ಕನ್ನಡಪ್ರಭ ವಾರ್ತೆ ಬೆಳಗಾವಿ ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಭಕ್ತಿಭಾವದಿಂದ ನಡೆದರೆ ಮನಸ್ಸು ಪರಿಶುದ್ಧವಾಗುತ್ತದೆ. ದೇವಸ್ಥಾನಗಳಿಂದ ಊರಿಗೆ ಅಭಿವೃದ್ಧಿ, ಶಾಂತಿ ಲಭಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಭಕ್ತಿಭಾವದಿಂದ ನಡೆದರೆ ಮನಸ್ಸು ಪರಿಶುದ್ಧವಾಗುತ್ತದೆ. ದೇವಸ್ಥಾನಗಳಿಂದ ಊರಿಗೆ ಅಭಿವೃದ್ಧಿ, ಶಾಂತಿ ಲಭಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದುರ್ಗಾದೇವಿ ಮಂದಿರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಊರು ಉದ್ಧಾರವಾಗಿ, ಕೆಟ್ಟ ಛಾಯೆ ತಾಗಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳನ್ನು ನಿರ್ಮಿಸಿ ವಾಸ್ತು ಶಾಂತಿ ಮಾಡಲಾಗುತ್ತದೆ. ಕೊಂಡಸಕೊಪ್ಪ ಗ್ರಾಮದಲ್ಲಿ 4 ಗುಡಿಗಳನ್ನು ನಿರ್ಮಾಣ ಮಾಡಿದ್ದು, ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 7 ವರ್ಷದಲ್ಲಿ 150ಕ್ಕೂ ಹೆಚ್ಚು ಗುಡಿಗಳ ಜೀರ್ಣೋದ್ಧಾರ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಹಿಂದೆ ಇದ್ದವರ ಮೇಲೆ ನಾನು ಆರೋಪ ಮಾಡಲ್ಲ. ಆದರೆ ಅವರು ಅಭಿವೃದ್ದಿ ಕೆಲಸ ಮಾಡದ್ದರಿಂದ ನನಗೆ ಈ ಅವಕಾಶ ಸಿಕ್ಕಿದೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ನಾನು ಬಸವ, ಅಂಬೇಡ್ಕರ್ ತತ್ವದಲ್ಲಿ ವಿಶ್ವಾಸವಿಟ್ಟಿದ್ದೇನೆ. ಚುನಾವಣೆ ಮುಗಿದ ನಂತರ ರಾಜಕಾರಣ ಮಾಡುವುದಿಲ್ಲ. ನಿಮ್ಮ ಬೆಂಬಲವೇ ನನಗೆ ಶಕ್ತಿ. ನಿಮ್ಮ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವೆ ಎಂದರು.

ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ ಅವರು ಕ್ಷೇತ್ರವನ್ನು ಪರಿವಾರದ ರೀತಿಯಲ್ಲಿ ಪರಿಗಣಿಸಿ ಅಭಿವೃದ್ಧಿ ಮಾಡುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಮೂಲಕ, ಗ್ರಾಮದ ಹಲವು ವರ್ಷಗಳ ಬೇಡಿಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಈಡೇರಿದ್ದಾಗಿ ತಿಳಿಸಿದರು.

ಆ ದೇವರ ಇಚ್ಛಾಶಕ್ತಿ ಜೊತೆಗೆ ಆರ್ಥಿಕ ಶಕ್ತಿ ಇರಬೇಕು. ಪ್ರಯತ್ನದ ಜೊತೆಗೆ ದೇವರ ಆಶೀರ್ವಾದ ಇದ್ದರೆ ಕೆಲಸ ಮಾಡಬಹುದು. ಎಲ್ಲ ಕೆಲಸಗಳಲ್ಲಿ ನಿಮ್ಮ ಜೊತೆಗೆ ಇರುತ್ತೇವೆ. ನಿತ್ಯ ನಿಮ್ಮ ಜೊತೆ ಇರುವವರನ್ನು ಬೆಂಬಲಿಸಬೇಕು. ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದ ಆಸ್ತಿ, ಪಕ್ಷಾತೀತ ನಾಯಕಿಯಾಗಿ ಬೆಳೆಯುತ್ತಿದ್ದಾರೆ. ಅವರು ಹೇಳಿದ ಕೆಲಸವನ್ನು ಎಲ್ಲ ಅಧಿಕಾರಿಗಳೂ ಮಾಡುತ್ತಾರೆ. ಅವರನ್ನು ಬೆಂಬಲಿಸುವ ಮೂಲಕ ನಿಮ್ಮ ಆಸ್ತಿಯನ್ನು ಕಾಪಾಡಿಕೊಳ್ಳಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ವಿಠ್ಠಲ ಸಾಂಬ್ರೆಕರ, ಈ ಮೊದಲು ಕ್ಷೇತ್ರ ಅಭಿವೃದ್ಧಿಯಾಗಿರಲಿಲ್ಲ. ಈಗ ಲಕ್ಷ್ಮೀ ಹೆಬ್ಬಾಳಕರ್ ಅವರಿಂದಾಗಿ ಗ್ರಾಮದ ಚಿತ್ರಣವೇ ಬದಲಾಗಿದೆ. ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ, ಒಂದೇ ಊರಿಗೆ 3- 4 ದೇವಸ್ಥಾನ ನಿರ್ಮಿಸಿದ್ದಾರೆ. ಅವರ ಜೊತೆಗೆ ನಾವಿರುತ್ತೇವೆ ಎಂದು ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಪಾವನಕ್ಷೇತ್ರ ಬಡೇಕೊಳ್ಳಮಠದ ನಾಗೇಂದ್ರ ಮಹಾಸ್ವಾಮಿಗಳು, ಸುರೇಶ ಕರಗುಪ್ಪಿಕರ್, ಗಂಗಾರಾಮ ಅಷ್ಟೇಕರ್, ವಿಠ್ಠಲ ಸಾಂಬ್ರೇಕರ್, ಸಿ.ಸಿ‌.ಪಾಟೀಲ, ಸಹದೇವ್ ಪೂಜೇರಿ, ಶ್ರೀಕಾಂತ ಪಾಟೀಲ, ರಾಮಾ ಸಾಂಬ್ರೇಕರ್, ಜ್ಯೋತಿಬಾ ಕುದ್ರೆಮನಿ, ಮನೋಹರ್ ಮುಚ್ಚಂಡಿ, ಪದ್ಮರಾಜ ಪಾಟೀಲ, ಅಡಿವೆಪ್ಪ ಡೊಳಗಾರ್, ಚಾರ್ಲಿ ಗವಳಿ, ಆಶಾ ಗುಡಮಟ್ಟಿ, ಭೀಮಶೇನ್ ಕರಗುಪ್ಪಿಕರ್ ಮುಂತಾದವರು ಇದ್ದರು.

--------

ಕೋಟ್‌

ಎಲ್ಲರೂ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಸದಸ್ಯರಾಗಬೇಕು. ಕಡಿಮೆ ಬಡ್ಡಿದರದಲ್ಲಿ ಎಲ್ಲರಿಗೂ ಸಾಲ ಸೌಲಭ್ಯ ಸಿಗಲಿದ್ದು, ಅನುಕೂಲ ಮಾಡಿಕೊಡಲಾಗುವುದು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. ನಾನಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಾಗಲಿ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ. ಒಮ್ಮೆ ಮಾತು ಕೊಟ್ಟರೆ ಮಾಡಿಯೇ ತೀರುತ್ತೇವೆ.

ಲಕ್ಷ್ಮೀ ಹೆಬ್ಬಾಳಕರ, ಸಚಿವ