ಸಾರಾಂಶ
ಹಿರಿಯೂರು: ತಾಲೂಕಿನ ಅಲ್ಲಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಕೆಲ ಗ್ರಾಮಗಳ ಜನರು ಕುಡಿಯುವ ನೀರು ಕೊಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿಲುವು ತಾಳಿದ್ದರಿಂದ ಬುಧವಾರ ತಹಸೀಲ್ದಾರ್ ಕಚೇರಿಯಲ್ಲಿ ಭರಂಪುರ, ಕಾಟನಾಯಕನಹಳ್ಳಿ, ಬಗ್ಗನಡು ಮತ್ತಿತರ ಹಳ್ಳಿಗಳ ಗ್ರಾಮಸ್ಥರ ಸಭೆ ಕರೆಯಲಾಗಿತ್ತು. ತಹಸೀಲ್ದಾರ್ ರಾಜೇಶ್ ಕುಮಾರ್, ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿ ಹಾಗೂ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೂರಾರು ಜನರು ಪಾಲ್ಗೊಂಡು ಯಾವ ಮೂಲದಿಂದಲಾದರೂ ಜನ ಜಾನುವಾರುಗಳಿಗೆ ನೀರು ಒದಗಿಸಿ.
ಈಗಾಗಲೇ ಸಾವಿರ ಅಡಿಗಳವರೆಗೆ ಬೋರ್ ಕೊರೆಸಿದರು ಸಹ ಒಂದು ಹನಿ ನೀರು ಸಿಗುತ್ತಿಲ್ಲ. ಇರುವ ಬೋರ್ಗಳಲ್ಲಿ ನೀರು ಬತ್ತುತ್ತಿವೆ. ಟ್ಯಾಂಕರ್ ಮೂಲಕ ಬರುವ ನೀರು ಯಾವುದಕ್ಕೂ ಸಾಲುತ್ತಿಲ್ಲ. ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಂಭವವಿದ್ದು, ಈಗಲಾದರೂ ಕೆರೆಗಳಿಗೆ ನೀರು ಹರಿಸುವ ಕೆಲಸ ಅತ್ಯಂತ ತುರ್ತಾಗಿ ಆಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.ತಹಸೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ನೀರಿನ ಅಭಾವದ ಬಗ್ಗೆ ಸಂಪೂರ್ಣ ಮಾಹಿತಿಯಿದ್ದು, ಸಂಬಂಧಪಟ್ಟ ಸ್ಥಳಗಳಿಗೆ ಅಧಿಕಾರಿಗಳನ್ನು ಕಳಿಸಿ ಸ್ಥಳ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಅನುಮತಿ ಪಡೆದು ಆದಷ್ಟು ಬೇಗ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ರೈತ ಮುಖಂಡ ಕಸವನಹಳ್ಳಿ ರಮೇಶ್, ಕೆ.ಟಿ.ತಿಪ್ಪೇಸ್ವಾಮಿ, ಕಂದಿಕೆರೆ ಜಗದೀಶ್, ತಿರುಮಲೇಶ್, ಓಬದಾಸಪ್ಪ ಮದಕರಿನಾಯಕ, ಕರಿಯಣ್ಣ, ಶಂಕರಪ್ಪ, ಶ್ರೀಧರ್, ಸಣ್ಣಪ್ಪ, ಜಯಮ್ಮ, ವೇದಮೂರ್ತಿ, ತಿಪ್ಪಮ್ಮ, ರಾಜಾನಾಯ್ಕ, ತಿಮ್ಮಣ್ಣ, ಶ್ರೀನಿವಾಸ್, ಚಿತ್ರಲಿಂಗಪ್ಪ ಮುಂತಾದವರು ಹಾಜರಿದ್ದರು.