ಸಂಚಾರಿ ನಿಯಮಗಳ ಪಾಲಿಸಿದರೆ ಅಪಘಾತ ಆಗೋದಿಲ್ಲ

| Published : Dec 31 2023, 01:30 AM IST

ಸಾರಾಂಶ

ವಾಹನ ಚಾಲಕರು ಎಷ್ಟೇ ಎಚ್ಚರಿಕೆ ವಹಿಸುತ್ತಿದ್ದರೂ ಅಪಘಾತಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಸಂಚಾರಿ ಠಾಣೆ ಪೊಲೀಸರ ಮಾತು ಕೇಳಿ, ಅನುಸರಿಸಿದ್ದೇ ಆದಲ್ಲಿ ಅಪಘಾತಗಳಿಗೆ ಸಂಪೂರ್ಣ ಮುಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ, ಸಣ್ಣ ಕಾರಣಕ್ಕೆ ದೊಡ್ಡ ಅಪಘಾತವಾಗುವುದು ನಿತ್ಯ ನೋಡುವಂತಾಗಿದೆ. ಹೀಗಾಗಿ ಎಲ್ಲರೂ ಸಂಚಾರ ನಿಯಮಗಳ ಪಾಲಿಸಿ ಅಪಘಾತ ತಪ್ಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಯಾವುದೇ ಅಪಘಾತ ಘಟನೆಗಳು ಸಂಭವಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವ ಕೊಂಡುಕೊಳ್ಳಲಾಗದಂಥ ಅಮೂಲ್ಯವಾಗಿದೆ. ಅದನ್ನು ಸುರಕ್ಷಿತವಾಗಿಟ್ಟರೆ ಬಾಳು ಬಂಗಾರ. ಸಂಚಾರಿ ಇಲಾಖೆಯ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಜಾಥಾ ಉದ್ದೇಶಿಸಿ ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್ ಮಾತನಾಡಿ, ಸಮಾಜದಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಾಗಿರುತ್ತದೆ. ಜೊತೆಗೆ ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಇರುವ ಕಾನೂನುಗಳನ್ನು ಪಾಲನೆ ಮಾಡುವ ಕಡೆ ಗಮನ ನೀಡಬೇಕು ಎಂದು ತಿಳಿಸಿದರು.

ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮೆಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್‌ಗಳನಳನ್ನು ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆ ಆಗುತ್ತದೆ. ಮದ್ಯಪಾನ ಸೇವಿಸಿ ವಾಹನ ಚಾಲನೆ, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. ತಮ್ಮ ಮನೆ, ವಾಸ ಸ್ಥಳದ ಸುತ್ತ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸಮಾಜದ ರಕ್ಷಣೆಗೆ ಇಲಾಖೆ ಸದಾ ಸನ್ನದ್ಧವಾಗಿದೆ ಎಂದರು.

ನಂತರ ಜಾಥಾವು ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವೃತ್ತದವರೆಗೆ ನಡೆಯಿತು. ಜಾಥಾದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಆಟೋ ಚಾಲಕರು ಪಾಲ್ಗೊಂಡಿದ್ದರು.

ಪಿಎಸ್‌ಐ ಎಚ್.ಎನ್. ನಾಗರಾಜ್, ಹೆಡ್ ಕಾನ್‌ಸ್ಟೇಬಲ್‌ ನಾಗೇಶ್, ನಾಗರಾಜ್, ಗಿರೀಶ್, ಸಿಬ್ಬಂದಿ ಹನುಮಂತಪ್ಪ, ಇರ್ಷಾದ್, ಸುನೀಲ್ ಬನ್ನಿಕೊಪ್ಪ, ಪರಮಪ್ಪ, ಉಮೇಶ್, ಶಾಲಾ ಕಾಲೇಜಿನ ಅಧ್ಯಾಪಕರು ಉಪಸ್ಥಿತರಿದ್ದರು.

- - - -30ಕೆಪಿಸೊರಬ01:

ಸೊರಬ ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಜಾಥಾಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿ ಮಾತನಾಡಿದರು.