ಉಡುಪಿ: ಇಲ್ಲಿನ ಆತ್ರಾಡಿ ಗ್ರಾಮದ ಮದಗ ಸಮೀಪದ ಮುಳ್ಳುಗುಜ್ಜಿ ಮನೆಯಲ್ಲಿ ನಾಲ್ಕು ವರ್ಷದ ಹಿಂದೆ ನಡೆದ ತಾಯಿಮಗಳ ಕೊಲೆಯ ಆರೋಪಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜನ್ನಾಪುರ ಗ್ರಾಮದ ಕುರುಬರ ಬೀದಿಯ ನಿವಾಸಿ ಹರೀಶ್‌ ಆರ್‌ ಯಾನೆ ಗಣೇಶ್‌ (30). ಈತ 2022ರ ಮೇ 8ರಂದು ಮುಳ್ಳುಗುಜ್ಜಿ ನಿವಾಸಿ ಚೆಲುವಿ ಮತ್ತು ಆಕೆಯ ಮಗಳು ಪ್ರಿಯಾ ಎಂಬವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ.ಚೆಲುವಿಗೆ 15 ವರ್ಷಗಳ ಹಿಂದೆ ಸುಬ್ರಹ್ಮಣ್ಯ ಎಂಬಾತನೊದಿಗೆ ಮದುವೆಯಾಗಿತ್ತು, ನಂತರ ಅವರಿಬ್ಬರ ನಡುವೆ ಮನಸ್ತಾಪವಾಗಿ, ಚೆಲುವಿ ಮಣಿಪಾಲದ ರಶೀದ್ ಎಂಬಾತನೊಂದಿಗೆ ಮುಂಬೈಗೆ ಓಡಿಹೋಗಿದ್ದಳು. ಅವರಿಗೆ 2 ವರ್ಷಗಳಲ್ಲಿ ಇಬ್ಬರು ಮಕ್ಕಳು ಜನಿಸಿದ್ದು, ಕಾರ್ಕಳಕ್ಕೆ ಬಂದು ವಾಸವಾಗಿದ್ದರು. ನಂತರ ರಶೀದ್ ನೊಂದಿಗೆ ಜಗಳವಾಡಿದ ಚೆಲುವಿ ಮಕ್ಕಳೊಂದಿಗೆ ಮತ್ತೆ ಮುಳ್ಳುಗಜ್ಜಿಯಲ್ಲಿರುವ ತಾಯಿಯ ಮನೆ ಪಕ್ಕದಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದಳು. ಅಲ್ಲಿಗೆ ಈ ಕೊಲೆಗಾರ ಹರೀಶ್ ಆಗಾಗ್ಗೆ ಬರುತಿದ್ದು, ಯಾವುದೋ ಕಾರಣಕ್ಕೆ ಜಗಳವಾಡಿ ತಾಯಿ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆವತ್ತು ಚೆಲುವಿಯ ಮಗ ಚಿಕ್ಕಮ್ಮನ ಮನೆಗೆ ಹೋಗಿದ್ದು ಆತ ಬಚಾವಾಗಿದ್ದ.ಪ್ರಕರಣವನ್ನು ತನಿಖೆ ಮಾಡಿದ ಅಂದಿನ ಬ್ರಹ್ಮಾವರದ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರು ಆರೋಪಿ ಹರೀಶ್‌ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.ಇದೀಗ ವಿಚಾರಣೆಯ ನಂತರ ಆರೋಪವು ಸಾಬೀತಾಗಿದ್ದು, ಉಡುಪಿ ಜಿಲ್ಲಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 20 ರು. ದಂಡ ವಿಧಿಸಿದ್ದಾರೆ.