ಉಳುವರೆಯಲ್ಲಿ ಮಕ್ಕಳ ರಕ್ಷಿಸಿದ ಹೂವಾ ಗೌಡ!

| Published : Jul 31 2024, 01:07 AM IST

ಉಳುವರೆಯಲ್ಲಿ ಮಕ್ಕಳ ರಕ್ಷಿಸಿದ ಹೂವಾ ಗೌಡ!
Share this Article
  • FB
  • TW
  • Linkdin
  • Email

ಸಾರಾಂಶ

ಜೋರಾದ ನೀರಿನ ರಭಸಕ್ಕೆ 4 ಮಕ್ಕಳು ನೀರಿನ ಪಾಲಾಗುತ್ತಿದ್ದರು. ಸುಮಾರು 200 ಅಡಿ ದೂರ ಮಕ್ಕಳು ನೀರಿನಲ್ಲಿ ತೇಲಿ ಹೋಗಿದ್ದರು. ಒಂದು ಕಲ್ಲನ್ನು ಹಿಡಿದು ಜೀವವನ್ನು ಉಳಿಸಿ ಕೊಳ್ಳಲು ಪ್ರಯತ್ನ ಪಡುತ್ತಿರುವಾಗ ಹೂವಾ ಗೌಡ ತಕ್ಷಣ ನೀರಿನಿಂದ ಈ 4 ಮಕ್ಕಳನ್ನು ನದಿಯ ದಡಕ್ಕೆ ತಂದು ಜೀವ ಉಳಿಸಿ ಸಾಹಸ ಮೆರೆದಿದ್ದಾರೆ.

ಅಂಕೋಲಾ: ಇತ್ತೀಚೆಗೆ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಉಳವರೆಯ ಆರು ಮನೆಗಳು ನೀರಿನ ರಭಸಕ್ಕೆ ಗಂಗಾವಳಿ ನದಿಯಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದವು. ಆಗ ಸುನಾಮಿಯಂತೆ ಎರಗಿದ ಗಂಗಾವಳಿ ನದಿಯಿಂದಾಗಿ ಪುಟ್ಟ ನಾಲ್ಕು ಕಂದಮ್ಮಗಳು ನೀರು ಪಾಲಾಗುತ್ತಿರುವಾಗ ಅದೇ ಗ್ರಾಮದ ಹೂವಾ ಗೌಡ ಎಂಬವರು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜೋರಾದ ನೀರಿನ ರಭಸಕ್ಕೆ 4 ಮಕ್ಕಳು ನೀರಿನ ಪಾಲಾಗುತ್ತಿದ್ದರು. ಸುಮಾರು 200 ಅಡಿ ದೂರ ಮಕ್ಕಳು ನೀರಿನಲ್ಲಿ ತೇಲಿ ಹೋಗಿದ್ದರು. ಒಂದು ಕಲ್ಲನ್ನು ಹಿಡಿದು ಜೀವವನ್ನು ಉಳಿಸಿ ಕೊಳ್ಳಲು ಪ್ರಯತ್ನ ಪಡುತ್ತಿರುವಾಗ ಹೂವಾ ಗೌಡ ತಕ್ಷಣ ನೀರಿನಿಂದ ಈ 4 ಮಕ್ಕಳನ್ನು ನದಿಯ ದಡಕ್ಕೆ ತಂದು ಜೀವ ಉಳಿಸಿ ಸಾಹಸ ಮೆರೆದಿದ್ದಾರೆ.

ಉಳುವರೆ ಗ್ರಾಮದ ಪ್ರತಿಯೊಬ್ಬರು ಹೂವಾ ಗೌಡ ಅವರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯಕ್ತಿಗಳಿಗೆ ಶೌರ್ಯ ಪ್ರಶಸ್ತಿಯನ್ನು ಜಿಲ್ಲಾಡಳಿತ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೊಬ್ಬೆ ಹೊಡೆದರು: ಒಮ್ಮಿಂದೊಮ್ಮೆಲೆ ಭಾರಿ ಪ್ರಮಾಣದ ನೀರು ನೀರು ಗ್ರಾಮಕ್ಕೆ ಬಂತು. ಆಗ ಇಲ್ಲಿಯ ಮಕ್ಕಳು ನೀರಿನಲ್ಲಿ ತೇಲಿ ಹೋದರು. ಬೊಬ್ಬೆ ಹೊಡೆದರು. ನಾನು ತಕ್ಷಣ ನೀರಿನಲ್ಲಿ ಹೋಗಿ ಈ ಮಕ್ಕಳನ್ನು ರಕ್ಷಿಸಿದೆ. ಅವರು ಇಂದು ನಮ್ಮ ಜತೆ ಇರುವಂತಾಗಿದೆ ಎಂದು ಹೂವಾ ಗೌಡ ತಿಳಿಸಿದರು. ಭೂಕುಸಿತದ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ

ಗೋಕರ್ಣ: ಭಾರಿ ಮಳೆಯಿಂದ ಇಲ್ಲಿನ ವಿವಿಧೆಡೆ ಗುಡ್ಡ ಕುಸಿತವಾದ ಸ್ಥಳವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.ಮುಖ್ಯ ಕಡಲತೀರದ ಬಳಿ ಇರುವ ರಾಮಮಂದಿರದ ಪಕ್ಕ ಕುಸಿದುರುವ ಬೃಹತ್ ಗುಡ್ಡ, ಇಲ್ಲಿನ ತಾರಮಕ್ಕಿ ಶಾಲೆಯ ಬಳಿ ಧರೆ ಕುಸಿತ, ತದಡಿ ಮೂಡಂಗಿ ಸರ್ಕಾರಿ ಶಾಲೆಯ ಬಳಿಯ ಧರೆ ಕುಸಿತ, ಹೊಸ್ಕಟ್ಟಾ ಹಾಗೂ ದೇವರಭಾವಿಯ ಮಸಾಕಲ್ ಪ್ರದೇಶಗಳಿಗೆ ತೆರಳಿ ಯಾವ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು, ಮುಂದಾಗಾಬಹುದಾದ ಅಪಾಯಗಳು ಹಾಗೂ ಎಚ್ಚರಿಕೆ ಕ್ರಮದ ಕುರಿತು ಅಂದಾಜಿಸಿದ್ದಾರೆ. ಈ ವೇಳೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.