ಬ್ಯಾಡಗಿ: ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಕ್ಕೂ ಅಧಿಕ ಮೌಲ್ಯದ ತೇಗದ ಮರದ ತುಂಡುಗಳನ್ನು ವಶಪಡಿಸಿಕೊಂಡ ಘಟನೆ ಪಟ್ಟಣದ ನೂತನ ಶಾಲೆ ಬಳಿ ನಡೆದಿದೆ.

ಎಸಿಎಫ್ ಅಕ್ಷಯ ಪ್ರಕಾಶ (ಐಎಫ್‌ಎಸ್) ಹಾಗೂ ಡಿಎಫ್ಒ ಮಂಜುನಾಥ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿದ ಆರ್‌ಎಫ್‌ಒ ಲೋಕೇಶ್ ಚವ್ಹಾಣ ನೇತೃತ್ವದ ತಂಡ ಸುಮಾರು ಲಕ್ಷಕ್ಕೂ ಅಧಿಕ ಮೌಲ್ಯದ ಸಾಗವಾನಿ ದಿಮ್ಮಿಗಳನ್ನು ವಶಪಡಿಸಿಕೊಂಡಿದೆ. ಈ ತಂಡ ನೂತನ ಶಾಲೆಯ ಅಕ್ಕಪಕ್ಕದಲ್ಲಿನ ಜಮೀನಿನಲ್ಲಿ ಪರಿಶೀಲನೆ ನಡೆಸಿದಾಗ ಸಾಗವಾನಿ ದಿಮ್ಮಿಗಳು ಪತ್ತೆಯಾಗಿವೆ.

ಆರೋಪಿಗಳ ಪತ್ತೆಗೆ ಬಲೆ

ಆರೋಪಿಗಳಿಗಾಗಿ ವ್ಯಾಪಕ ಬಲೆ ಬೀಸಿರುವ ತಂಡವು ತಾಲೂಕಿನ ವಿವಿಧೆಡೆ ಪರಿಶೀಲನೆ ಕಾರ್ಯ ಕೈಗೊಂಡಿದೆ. ಮೋಬೈಲ್ ಟವರ್ ಲೋಕೇಶನ್ ಹಾಗೂ ವಾಹನಗಳ ಓಡಾಟದ ಕುರಿತು ತೀವ್ರ ನಿಗಾ ಇಡಲಾಗಿದ್ದು, ಲಭ್ಯವಿರುವ ಸಿಸಿ ಕ್ಯಾಮೆರಾಗಳಲ್ಲಿ ಪರಿಶೀಲನೆ ನಡೆಸುತ್ತಿದೆ.

ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಆರ್.ಎಂ. ಶೇಷಗಿರಿ, ಎ.ಎಸ್. ಹುಬ್ಬಳ್ಳಿ, ಲಕ್ಷ್ಮಣ ಬಾರ್ಕಿ, ಶಹರದ ಅರಣ್ಯಾಧಿಕಾರಿ ಪ್ರವೀಣ್ ಭಜಂತ್ರಿ, ಸಿಬ್ಬಂದಿ ಗಣೇಶ್, ಜೈರಾಜ್, ಭೀಮೇಶ್, ಮೆಹಬೂಬ್ ಹಾಗೂ ವಾಚರ್‌ಗಳಾದ ಅಲಿ ಇಟಗಿ, ಹನುಮಂತ ತೆವರಿ ಮತ್ತು ಪ್ರವೀಣ್ ಭಾಗವಹಿಸಿದ್ದರು.