ವಿನೋದ ಅಸೂಟಿ ಪರ ಪ್ರಚಾರ ಮಾಡ್ತೇನೆ- ರಜತ್‌

| Published : Mar 23 2024, 01:10 AM IST

ಸಾರಾಂಶ

ಸಾಮಾಜಿಕ ನ್ಯಾಯ ಅಡಿಯಲ್ಲಿ ವಿನೋದ ಅಸೂಟಿ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಅವರು ಕೂಡ ನಮ್ಮ ಗೆಳೆಯ. ಅವರ ಗೆಲುವಿಗೆ ಕಾರ್ಯಕರ್ತರೊಂದಿಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ರಜತ್‌ ಉಳ್ಳಾಗಡ್ಡಿಮಠದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಟಿಕೆಟ್‌ ತಪ್ಪಿದ್ದರಿಂದ ಬೇಸರ ಮತ್ತು ದುಃಖವಾಗಿದೆ. ಆದರೆ, ಪಕ್ಷದ ವಿರೋಧಿ ಚಟುವಟಿಕೆ ಮಾಡುವುದಿಲ್ಲ, ಪಕ್ಷದ ಅಭ್ಯರ್ಥಿಯ ಪರವಾಗಿ ತಿರುಗಾಡಿ ಪ್ರಚಾರ ಮಾಡುವುದಾಗಿ ಟಿಕೆಟ್‌ ವಂಚಿತ ರಜತ್‌ ಉಳ್ಳಾಗಡ್ಡಿಮಠದ ಸ್ಪಷ್ಟಪಡಿಸಿದರು.

ನಗರದ ಗೋಕುಲ್‌ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಬೆಂಬಲಿಗರು, ಹಿತೈಷಿಗಳು ಹಾಗೂ ಕಾಂಗ್ರೆಸ್‌ ಮುಖಂಡರು ಮತ್ತು ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು.

ಕಳೆದ ಎಂಟು ತಿಂಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೆ. ಎಲ್ಲ ಸರ್ವೇಯಲ್ಲೂ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಟಿಕೆಟ್‌ ಬೇರೆಯವರಿಗೆ ಘೋಷಣೆ ಆಗಿದೆ. ಇದು ಪಕ್ಷ ಕೈಗೊಂಡ ತೀರ್ಮಾನ. ಅದಕ್ಕೆ ತಲೆಬಾಗುತ್ತೇನೆ. ಸಾಮಾಜಿಕ ನ್ಯಾಯ ಅಡಿಯಲ್ಲಿ ವಿನೋದ ಅಸೂಟಿ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಅವರು ಕೂಡ ನಮ್ಮ ಗೆಳೆಯ. ಅವರ ಗೆಲುವಿಗೆ ಕಾರ್ಯಕರ್ತರೊಂದಿಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಮಾತನಾಡಿ, ಮುಂದಿನ ದಿನಗಳಲ್ಲಿ ರಜತ್‌ ಉಳ್ಳಾಗಡ್ಡಿಮಠ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಆಶಿಸಿದರು.

ಪಾಲಿಕೆ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಮಾತನಾಡಿದರು. ಪಾಲಿಕೆ ಸದಸ್ಯರಾದ ಆರೀಫ್‌ ಭದ್ರಾಪುರ, ಇಕ್ಬಾಲ್‌ ನವಲೂರು, ಹನುಮಂತ ಕೊರವರ, ಗುರು ಬೆಂಗೇರಿ, ಸರೋಜಾ ಹೂಗಾರ, ಬಾಳಮ್ಮ ಜಂಗನವರ, ಮಹೇಶ್‌ ಧಾಬಡೆ, ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಹಾಜರಿದ್ದರು.