ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಬಿ.ಎಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರಧಾನ ಚರ್ಚ್ನ ಆವರಣದಲ್ಲಿ ಗುರುವಾರ ಗುಡ್ ಫ್ರೈಡೇ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.ಬಿ.ಎಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಶೇಷ ಪ್ರಾರ್ಥನೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಚರ್ಚ್ ಬಳಿಯ ಕಲ್ಯಾಣಮಂಟಪದ ಬಳಿ ಕೆಲವರ ಮೇಲೆ ಏಕಾಏಕಿ ಹೆಜ್ಜೆನು ದಾಳಿ ನಡೆಸಿವೆ. ನಂತರ ಚರ್ಚ್ನ ಆವರಣಕ್ಕೆ ಬಂದಿವೆ. ಚರ್ಚ್ನಲ್ಲಿ ಗುಡ್ ಫ್ರೈಡೇ ಪ್ರಯುಕ್ತ 800ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಅನೇಕರಿಗೆ ಜೇನು ಕಡಿದಿವೆ.
ಜೇನು ಕಡಿತದಿಂದ ಪಾರಾಗಲು ಬಹಳಷ್ಟು ಮಂದಿ ಚರ್ಚ್ನ ಪ್ರಾರ್ಥನಾ ಹಾಲ್ ಹಾಗೂ ಕೊಠಡಿಗಳ ಒಳಗೆ ಆಶ್ರಯ ಪಡೆದರು. ಅಲ್ಲಿಗೂ ಜೇನು ಹಿಂಡು ನುಗ್ಗಿದೆ. ಈ ವೇಳೆ ಚರ್ಚ್ ಸುತ್ತಲೂ ತೆಂಗಿನ ಗರಿ, ಭತ್ತದ ಹುಲ್ಲಿನ ಹೊಗೆ ಹಾಕಿ ಜೇನು ಹುಳುಗಳಿಂದ ರಕ್ಷಣೆ ಪಡೆಯುವ ಕೆಲಸವೂ ನಡೆಯಿತು. ಸೇಕ್ರೆಡ್ ಹಾರ್ಟ್ ಚರ್ಚ್ನ ಗೋಪುರ ಹಾಗೂ ಪಕ್ಕದ ಮೇರಿ ಮ್ಯಾಕಲೇಟ್ ಶಾಲೆಯ ಛಾವಣಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಜ್ಜೇನು ಗೂಡುಕಟ್ಟಿವೆ.ಗಾಯಾಳುಗಳನ್ನು ಸ್ಥಳೀಯರು ಆಟೊರಿಕ್ಷಾ, ಕಾರು ಹಾಗೂ ಆಂಬುಲೆನ್ಸ್ಗಳಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಗಾಯಾಳುಗಳ ಪೈಕಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ. ಧ್ವನಿವರ್ಧಕದ ಶಬ್ಧಕ್ಕೆ, ಇಲ್ಲವೇ ಯಾರಾದರೂ ಕಲ್ಲು ಹೊಡೆದಿರುವ ಕಾರಣಕ್ಕೆ ಜೇನು ದಾಳಿ ನಡೆಸಿರಬಹುದು. ಪ್ರಾರ್ಥನೆ ಮಾಡುತ್ತಿದ್ದ ವೇಳೆ ಮೊದಲಿಗೆ ಒಂದೆರಡು ಜೇನು ಹುಳುಗಳು ಕಾಣಿಸಿಕೊಂಡವು. ನಂತರ ಅವುಗಳ ಸಂಖ್ಯೆ ಹೆಚ್ಚಾಗ ತೊಡಗಿತು. ನಂತರ ಏಕಾಏಕಿ ದಾಳಿ ಮಾಡಿದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.