕೆ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಹೈಕೋರ್ಟ್‌, ಎಫ್ಐಆರ್‌ಗೆ ತಡೆಯಾಜ್ಞೆ ನೀಡಿದೆ. ಪೊಲೀಸ್ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಧಾರವಾಡ ಹೈಕೋರ್ಟ್ ವಕೀಲ ಗಿರೀಶ್ ಭಾರದ್ವಾಜ ಹೋರಾಟಗಾರರ ಪರವಾಗಿ ವಾದ ಮಂಡಿಸಿದ್ದರು. ಇದರಿಂದ ಸದ್ಯಕ್ಕೆ ಹೈಕೋರ್ಟ್ ಪೀಠದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.

ಹೋರಾಟ ನಿಲ್ಲಿಸಲ್ಲ:

ಈ ಕುರಿತು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ರಾಜ್ಯಾದ್ಯಕ್ಷ ಕಾಂತಕುಮಾರ್‌, ಉದ್ಯೋಗಕ್ಕಾಗಿ ನಡೆಸಿದ ಹೋರಾಟಕ್ಕಾಗಿ ನಮ್ಮ ಮೇಲೆ ನಾಲ್ಕು ಎಫ್ಐಆರ್ ಹಾಕಿದ್ದಾರೆ. ನಾವು ಹೈಕೋರ್ಟ್‌ ಮೋರೆ ಹೋಗಿದ್ದೇವು. ಅದಕ್ಕೆ ತಡೆ‌ ಸಿಕ್ಕಿದೆ. ಹೋರಾಟಕ್ಕೂ ಕೋರ್ಟ್‌ ಅನುಮತಿ ಕೊಟ್ಟೆ ಕೊಡುತ್ತೆ ಎಂಬ ನಂಬಿಕೆ ಇದೆ. ಸರ್ಕಾರ ಪೊಲೀಸ್ ಇಲಾಖೆಯಿಂದ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೋರ್ಟ್‌ನಿಂದ ಅನುಮತಿ ಪಡೆದು ಹೋರಾಟವನ್ನು ತೀವ್ರಗೊಳಿಸುತ್ತೇವೆ. 46,400 ಹುದ್ದೆಗಳನ್ನು ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪ ಹಾಗೂ ಕೆಪಿಎಸ್‌ಸಿ ಎಲ್ಲ ನೇಮಕಾತಿ ತನಿಖೆ ನಡೆಸಿ ಸಿಬಿಐಗೆ ಕೊಡಬೇಕು. ಸರ್ಕಾರ ನೇಮಕಾತಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ ಎಂದರು.