ರಾಜ್ಯದಲ್ಲಿ ಇನ್ನು ಐದು ದಿನ ಉಷ್ಣ ಮಾರುತ ದಾಳಿ

| Published : Apr 23 2024, 12:48 AM IST / Updated: Apr 23 2024, 08:22 AM IST

ಸಾರಾಂಶ

6 ರಾಜ್ಯಗಳಿಗೆ ಅಲರ್ಟ್‌ ನೀಡುವ ಮೂಲಕ ಸೆಕೆ ಎದುರಿಸಲು ಸಜ್ಜಾಗಿ ಎಂದು ಜನರಿಗೆ ಪರೋಕ್ಷವಾಗಿ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ನವದೆಹಲಿ: ಸುಡುಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ನಡುವೆಯೇ ಕರ್ನಾಟಕವೂ ಸೇರಿದಂತೆ ಭಾರತದ 6 ರಾಜ್ಯಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಉಷ್ಣಹವೆ ಕಾಣಿಸಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಈಗಾಗಲೇ ಉಷ್ಣಹವೆಯಿರುವ ಪೂರ್ವ ಭಾರತದ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌ ಮತ್ತು ಬಿಹಾರ ರಾಜ್ಯಗಳಲ್ಲಿ ಮತ್ತೆ 5 ದಿನಗಳ ಕಾಲ ಅದೇ ವಾತಾವರಣ ಇರಲಿದೆ. ಇದರ ಜೊತೆಗೆ ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ಉತ್ತರಪ್ರದೇಶ ಮತ್ತು ಜಾರ್ಖಂಡ್‌ ರಾಜ್ಯದಲ್ಲೂ ಮುಂದಿನ 5 ದಿನ ಭಾರೀ ಉಷ್ಣಹವೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದೆ.

ಜೊತೆಗೆ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕರ್ನಾಟಕ, ಗೋವಾ, ಕೇರಳ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಆರ್ದ್ರತೆಯೂ ಹೆಚ್ಚಿರುತ್ತದೆ. ಏಪ್ರಿಲ್‌-ಜೂನ್‌ ಅವಧಿಯಲ್ಲಿ ಭಾರತದಾದ್ಯಂತ ತಿಂಗಳಿಗೆ 10-20 ಉಷ್ಣಹವೆಯಿರುವ ದಿನಗಳು ಇರಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.

ಭಾರೀ ಉಷ್ಣಹವೆ ಎಂದರೇನು?

ಬಯಲು ಪ್ರದೇಶದಲ್ಲಿ 40 ಡಿಗ್ರಿ, ಕರಾವಳಿಯಲ್ಲಿ 37 ಡಿಗ್ರಿ ಮತ್ತು ಪರ್ವತ ಪ್ರದೇಶದಲ್ಲಿ 30 ಡಿಗ್ರಿ ಸೆಲ್ಶಿಯಸ್‌ ತಾಪಮಾನಕ್ಕಿಂತ ಹೆಚ್ಚಿರುವ ಜೊತೆಗೆ ಅಲ್ಲಿನ ಸರಾಸರಿ ತಾಪಮಾನಕ್ಕಿಂತ 4.5 ಡಿಗ್ರಿ ಹೆಚ್ಚಿದ್ದರೆ ಅದನ್ನು ಉಷ್ಣಹವೆ ಎಂದು ಪರಿಗಣಿಸಲಾಗುತ್ತದೆ. ಅದೇ ಸರಾಸರಿ ತಾಪಮಾನಕ್ಕಿಂತ 6.4 ಡಿಗ್ರಿ ಹೆಚ್ಚಿದ್ದರೆ ಅದನ್ನು ಭಾರೀ ಉಷ್ಣಹವೆ ಎಂದು ಪರಿಗಣಿಸಲಾಗುತ್ತದೆ.