ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಅಪರಾಧ ಕೃತ್ಯಗಳನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ ಕಾಪಾಡುವುದು ಪೊಲೀಸರ ಕರ್ತವ್ಯ. ಆದರೆ, ರಕ್ಷಣೆಯ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರೇ ಅಸಹಾಯಕರಾಗಿ ಅಪರಾಧ ಕೃತ್ಯ ತಡೆಯುವಂತೆ ದೇವರ ಹೋಗಿದ್ದಾರೆ. ಮಾತ್ರವಲ್ಲ, ಪೊಲೀಸ್ ಠಾಣೆಯಲ್ಲೇ ನವಗ್ರಹ ಪೂಜೆ, ಹೋಮ, ಹವನ ನೆರವೇರಿಸುವ ಮೂಲಕ ಮೂಢನಂಬಿಕೆಗೆ ಮೊರೆ ಹೋಗಿರುವುದು ಕಂಡುಬಂದಿದೆ. ಇಂತಹ ಪ್ರಸಂಗ ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೊಳಪಡುವ ಮಾಳಮಾರುತಿ ಪೊಲೀಸ್ ಠಾಣೆಯಲ್ಲೇ ಇಂತಹದ್ದೊಂದು ವಿಚಿತ್ರ ಪ್ರಸಂಗ ನಡೆದಿದೆ. ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಲೇ ಇವೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 47ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮಾಜಿ ಪ್ರಿಯಕರ ಮೇಲೆ ಶೂಟೌಟ್, ಮಹಿಳೆಯೊಬ್ಬರ ಬಟ್ಟೆ ಹರಿದು ಹಲ್ಲೆ ಮಾಡಿ ಅಮಾನವೀಯ ಮೆರೆದ ಘಟನೆ ಹೀಗೆ ಸಾಲು ಸಾಲು ಅಪರಾಧ ಕೃತ್ಯಗಳು ಹೆಚ್ಚುತ್ತಲೇ ಇವೆ.ಅಪರಾಧ ಕೃತ್ಯಕ್ಕೆ ಕಡಿವಾಣ ಹಾಕಲು ಏನೆಲ್ಲ ಕ್ರಮ ಕೈಗೊಂಡಿದ್ದರೂ ಅಪರಾಧ ಚಟುವಟಿಕೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ತಮ್ಮ ಕರ್ತವ್ಯವನ್ನು ನಿರ್ವಹಿಸುವುದನ್ನು ಬಿಟ್ಟು ಮಾಳಮಾರುತಿ ಪೊಲೀಸ್ ಠಾಣೆ ಠಾಣಾಧಿಕಾರಿ ಜೆ.ಎಂ. ಕಾಲಿಮಿರ್ಜಿ ದೇವರ ಮೊರೆ ಹೋಗಿ, ಠಾಣೆಯಲ್ಲಿ ಶಾಂತಿ ನೆಲೆಸಬೇಕೆಂಬ ಉದ್ದೇಶದಿಂದ ನವಗ್ರಹ ಪೂಜೆ, ರಣಚಂಡಿಕಾ ಹೋಮ ನೆರವೇರಿಸಿರುವುದು ಈಗ ಬಹಿರಂಗಗೊಂಡಿದೆ.ಪೊಲೀಸ್ ಠಾಣೆಯ ಹಾಲ್ನಲ್ಲಿ ಹೋಮ ಹವನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಪೊಲೀಸ್ ಠಾಣೆಯ ಪ್ರವೇಶ ದ್ವಾರದ ಎದುರು ಬೂದಗುಂಬಳಕಾಯಿ ಮೇಲೆ ಕರ್ಪೂರ ಹಚ್ಚಿ ದೃಷ್ಟಿ ತೆಗೆದು, ಅದಕ್ಕೆ ಕುಂಕುಮ, ಅರಿಶಿನ ಹಚ್ಚಿ ಪೂಜೆ ಸಲ್ಲಿಸಿ ಒಡೆಯಲಾಗಿದೆ. ಠಾಣೆಯಲ್ಲಿ ಶಾಂತಿ ನೆಲೆಸುವಂತೆ ಪೊಲೀಸರು ಪ್ರಾರ್ಥಿಸಿದ್ದಾರೆ. ಆದರೆ, ಪೊಲೀಸ್ ಠಾಣೆಯಲ್ಲಿ ಹೋಮ- ಹವನ ಮಾಡುವ ಮೂಲಕ ಪೊಲೀಸರೇ ಮೂಢನಂಬಿಕೆಗೆ ಶರಣಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.ಸರ್ಕಾರದಿಂದ ನೇಮಕಗೊಂಡಿರುವ ಪೊಲೀಸರಿಗೆ ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಇರುತ್ತದೆ. ಆದರೆ, ರಕ್ಷಣೆ ಮಾಡಬೇಕಾದ ಪೊಲೀಸರೇ ಕೈಚೆಲ್ಲಿ ಕುಳಿತು, ಪೊಲೀಸ್ ಠಾಣೆಯಲ್ಲಿ ಹೋಮ, ಹವನ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದಾಗಿ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆಯೇ? ಅಪರಾಧ ಕೃತ್ಯ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾದರೆ ಎಂಬ ಹತ್ತು ಹಲವಾರು ಪ್ರಶ್ನೆಗಳು ಈ ವ್ಯಾಪ್ತಿಯ ಜನರಲ್ಲಿ ಸಹಜವಾಗಿ ಮೂಡುತ್ತಿದೆ. ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೇ, ಕೈಚೆಲ್ಲಿ ದೇವರ ಮೊರೆ ಹೋಗಿರುವ ಪೊಲೀಸರ ನಡೆ ಬಗ್ಗೆ ವ್ಯಾಪಕ ಚರ್ಚೆಗೆ ಎಡೆಮಾಡಿದೆ.ಎಡಿಜಿಪಿ ಹಿತೇಂದ್ರ ಗರಂ:
ಅಪರಾಧ ಕೃತ್ಯಗಳನ್ನು ತಡೆಯುವಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ನವಗ್ರಹ ಪೂಜೆ, ಹೋಮ, ಹವನ ಮಾಡಿರುವುದಕ್ಕೆ ಎಡಿಜಿಪಿ ಹಿತೇಂದ್ರ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ 10 ದಿನಗಳ ಕಾಲ ನಡೆಯುವ ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಭದ್ರತಾ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾಳಮಾರುತಿ ಠಾಣೆ ಠಾಣಾಧಿಕಾರಿ ಕಾಲಿಮಿರ್ಜಿ ವಿರುದ್ಧ ಗರಂ ಆಗಿದ್ದಾರೆ. ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ಈ ರೀತಿ ಪೂಜೆ, ಹೋಮ, ಹವನ ಮಾಡಿ ಪೊಲೀಸ್ ಇಲಾಖೆ ಮಾನವನ್ನು ಹರಾಜು ಹಾಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.ಈ ಹಿಂದೆ ಕೂಡ ಪೊಲೀಸರು ಕೇಸರಿ ಬಟ್ಟೆಗಳನ್ನು ಧರಿಸಿಕೊಂಡು ಗಣೇಶ ಹಬ್ಬವನ್ನು ಮಾಡಲಾಗಿತ್ತು. ಅದನ್ನು ಹಾಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು, ಅವರ ಅಧಿಕಾರವಧಿಯಲ್ಲಿಯೇ ಪೊಲೀಸರುು ಹೋಮ, ಹವನಕ್ಕೆ ಮೊರೆ ಹೋಗಿದ್ದಾರೆ. ಹಾಗಾದರೆ ಸಿಎಂ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.