ಸಾರಾಂಶ
ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘು ಚಂದನ್ಗೆ ಯಾವುದೇ ಬಗೆಯ ಟಿಕೆಟ್ ಭರವಸೆ ನೀಡಿಲ್ಲ ಮಾಜಿ ಸಚಿವ ಹಾಗೂ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗ: ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘು ಚಂದನ್ಗೆ ಯಾವುದೇ ಬಗೆಯ ಟಿಕೆಟ್ ಭರವಸೆ ನೀಡಿಲ್ಲ ಮಾಜಿ ಸಚಿವ ಹಾಗೂ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಪ್ಪ ನನ್ನ ಮೇಲೆ ಸಾವಿರ ಆರೋಪ ಮಾಡಬಹುದು, ನನಗದು ಸಂಬಂಧವಿಲ್ಲ. ಚಂದ್ರಪ್ಪಗೆ ಭರವಸೆ ನೀಡಲು ನಾನು ಪಕ್ಷದ ಅಧ್ಯಕ್ಷ ಅಲ್ಲ. ಚಿತ್ರದುರ್ಗದಿಂದ ದೆಹಲಿವರೆಗೆ ಎಲ್ಲರೂ ನನ್ನ ಹೆಸರು ಶಿಫಾರಸು ಮಾಡಿದ್ದಾರೆ. ಕೋರ್ ಕಮಿಟಿ ಸಭೆ ನಡೆಸಿ ನನ್ನನ್ನು ಆಯ್ಕೆ ಮಾಡಿದೆ. ಪಾರ್ಟಿ ಸೂಚನೆಯ ಪಾಲಿಸಿದ್ದೇನೆ ಎಂದರು.ರಾಜ್ಯ ರಾಜಕಾರಣದಲ್ಲಿ ಮುಂದುವರಿಯುವ ಹಿನ್ನಲೆ ಎ.ನಾರಾಯಣಸ್ವಾಮಿ ಚುನಾವಣಾ ಕಣದಿಂದ ಹಿಂದೆ ಸರಿದರು. ಹಾಗಾಗಿ ಪಕ್ಷ ನನ್ನತ್ತ ನೋಡಿತು. ಬಿಜೆಪಿ ಪಕ್ಷವನ್ನು ನಾನು ತಾಯಿ ಸ್ಥಾನದಲ್ಲಿ ನೋಡುತ್ತೇನೆ. ನಾವೆಲ್ಲರೂ ಸೇರಿ ಪ್ರಾಮಾಣಿಕವಾಗಿ ಚುನಾವಣೆ ಮಾಡಬೇಕು ಎಂದರು.
ಇಂದು ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ, ಜೆಡಿಎಸ್ ಪಕ್ಷದ ಸಭೆ ನಡೆಸಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಹಾಲು-ಜೇನಿನಂತೆ ಬೆರೆತು ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ರಘುಚಂದನ್ ಬೆಂಬಲಿಗರ ಗಲಾಟೆಯ ಪಕ್ಷದ ಹಿರಿಯರು ಗಮನಿಸುತ್ತಾರೆ. ಬಿ.ಎಸ್.ಯಡಿಯೂರಪ್ಪ ನನ್ನಂತಹವರ ನೂರಾರು ಜನರ ಬೆಳೆಸಿದ್ದಾರೆ. ಅವರನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲವೆಂದು ಕಾರಜೋಳ ಹೇಳಿದರು.