ಸಾರಾಂಶ
ರಾಮನಗರ: ನಿರ್ಬಂಧಿತ ಪ್ರದೇಶವೊಂದರಲ್ಲಿ ಮಾನವನನ್ನು ನಿಯಂತ್ರಿಸುವುದು ಅಥವಾ ನಮ್ಮ ಆದೇಶಗಳಿಗೆ ಅನುಗುಣವಾಗಿ ಅವರನ್ನು ನಿರ್ದೇಶಿಸುವುದು ಮಾನವ ಕಳ್ಳ ಸಾಗಾಣಿಕೆಯಾಗಿದ್ದು, ಇದು ಮೂರನೇ ಅತಿದೊಡ್ಡ ಅಕ್ರಮ ವ್ಯಾಪಾರವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎನ್.ಪಿ. ಅನಿತಾ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮೈಸೂರಿನ ಒಡನಾಡಿ ಸೇವಾ ಸಂಸ್ಥೆ , ರಾಮನಗರದ ಸಹಾಯ ಟ್ರಸ್ಟ್ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳಸಾಗಣೆಯ ಹೊಸ ಆಯಾಮಗಳು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕಳ್ಳಸಾಗಣೆಗೆ ಒಳಪಟ್ಟ ಸಂತ್ರಸ್ತರಿಗೆ ನೆರವು ನೀಡಲು ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ಬಹುಮುಖ್ಯ ಪಾತ್ರವಹಿಸುತ್ತಿದೆ. ಜೀತ ಪದ್ದತಿ, ಲೈಂಗಿಕ ಶೋಷಣೆ, ಮಾನವ ಕಳ್ಳ ಸಾಗಣೆಯಲ್ಲಿ ನೊಂದವರಿಗಾಗಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ಸಂತ್ರಸ್ತರಿಗೆ ಉಚಿತ ಕಾನೂನು ಅರಿವು-ನೆರವನ್ನು ಒದಗಿಸುತ್ತದೆ. ಮಾನವ ಕಳ್ಳಸಾಗಣೆ ಐಪಿಸಿ ಸೆಕ್ಷನ್ 370 ಸೇರಿದಂತೆ ವಿವಿಧ ಕಾನೂನುಗಳ ಅಡಿ ಅಪರಾಧವಾಗಿದೆ, ಅಪರಾಧಿಗಳಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.
ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಕಾರ್ಯದರ್ಶಿ ಕೆ.ವಿ.ಸ್ಟ್ಯಾನ್ಲಿ ಮಾತನಾಡಿ, ನಮ್ಮ ಸುತ್ತಮುತ್ತಲಿರುವ ಮಹಿಳೆ ಮತ್ತು ಮಕ್ಕಳನ್ನು ನಾವು ರಕ್ಷಣೆ ಮಾಡಿದಾಗ ಮಾನವ ಕಳ್ಳ ಸಾಗಣೆಗೆ ಕಡಿವಾಣ ಹಾಕಬಹುದು. ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು. ಸದೃಢ ಸಮಾಜವನ್ನು ನಿರ್ಮಿಸಲು ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಅವರು ಯಾವುದೇ ದುಶ್ಚಟಗಳಿಂದ ದೂರವಿರುತ್ತಾರೆ ಎಂದರು.ಜಿಪಂ ಉಪ ಕಾರ್ಯದರ್ಶಿ ಚಿಕ್ಕಸುಬ್ಬಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ನಾರಾಯಣ್, ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಪರಶುರಾಮ್ , ಸಹಾಯ ಟ್ರಸ್ಟ್ ನಿರ್ದೇಶಕ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
(ಫೋಟೋ ಕ್ಯಾಪ್ಷನ್)ರಾಮನಗರದ ಜಿಪಂ ಸಭಾಂಗಣದಲ್ಲಿ ನಡೆದ ಮಾನವ ಕಳ್ಳಸಾಗಣೆಯ ಹೊಸ ಆಯಾಮಗಳು ಕುರಿತ ಒಂದು ದಿನದ ಕಾರ್ಯಾಗಾರವನ್ನು ನ್ಯಾ.ಎನ್.ಪಿ.ಅನಿತಾ ಉದ್ಘಾಟಿಸಿದರು.