ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಗಳನ್ನು ಸಂಪೂರ್ಣ ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಹಿರೇಕೆರೂರು: ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಗಳನ್ನು ಸಂಪೂರ್ಣ ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಳೆದ 4 ವರ್ಷಗಳಿಂದ ಅತೀವೃಷ್ಠಿ ಹಾಗೂ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಯಾವ ಕೆರೆಗಳಲ್ಲಿಯೂ ನೀರು ಇಲ್ಲ. ಕೊಳವೆ ಬಾವಿಗಳು ಸಹ ನಿಂತು ಹೋಗಿವೆ. ಮುಂಗಾರು ವೈಫಲ್ಯದಿಂದ ಎರಡು ಬಾರಿ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ, ಬಂಡವಾಳ ಹಾಕಿದ್ದು ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿ ಹಾಳಾಗಿವೆ. ಕೆಲವು ಕಡೆ ಹಸಿರಾಗಿದ್ದರೂ ಕೂಡ ಮೆಕ್ಕೆಜೋಳ ತೆನೆಯಾಗಿಲ್ಲ ಮತ್ತು ಕಾಳು ಕಟ್ಟಿಲ್ಲ ಹತ್ತಿ, ಸೋಯಾಬಿನ್, ಮೆಕ್ಕೆಜೋಳ ಬೆಳೆಗಳು ನಾಶವಾಗಿವೆ. ರಾಜ್ಯ ಸರ್ಕಾರ 102 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ನಮ್ಮ ತಾಲೂಕುಗಳನ್ನು ಕೈ ಬಿಟ್ಟು ರೈತರಿಗೆ ಅನ್ಯಾಯ ಮಾಡಿದ್ದಾರೆ. ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಶಿವಮೊಗ್ಗ, ಧಾರವಾಡ, ಗದಗ ಜಿಲ್ಲೆಗಳನ್ನು ಬರಗಾಲವೆಂದು ಘೋಷಣೆ ಮಾಡಿದ ಮೇಲೆ ಹಾವೇರಿ ಜಿಲ್ಲೆಯನ್ನು ಕಡೆಗಣಿಸಿರುವುದು ನ್ಯಾಯ ಸಮ್ಮತವಲ್ಲ. ಕೃಷಿಗಾಗಿ ಸಾಲ ಮಾಡಿ ಮಳೆ ಕೈ ಕೊಟ್ಟಿರುವುದರಿಂದ ಹಾಕಿದ ಬಂಡವಾಳ ವಾಪಸ್ ಬರದಂತಾಗಿ ರೈತರು ಕಂಗಾಲಾಗಿದ್ದಾರೆ. ಇಂತಹ ಸಂಧರ್ಭದಲ್ಲಿ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಬೇಕಾಗಿರುವುದು ಅತೀ ಅವಶ್ಯಕ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು. ಅವಳಿ ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಿ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಹಾಗೂ ಬ್ಯಾಂಕುಗಳ ಬಲವಂತದಿಂದ ಸಾಲ ವಸೂಲಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಕೃಷಿಯನ್ನೆ ನಂಬಿ ಬದುಕುತ್ತಿರುವುದು ತಾವುಗಳು ಸರ್ಕಾರಕ್ಕೆ ರೈತರ ಧ್ವನಿಯಾಗಿ ಸದನದ ಒಳಗೆ ನಮ್ಮ ಪರವಾಗಿ ಮಾತನಾಡಿ, ನ್ಯಾಯ ಒದಗಿಸಬೇಕು ಹಾಗೂ ಕೇಂದ್ರ ಸರ್ಕಾರ ಬೆಳೆನಷ್ಟ ಪರಿಹಾರವನ್ನು ಪ್ರತಿ ಎಕರೆಗೆ 25,000 ರು. ಕೊಡಬೇಕು ಎಂದು ಶಾಸಕ ಯು.ಬಿ. ಬಣಕಾರ ಅವರಿಗೆ ಒತ್ತಾಯಿಸಿದ ಅವರು ಈ ಕುರಿತು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಜಿಲ್ಲೆಯ ರೈತರು ಹೋರಾಟ ಮಾಡಲಾಗುತ್ತದೆ ಎಂದರು.ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ತಾಲೂಕು ಘಟಕದ ಅಧ್ಯಕ್ಷರಾದ ಪ್ರಭುಗೌಡ ಪ್ಯಾಟಿ, ಶಂಕರಗೌಡ ಶಿರಗಂಬಿ, ಬಸನಗೌಡ ಗಂಗಪ್ಪಳವರ, ಗಂಗನಗೌಡ ಮುದಿಗೌಡ್ರ, ಶಂಕ್ರಪ್ಪ ಮಕ್ಕಳ್ಳಿ ಶಾಂತನಗೌಡ ಪಾಟೀಲ ಕರಬಸಪ್ಪ ಬಣಕಾರ ಶಂಬಣ್ಣ ಮುತ್ತಿಗಿ, ಬಸವರಾಜ ಬಣಕಾರ, ಯಶವಂತ ತಿಮಕಾಪುರ ಸೇರಿದಂತೆ ರೈತರು ಇದ್ದರು.