ಕನ್ನಡಪ್ರಭ ವಾರ್ತೆ ಬೀಳಗಿ

ತಾಲೂಕಿನ ಅನಗವಾಡಿಯ ಬನಶಂಕರಿದೇವಿ ವಿದ್ಯಾ ಸಂಸ್ಥೆ ಪ್ರತಿಷ್ಠಾನದ ಬಿ.ಎನ್.ಖೋತ ಸಮೂಹ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ವೃಕ್ಷೋ ರಕ್ಷತಿ ರಕ್ಷಿತಃ ಎಂಬ ತತ್ವದಡಿಯಲ್ಲಿ ವಿಶ್ವ ಪರಿಸರ ದಿನದ ಕಾರ್ಯಕ್ರಮದಂಗವಾಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಖೋತ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕುರಿತು ತಿಳುವಳಿಕೆ ನೀಡಿದರು. ಭಯಾನಕ ರೋಗ ಕೊರೋನಾದಿಂದ ನಾವು ಬದುಕಿದ್ದೆ ಗಿಡಮರಗಳ ಗಾಳಿಯಿಂದ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಮನೆಯ ಮುಂದೆ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಿ ಎಂದು ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಸುರೇಶ ಹವಾಲ್ದಾರ ಮಾತನಾಡಿ, ಇಂದಿನ ದಿನಗಳಲ್ಲಿ ಜಾಗತೀಕರಣ ಮತ್ತು ಕೈಗಾರೀಕರಣದ ಪರಿಣಾಮದಿಂದ ಪರಿಸರ ಮಾಲಿನ್ಯದಲ್ಲಾಗುವ ತೊಂದರೆಗಳನ್ನು ಹೋಗಲಾಡಿಸಲು ನಾವು ಕಾಡು ಬೆಳೆಸಿ ನಾಡು ಉಳಿಸಿ ಎಂಬ ವಾಕ್ಯವನ್ನು ಜಾಗೃತಗೊಳಿಸುವುದೇ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಶಿಕ್ಷಕಿ ಪೂಜಾ ಕಮತಗಿ, ವಿದ್ಯಾರ್ಥಿನಿಯರಾದ ಪದ್ಮಾವತಿ ಸೊನ್ನದ ಮತ್ತು ಸದಫ್‌ನಾಜ ಬಡೇಗಾರ ಪರಿಸರ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಿಂದ ರಸಪ್ರಶ್ನೆ ಮತ್ತು ರೂಪಕವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿ ವೈಭವ ಹಂಚಾಟೆ ನಿರ್ವಹಿಸಿದನು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.