ಹಿರ್ಗಾನ: ಸಂಚಾರಕ್ಕೆ ಅಪಾಯಕಾರಿಯಾಗಿದ್ದ ಸ್ಟೇ ವಯರ್‌ ತೆರವು

| Published : Jun 20 2024, 01:02 AM IST

ಸಾರಾಂಶ

ಕಾರ್ಕಳ- ಹೆಬ್ರಿ ಸಾಗುವ ರಾಜ್ಯ ಹೆದ್ದಾರಿ 1ರಲ್ಲಿ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಸಮೀಪದಲ್ಲಿ ವಿದ್ಯುತ್ ಕಂಬದ ಸ್ಟೇ ವಯರ್ ರಾಜ್ಯ ಹೆದ್ದಾರಿಯ ಒಂದು ಅಡಿ ಅಂತರದಲ್ಲೇ ಇದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು.

ರಾಂ ಅಜೆಕಾರ್‌ಕನ್ನಡಪ್ರಭ ವಾರ್ತೆ ಕಾರ್ಕಳ

ಹಿರ್ಗಾನದ ನೆಲ್ಲಿಕಟ್ಟೆ ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ್ದ ವಿದ್ಯುತ್ ಕಂಬದ ಸ್ಟೇ ವಯರನ್ನು ಕಾರ್ಕಳ ಮೆಸ್ಕಾಂ ತೆರವುಗೊಳಿಸಿದೆ. ಈ ಬಗ್ಗೆ ಕನ್ನಡಪ್ರಭ ಭಾನುವಾರ ‘ಅಪಾಯ ಆಹ್ವಾನಿಸುತ್ತಿದೆ ವಿದ್ಯುತ್‌ ಕಂಬದ ಸ್ಟೇ ವಯರ್‌’ ಎಂಬ ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿದ ಕಾರ್ಕಳ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಶಿಲ್ಪಾ, ಇಲಾಖಾಧಿಕಾರಿಗಳಿಗೆ ಸ್ಟೇ ವಯರ್ ತೆರವುಗೊಳಿಸಲು ತಿಳಿಸಿದ್ದರು. ಇದಕ್ಕೆ ಸ್ಪಂದಿಸಿದ ಇಲಾಖಾಧಿಕಾರಿಗಳು, ಸ್ಟೇ ವಯರ್‌ ತೆರವುಗೊಳಿಸಿದರು. ಈ ವೇಳೆ ವಾಲಿಕೊಂಡಿದ್ದ ಎರಡು ಕಂಬಗಳಿಗೆ ಹೊಸ ಎರಡು ಕಂಬಗಳನ್ನು ಊದು ನೀಡುವ ಮೂಲಕ ಶಾಶ್ವತವಾಗಿ ಮುಕ್ತಿ ನೀಡಲಾಗಿದೆ.

ಕಾರ್ಕಳ- ಹೆಬ್ರಿ ಸಾಗುವ ರಾಜ್ಯ ಹೆದ್ದಾರಿ 1ರಲ್ಲಿ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಸಮೀಪದಲ್ಲಿ ವಿದ್ಯುತ್ ಕಂಬದ ಸ್ಟೇ ವಯರ್ ರಾಜ್ಯ ಹೆದ್ದಾರಿಯ ಒಂದು ಅಡಿ ಅಂತರದಲ್ಲೇ ಇದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಭಾಗದಲ್ಲಿ ಕಳೆದ ಎರಡು ವಾರಗಳಲ್ಲಿ ನಾಲ್ಕು ಅಪಘಾತಗಳು ಸಂಭವಿಸಿತ್ತು. ಇದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.ಕಾರ್ಕಳ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರೆ ಶಿಲ್ಪಾ ಅವರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ರಸ್ತೆ ಬದಿಯಲ್ಲಿದ್ದ ಟ್ರಾನ್ಸ್‌ಫಾರ್ಮರ್‌ ಕಂಬವನ್ನು ತೆರವುಗೊಳಿಸುವ ಬಗ್ಗೆ ಕನ್ನಡಪ್ರಭ ಜೊತೆ ಮಾತನಾಡಿದ ಶಿಲ್ಪಾ, ರಸ್ತೆಗೆ ಅಡಚಣೆಯಾಗಿದ್ದ ಟ್ರಾನ್ಸ್‌ಫಾರ್ಮರ್‌ ಕಂಬಕ್ಕೆ ಹಾಕಲಾಗಿದ್ದ ಪ್ಲಾಸ್ಟಿಕ್ ಪೈಪ್ ತೆರವುಗೊಳಿಸಲಾಗಿದೆ. ಆದರೆ ಟ್ರಾನ್ಸ್‌ಫಾರ್ಮರ್‌ ಕಂಬವನ್ನು ತೆರವು ಮಾಡಲಾಗಿಲ್ಲ. ಆದಷ್ಟು ಬೇಗ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.