ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತದಲ್ಲಿ ಹಿಂದುತ್ವ ಮತ್ತು ಹಿಂದು ಧರ್ಮ ಗಟ್ಟಿಯಾಗಿದೆ ಎಂದರೆ ಇದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರ ಎಂದು ಉಪನ್ಯಾಸ ನೀಡಿದ ಶಿಕ್ಷಕ ರಾಮರಾವ್ ಹೇಳಿದರು.ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ 397ನೇ ಜಯಂತಿ ಉತ್ಸವ ಸಮಾರಂಭದಲ್ಲಿ ಶಿವಾಜಿ ಬದುಕು, ಸಾಧನೆಗಳ ಕುರಿತು ಉಪನ್ಯಾಸ ನೀಡಿ ಶಿವಾಜಿಗೆ ತಮ್ಮ ಬಾಲ್ಯದಲ್ಲಿ ತಾಯಿ ಜೀಜಾಬಾಯಿ ಮತ್ತು ಗುರು ದಾದಾಜಿ ಕೊಂಡದೇವರಿಂದ ದೊರೆತ ಶಿಕ್ಷಣದಿಂದ ಅವರೊಬ್ಬ ಮಹಾಪರಾಕ್ರಮಿ ಹಿಂದು ಧರ್ಮದ ಅದಮ್ಯ ಪ್ರೇಮಿಯಾಗಿ ಹೊರಹೊಮ್ಮಿದರು. ನಂತರದಲ್ಲಿ ಬಿಜಾಪುರ ಸುಲ್ತಾನರ ವಿರುದ್ಧ ತನ್ನದೇ ಆದ ಸೈನ್ಯ ಕಟ್ಟಿ ವಿಶೇಷವಾಗಿ ಗೆರಿಲ್ಲಾ ಮಾದರಿ ದಾಳಿಯಿಂದ ತನ್ನ ವೈರಿಗಳ ಮಟ್ಟಹಾಕಿ ತನ್ನದೇ ಆದ ರಾಜ್ಯ ಕಟ್ಟಿದ ಧೀರ ರಾಜನಾಗಿ ಅಳ್ವಿಕೆ ನಡೆಸಿದ ದೇಶದ ಹೆಮ್ಮೆ ಯ ರಾಜನಾಗಿದ್ದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಭಾರತದ ಇತಿಹಾಸದ ಪುಟಗಳಲ್ಲಿ ಛತ್ರಪತಿ ಶಿವಾಜಿಯವರ ದೇಶ ಪ್ರೇಮ ಹಾಗೂ ಹಿಂದುತ್ವದ ಬಗ್ಗೆ ಅವರಿಗಿದ್ದ ಆಚಲ ಗೌರವಗಳು ಇಂದಿಗೂ ಚಿರಸ್ಥಾಯಿಯಾಗಿದೆ. ಹಿಂದು ಧರ್ಮ ಮತ್ತು ಹಿಂದುತ್ವದ ವಿಚಾರಗಳ ಬಂದಾಗ ಪ್ರತಿಯೊಬ್ಬರಿಗೂ ಮೊದಲು ನೆನಪಾಗುವುದು ಅಪರೂಪದ ವೀರಪುತ್ರ ಛತ್ರಪತಿ ಶಿವಾಜಿ ಹೆಸರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮರಾಠ ಸಮುದಾಯದ ಮುಖಂಡರಾದ ದೇವರಾಜ್, ಹರಳಹಳ್ಳಿ ಮನೋಹರ, ವೀರೇಶ ಹನಗವಾಡಿ, ರೈತ ಸಂಘದ ಬಸಪ್ಪ, ಮಾರಿಕೊಪ್ಪದ ಮಂಜಪ್ಪ ಸೇರಿ ಶಿವಾಜಿಯವರು ಜಯಂತಿ ಕಾರ್ಯಕ್ರಮದಲ್ಲಿ ಮರಾಠ ಸಮುದಾಯದ ಜೊತೆಗೆ ದಲಿತ ಮತ್ತು ಮುಸ್ಲಿಂ ಸಮುದಾಯದವರಿದ್ದರು. ಪಶುವೈದ್ಯಾಧಿಕಾರಿ ಡಾ. ವಿಶ್ವನಟೇಶ್ ಹಾಗೂ ಕೆಲ ಇಲಾಖೆಗಳ ಅಧಿಕಾರಿಗಳಿದ್ದರು.