ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಸೇರಿರುವ ಪುರಾಣ ಪ್ರಸಿದ್ಧ ಚಿಕ್ಕರಸಿನಕೆರೆ ಪುಣ್ಯ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ರೂಪಿಸಲು ನಾನು ಸಹ ಕೈ ಜೋಡಿಸುವುದಾಗಿ ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.

ಸಮೀಪದ ಚಿಕ್ಕರಸಿನಕೆರೆಯ ಶ್ರೀಕಾಲಬೈರವೇಶ್ವರ ಪುಣ್ಯ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ 50 ಹಿರಿಯ ದಂಪತಿಗೆ ಶ್ರೀ ಕ್ಷೇತ್ರ ಶ್ರೀಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಿಂದ ಸನ್ಮಾನ ಹಾಗೂ ಬಾಗಿನ ಕಾರ್ಯಕ್ರಮದಲ್ಲಿ ಮಾತನಾಡಿ ಸಾವಿರಾರು ಕುಲ ಬಾಂಧವರನ್ನು ಹೊಂದಿರುವ ಕ್ಷೇತ್ರದ ಬಸವಪ್ಪನ ಪವಾಡ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದರು.

ಭಕ್ತರ ಪಾಲಿನ ಆಶಾಕಿರಣ ಶ್ರೀಕಾಲಭೈರವೇಶ್ವರ ಪುಣ್ಯ ಕ್ಷೇತ್ರದಲ್ಲಿ ಬಸಪ್ಪ ಹಲವಾರು ಪವಾಡಗಳನ್ನು ಸೃಷ್ಟಿಸಿ ಭಕ್ತರ ಆಶೋತ್ತರ ಈಡೇರಿಸುತ್ತಿದೆ. ಇಲ್ಲಿಗೆ ಬರುವ ಭಕ್ತರ ಹಿತ ದೃಷ್ಟಿ ಹಾಗೂ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಮಾದರಿ ಪುಣ್ಯಕ್ಷೇತ್ರವನ್ನಾಗಿ ಮಾಡಲು ಸಹಕಾರ ನೀಡುವುದಾಗಿ ಹೇಳಿದರು.

ಅದಿಚುಂಚನಗಿರಿ ಮಠದ ಚುಂಚಶ್ರೀ ಶ್ರೀಬಾಲಗಂಗಾದರನಾಥ ಸ್ವಾಮೀಜಿ ದೂರ ದೃಷ್ಟಿಯಿಂದ ದೇಶ ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿ ಒಕ್ಕಲಿಗ ಸಮುದಾಯ ಅಭ್ಯುದಯಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.


ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ಉನ್ನತ ಉದ್ಯೋಗವಾಕಾಶ ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ಚಾಪುಗಲ್ಲೂ ಮೂಡಿಸುತ್ತಿದ್ದಾರೆ. ಈಗಿನ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಹ ಸಂಸ್ಥೆಯನ್ನು ಮತ್ತಷ್ಟು ಪ್ರಗತಿಯತ್ತ ಮುನ್ನಡೆಸುತಿದ್ದಾರೆ ಎಂದು ಶ್ಲಾಘಿಸಿದರು.

ಆದಿಚುಂಚನಗಿರಿ ಕ್ಷೇತ್ರದಲ್ಲಿ ನಿರಂತರ ಅನ್ನದಾಸೋಹದ ಜೊತೆಗೆ ಗ್ರಾಮೀಣ ಭಾಗದಲ್ಲಿ ಹಸಿದು ಬರುವ ಭಕ್ತರಿಗೆ ಶ್ರೀಕಾಲಬೈರವೇಶ್ವರ ಪುಣ್ಯ ಕ್ಷೇತ್ರದಲ್ಲಿ ಅನ್ನದಾನ ಕೈಂಕರ್ಯದಲ್ಲಿ ತೊಡಗಿರುವುದು ನಮ್ಮ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಶ್ರೀಕ್ಷೇತ್ರ ಅಭಿವೃದ್ಧಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ನೆರವು ನೀಡುತ್ತಿದ್ದು, ಭಕ್ತರ ರಕ್ಷಣೆಗಾಗಿ ಚಿಕ್ಕರಸಿನಕೆರೆ ಹೆಬ್ಬಾಳಕ್ಕೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಕೈ ಜೋಡಿಸುವುದಾಗಿ ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಡಾ.ಪ್ರಸನ್ನನಾಥ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿದರು.

ಇದೇ ವೇಳೆ 50 ವರ್ಷ ಪೂರೈಸಿದ 60ಕ್ಕೂ ಹೆಚ್ಚು ಹಿರಿಯ ದಂಪತಿಗೆ ಶಾಸಕ ಉದಯ್ ಹಾಗೂ ಪತ್ನಿ ವಿನೂತ ಅವರು ಮೈಸೂರು ಪೇಟ ತೊಡಿಸಿ ಮಡಿಲು ಅಕ್ಕಿ ತುಂಬಿ ಅಭಿನಂದಿದರು. ಬಳಿಕ ಶಾಸಕ ದಂಪತಿಯನ್ನು ಅಭಿನಂದಿಸಲಾಯಿತು.

ಈ ವೇಳೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಡಾ.ಪ್ರಸನ್ನನಾಥ ಸ್ವಾಮೀಜಿ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ವಿನುತ ಉದಯ್, ಕಾಲಭೈರವೇಶ್ವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಜಮಾನ ಶಿವಲಿಂಗೇಗೌಡ, ಪದಾಧಿಕಾರಿಗಳಾದ ಚನ್ನೇಗೌಡ, ಪುಟ್ಟರಾಜು, ರಘು, ಲೋಕೇಶ್, ಶಿವಣ್ಣ, ಮರಿಲಿಂಗಮ್ಮ, ಜೋಗಿಗೌಡ ಸೇರಿದಂತೆ ಮತ್ತಿತರರು ಇದ್ದರು.