ವಿ.ಎಂ. ನಾಗಭೂಷಣ

ಸಂಡೂರು: ಹಣ್ಣುಗಳ ರಾಜನೆನಿಸಿರುವ ಮಾವು ತಾಲೂಕಿನ ವಿವಿಧೆಡೆ ಇರುವ ತೋಟಗಳಲ್ಲಿ ತೊನೆದಾಡುತ್ತಿದ್ದು, ಮಾರುಕಟ್ಟೆಗೆ ಲಗ್ಗೆ ಇಡುವ ಸಿದ್ಧತೆಯಲ್ಲಿವೆ. ಈಗಾಗಲೆ ತೋತಾಪುರಿ ಮುಂತಾದ ತಳಿಯ ಮಾವು ನಿಧಾನಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಮಾವಿನ ಪ್ರಿಯರು ಹಣ್ಣುಗಳಿಗಾಗಿ ಕಾಯುತ್ತಿದ್ದಾರೆ.

ಸಂಡೂರು ಸೇರಿದಂತೆ ತಾಲೂಕಿನ ಯಶವಂತನಗರ, ಕೃಷ್ಣಾನಗರ, ಅಂಕಮನಾಳ್, ತೋರಣಗಲ್ಲು, ಧರ್ಮಾಪುರ ಮುಂತಾದೆಡೆ ಒಟ್ಟು 90 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಪುಗಳಿವೆ. ಹಿಂದಿನ ವರ್ಷದಿಂದ ನಬಾರ್ಡ್ ಸ್ಕೀಂನಲ್ಲಿ ನಿಡಗುರ್ತಿ ಮುಂತಾದೆಡೆ ಸುಮಾರು 100 ಎಕರೆ ಪ್ರದೇಶದಲ್ಲಿ ಹೊಸದಾಗಿ ಮಾವಿನ ಗಿಡಗಳನ್ನು ಬೆಳೆಸಲಾಗುತ್ತಿದೆ.

ತಾಲೂಕಿನಲ್ಲಿ ಪ್ರಮುಖವಾಗಿ ರಸಪುರಿ, ಮಲಗೋಬ, ತೋತಾಪುರಿ, ಜಹಂಗೀರ್, ದಿಲ್ ಪಸಂದ್, ಬಾದಾಮಿ, ಬೇನೆಸಾನ್, ಬೆಳ್ಳಿಗುಂಡು, ಲಾಂಗ್ರ ಮುಂತಾದ ತಳಿಯ ಮಾವನ್ನು ಬೆಳೆಯುತ್ತಾರೆ. ಮಾವಿನ ಉಪ್ಪಿನ ಕಾಯಿ ತಯಾರಿಗಾಗಿ ಅಗತ್ಯವಾಗಿರುವ ಕಾಯಿಯನ್ನು ಬೆಳೆಯಲಾಗುತ್ತಿದೆ.

ಕಾಯಿ ಉದುರುವಿಕೆ


ಬಿಸಿಲಿನ ತಾಪಮಾನ ಹೆಚ್ಚಾಗಿ ತೋಟದಲ್ಲಿನ ಮಾವಿನ ಕಾಯಿಗಳು ಉದುರುತ್ತಿರುವುದು ಗುತ್ತಿಗೆದಾರರಲ್ಲಿ ಆತಂಕವನ್ನುಂಟು ಮಾಡುತ್ತಿದೆ.

ಇನ್ನೂ ಒಂದು ತಿಂಗಳು ಬೇಕು ಮಾವಿನ ತೋಟದ ಗುತ್ತಿಗೆದಾರ ಕೆ. ಮಂಜುನಾಥ್ ಕನ್ನಡಪ್ರಭದೊಂದಿಗೆ ಮಾತನಾಡಿ, ನಮ್ಮ ತಾತನ ಕಾಲದಿಂದಲೂ ನಾವು ಮಾವಿನ ಸೀಜನ್‌ನಲ್ಲಿ ಮಾವಿನ ತೋಟಗಳನ್ನು ಗುತ್ತಿಗೆ ಹಿಡಿಯುತ್ತೇವೆ. ಈ ವರ್ಷವೂ ಎರಡು ತೋಟಗಳನ್ನು ಗುತ್ತಿಗೆ ಹಿಡಿದಿದ್ದೇವೆ. ಈ ವರ್ಷ ಮಾವಿನ ಕಾಪು ಚೆನ್ನಾಗಿದೆ. ಆದರೆ, ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲ ಕಾಯಿಗಳು ಉದುರುತ್ತಿವೆ. ಪೂರ್ಣ ಪ್ರಮಾಣದಲ್ಲಿ ಹಣ್ಣಿನ ರೂಪದಲ್ಲಿ ಮಾವು ಮಾರುಕಟ್ಟೆಗೆ ಬರಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ ಅವರು ಮಾತನಾಡಿ, ತಾಲೂಕಿನಲ್ಲಿ ಸುಮಾರು 90 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿವೆ. ಹಿಂದಿನ ವರ್ಷದಿಂದ ತಾಲೂಕಿನಲ್ಲಿ 30 ಎಕರೆಯಷ್ಟು ಪ್ರದೇಶದಲ್ಲಿ ಮಾವಿನ ತೋಟಗಳನ್ನು ರೈತರು ಅಭಿವೃದ್ಧಿ ಪಡಿಸಿದ್ದಾರೆ. ನಬಾರ್ಡ್ ಯೋಜನೆಯಲ್ಲಿ ನಿಡಗುರ್ತಿ ಭಾಗದಲ್ಲಿ ಹೊಸದಾಗಿ 100 ಎಕರೆಯಷ್ಟು ಪ್ರದೇಶದಲ್ಲಿ ಮಾವಿನ ತೋಟಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಬಾರಿ ಕಾಣಿಸಿಕೊಂಡ ಬೂದಿರೋಗ ಹಾಗೂ ಬಿಸಿಲಿನ ತಾಪ ಹೆಚ್ಚುತ್ತಿರುವ ಕಾರಣ ಕೆಲವು ಕಡೆಗಳಲ್ಲಿ ಕಾಯಿ ಉದುರುವುದು ಹೆಚ್ಚಾಗಿದೆ ಎಂದರು.

ಒಟ್ಟಿನಲ್ಲಿ ಹಣ್ಣುಗಳ ರಾಜ ಮಾವು ಈಗಾಗಲೆ ಮಾವಿನ ತೋಟಗಳಲ್ಲಿ ತೊನೆದಾಡುತ್ತಿದ್ದು, ಮಾರುಕಟ್ಟೆಯ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸಲು ಸಿದ್ಧವಾಗುತ್ತಿವೆ. ಮಾವಿನ ಪ್ರಿಯರು ತರಹೆವಾರಿ ಹಣ್ಣುಗಳನ್ನು ಸವಿಯಲು ಎದುರು ನೋಡುತ್ತಿದ್ದಾರೆ. ಪ್ರಕೃತಿ ಮತ್ತು ಮಾರುಕಟ್ಟೆ ಹಣ್ಣಿನ ತೋಟಗಳ ಮಾಲೀಕರಿಗೂ, ತೋಟಗಳ ಗುತ್ತಿಗೆದಾರರಿಗೂ ಹಾಗೂ ಗ್ರಾಹಕರಿಗೂ ಅನುಕೂಲವಾಗುವಂತೆ ವರ್ತಿಸಬೇಕಿದೆ.