ಕಾಲೇಜು ಸ್ಥಳಾಂತರದಲ್ಲಿ ನನ್ನ ಪಾತ್ರವಿಲ್ಲ

| Published : Apr 03 2024, 01:34 AM IST

ಸಾರಾಂಶ

ಪಾಲಿಟೆಕ್ನಿಕ್ ಕಾಲೇಜು ಸ್ಥಳಾಂತರ ವಿಚಾರದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ನಾನು ಯಾವುದೇ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ರಾಜಕೀಯ ಷಡ್ಯಂತ್ರ ಮಾಡಿ ಇದರಲ್ಲಿ ನನ್ನನ್ನು ಎಳೆದು ತರಲಾಗುತ್ತಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡಪಾಲಿಟೆಕ್ನಿಕ್ ಕಾಲೇಜು ಸ್ಥಳಾಂತರ ವಿಚಾರದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ನಾನು ಯಾವುದೇ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ರಾಜಕೀಯ ಷಡ್ಯಂತ್ರ ಮಾಡಿ ಇದರಲ್ಲಿ ನನ್ನನ್ನು ಎಳೆದು ತರಲಾಗುತ್ತಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು.

ಉಗಾರ ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ಷಡ್ಯಂತ್ರ. ನಾನು ಯಾವುದೇ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮಂಗಸೂಳಿ ಪುಣ್ಯಕ್ಷೇತ್ರ ಆ ಗ್ರಾಮ ಕೂಡ ನನ್ನ ಮತಕ್ಷೇತ್ರಕ್ಕೆ ಸೀಮಿತವಾದುದು. ಅವರು ಕೂಡ ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಕಾಲೇಜು ಎಲ್ಲಿ ಸ್ಥಾಪನೆಯಾದ್ರು ನಮ್ಮ ಕ್ಷೇತ್ರದ ಮಕ್ಕಳಿಗೆ ಅನುಕೂಲವಾಗಲಿದೆ. ರಾಜಕೀಯ ಪಿತೂರಿ ಮಾಡಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.

ಮಂಗಸೂಳಿ ಗ್ರಾಮಕ್ಕೆ ಮಂಜೂರಾದ ಕಾಲೇಜನ್ನು ಶಾಸಕ ರಾಜು ಕಾಗೆ ಐನಾಪುರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಇದು ಚುನಾವಣೆಯ ಗಿಮಿಕ್ ಅಷ್ಟೇ. ನಾನು ಶಾಸಕನಾಗಿದ್ದಾಗ ಈ ಕಾಲೇಜನ್ನು ನಾನೇ ಮಂಜೂರು ಮಾಡಿಸಿದ್ದೇನೆ. ನಂತರ 2018 ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಆಗಿನ ಶಾಸಕ ಶ್ರೀಮಂತ ಪಾಟೀಲರು ಮಂಗಸೂಳಿ ಗ್ರಾಮಕ್ಕೆ ವರ್ಗಾಯಿಸಿದರು. ಮೊನ್ನೆ ಸರ್ಕಾರ ಮೋಳೆ, ಕಾಗವಾಡ, ಐನಾಪುರ, ಮಂಗಸೂಳಿ ಹಾಗೂ ಲೋಕುರ ಗ್ರಾಮಗಳಿಗೆ ಭೇಟಿ ನೀಡಿ ಕಾಲೇಜು ಸ್ಥಾಪನೆಗೆ ಲಭ್ಯ ಸ್ಥಳಾವಕಾಶವನ್ನು ಹುಡುಕಾಡಿ ಐನಾಪುರದಲ್ಲಿ ಕಾಲೇಜು ನಿರ್ಮಾಣಕ್ಕೆ ಯೋಗ್ಯ ಸ್ಥಳವೆಂದು ಗುರುತಿಸಿ ಅಲ್ಲಿ ನಿರ್ಮಿಸಲು ಮಂಜೂರಾತಿ ನೀಡಿದೆ. ಇದರಲ್ಲಿ ನನ್ನ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.

ಮಂಗಸೂಳಿ ಗ್ರಾಮದಲ್ಲಿ ಬಹಳಷ್ಟು ವಿದ್ಯುತ್ ಕಂಬಗಳಿವೆ. ಪಕ್ಕದಲ್ಲಿ ಕೆರೆ ಇರುವುದರಿಂದ ಕಾಲೇಜು ನಿರ್ಮಿಸಲು ಸೂಕ್ತ ಸ್ಥಳವಿಲ್ಲ. ಆದ್ದರಿಂದ ಐನಾಪುರದಲ್ಲಿ ನಿರ್ಮಿಸುವುದಾಗಿ ಅಧಿಕಾರಿಗಳು ಹೇಳಿರುವುದರಿಂದ ಸ್ಥಳಾವಕಾಶವನ್ನು ತಹಸೀಲ್ದಾರರು ಸರ್ಕಾರಿ ಆದೇಶದ ಮೇಲೆಗೆ ಮಂಜೂರು ಮಾಡಿದ್ದಾರೆ. ಅದನ್ನು ಬಿಟ್ಟರೆ ನನ್ನದು ಯಾವುದೇ ಪಾತ್ರವಿಲ್ಲ ಎಂದರು.