ಸಾರಾಂಶ
ಶಿರಹಟ್ಟಿ: ಸಾಮಾಜಿಕ ಪರಿಶೋಧನೆಯಿಂದ ಶಾಲಾ ಕಾರ್ಯಚಟುವಟಿಕೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿಸಿ ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಾರ್ಯಕ್ರಮದಿಂದ ಶಾಲೆಗೆ ವಿವಿಧ ಯೋಜನೆಯಡಿ ಕೈಗೊಳ್ಳಲಾದ ಮಾಹಿತಿ ಸಂಗ್ರಹಣೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸುವ ಕಾರ್ಯ ಶ್ಲಾಘನೀಯ. ಇದರಿಂದ ಯೋಜನೆ ಮೌಲ್ಯಮಾಪನ ಮಾಡಿದಂತಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಮೇಶ ಹಾವರಡ್ಡಿ ಹೇಳಿದರು. ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ ಗದಗ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಬೆಳ್ಳಟ್ಟಿ ಹೊಸ ಬಡಾವಣೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ೨೦೨೪-೨೫ನೇ ಸಾಲಿನ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಹಂತದಲ್ಲೂ ಸಮುದಾಯದ ಸಹಭಾಗಿತ್ವ ದೊರೆತರೆ ಶಾಲೆಗಳು ಏಳ್ಗೆ ಸಾಧಿಸಲು ಸಾಧ್ಯ. ಮಕ್ಕಳನ್ನು ಶಾಲೆಗೆ ಕಳುಹಿಸಿದ ತಕ್ಷಣ ಪೋಷಕರ ಕರ್ತವ್ಯ ಪೂರ್ಣಗೊಳ್ಳುವುದಿಲ್ಲ. ಮಕ್ಕಳ ಶೈಕ್ಷಣಿಕ ಮಟ್ಟ ತಿಳಿಯಲು ಸದಾ ಶಾಲೆಯ ನಿಕಟ ಸಂಪರ್ಕದಲ್ಲಿರಬೇಕು. ಶಾಲೆಯ ಅಗತ್ಯಗಳ ಬಗ್ಗೆ ಚರ್ಚಿಸಬೇಕು ಎಂದರು. ಸಮುದಾಯ ಭಾಗವಹಿಸುವಿಕೆ, ಪೋಷಕರ ಸಹಕಾರ ಇಲ್ಲದೇ ಯಾವ ಯೋಜನೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ಸಮುದಾಯದವರು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಮಾದರಿಯಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಸಹ ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡಿ ಮಕ್ಕಳ ಭವಿಷ್ಯಕ್ಕೆ ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದರು. ಸಾಮಾಜಿಕ ಪರಿಶೋಧನೆ ತಂಡದ ಮುಖ್ಯಸ್ಥ, ತಾಲೂಕು ಪಂಚಾಯತ್ ಕಾರ್ಯಕ್ರಮ ಅಧಿಕಾರಿ ತಾವರೆಪ್ಪ ಲಮಾಣಿ ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳ ತಂಡದವರು ೨೦೨೪-೨೫ನೇ ಸಾಲಿನ ವರದಿ ಮಂಡಿಸಿ ಈ ಶಾಲೆಯಲ್ಲಿ ಪ್ರಧಾನಮಂತ್ರಿ ಪೋಷಣ್ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಸಮುದಾಯದ ಪ್ರೋತ್ಸಾಹ ಉತ್ತಮವಾಗಿದೆ. ಕಾರಣ ಪಾಲಕರು ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ನಿರ್ವಾಣಶೆಟ್ರ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮರಡ್ಡಿ ಮರಡ್ಡಿ, ಮೋಹನಚಂದ ಗುತ್ತೆಮ್ಮನವರ, ಪರುಶುರಾಮ ಮಲ್ಲಾಡದ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯೆ ಗಂಗವ್ವ ಗುತ್ತೆಮ್ಮನವರ, ಎಸ್ಡಿಎಂಸಿ ಅಧ್ಯಕ್ಷ ನೀಲಕಂಠಪ್ಪ ಹಳ್ಳೆಮ್ಮನವರ, ಸದಸ್ಯ ಬಸವರಾಜ ಹಳ್ಳೆಮ್ಮನವರ, ಮಹಾದೇವ ಕಲ್ಲೊಡ್ಡರ, ಮಂಜುನಾಥ್ ಗುತ್ತೆಮ್ಮನವರ ಹಾಗೂ ಇತರರು ಭಾಗವಹಿಸಿದ್ದರು. ಗಿರೀಶ ಕೋಡಬಾಳ ಪ್ರಾಸ್ತಾವಿಕ ಮಾತನಾಡಿದರು. ಆರ್.ಐ. ದೇವರಮನಿ ಸ್ವಾಗತಿಸಿದರು. ಕೆ.ಬಿ. ಸುತಾರ ಕಾರ್ಯಕ್ರಮ ನಿರೂಪಿಸಿದರು.