ಸಾರಾಂಶ
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ ನಡೆಯಿತು. ಜನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದಿನ ಮಕ್ಕಳು ಕೇಳಿ ಕಲಿಯುವುದಕ್ಕಿಂತ, ನೋಡಿ ಹೆಚ್ಚು ಕಲಿಯುತ್ತಾರೆ ಎಂದು ನಿವೃತ್ತ ಪ್ರಾಚಾರ್ಯ, ಜನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಹೇಳಿದರು.ಅವರು ಇಲ್ಲಿನ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಶಿಕ್ಷಕ - ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇಂದಿನ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಸಾಮರ್ಥ್ಯ ಪಡೆದಿರುತ್ತಾರೆ, ಆದರೆ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಯಾಕೆಂದರೆ ಅವರು ಕಲಿಯುವ ಪಠ್ಯ ಮತ್ತು ಸಮಾಜದಲ್ಲಿ ನಡೆಯುವ ವಿಷಯಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಎಳವೇಯಲ್ಲಿಯೇ ಹೆತ್ತವರು ಮನೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮನೆಯೇ ಮೌಲ್ಯಾಲಯವಾಗಬೇಕು ಎಂದು ತಿಳಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ಫಾ. ಡಾ. ರೋಕ್ ಡಿ’ಸೋಜ ಮಾತನಾಡಿ, ಶಾಲೆಯ ಪಠ್ಯಪೂರಕ ಚಟುವಟಿಕೆಗಳಲ್ಲಿ ಹೆತ್ತವರ ಸಹಕಾರವನ್ನು ಶ್ಲಾಫಿಸಿದರು ಹಾಗೂ ಸತತ 7ನೇ ಬಾರಿ ಶಾಲೆ ಎಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಪಡೆಯುವಲ್ಲಿ ಸಹಕರಿಸಿದ ಹೆತ್ತವರನ್ನು ಹಾಗು ಶಿಕ್ಷಕರನ್ನು ಅಭಿನಂದಿಸಿದರು.
2023-24 ನೇ ಸಾಲಿನ ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಘವೇಂದ್ರ ನಾಯಕ್, ಉಪಾಧ್ಯಕ್ಷೆ ನಾಗಮ್ಮ ತೋನ್ಸೆ ಮತ್ತು ಡಾ.ಎಕ್ಕಾರು ಅವರನ್ನು ಸನ್ಮಾನಿಸಲಾಯಿತು.ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಪಾಡುಗಳನ್ನು ತಿಳಿಸಿ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಶಿಕ್ಷಕ ವನಿತಾ ವರದಿ ಮಂಡಿಸಿದರು. ಶಿಕ್ಷಕಿಯರಾದ ನ್ಯಾನ್ಸಿ, ಮಾರ್ತ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಡಿಮೆಲ್ಲೊ ವಂದಿಸಿದರು.