ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಧರ್ಮವು ಮನುಷ್ಯನ ತಾಮಸಗುಣವನ್ನು ನಾಶಗೊಳಿಸಿ ಅವನನ್ನು ಪರಿಪೂರ್ಣವಾದ ಮಾನವತೆಯತ್ತ ಕೈ ಹಿಡಿದು ಕರೆಯೊಯ್ಯುತ್ತದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಅಭಿಪ್ರಾಯಪಟ್ಟರು.ತಾಲೂಕಿನ ಮಾದಹಳ್ಳಿ ಉಕ್ಕಿನಕಂತೆ ಮಠದಲ್ಲಿ ಆಯೋಜನೆಗೊಂಡಿದ್ದ ಮೇಲ್ಚಾವಣಿ ನಿರ್ಮಾಣ ಕಾರ್ಯದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧರ್ಮವು ರಾಜಕಾರಣದ ಅಂಗವಾದರೆ ಅದರಿಂದ ಸಮಾಜಕ್ಕೆ ಒಳಿತಾಗುವುದಿಲ್ಲ. ಕನ್ನಡನಾಡಿನಲ್ಲಿ ಮಠಮಾನ್ಯಗಳು ಶಿಕ್ಷಣ, ಆರೋಗ್ಯ ಮತ್ತು ಅನ್ನದಾಸೋಹದ ಕ್ಷೇತ್ರದಲ್ಲಿ ಗಣನೀಯವಾದ ಕೆಲಸಮಾಡುತ್ತಾ ಸರ್ಕಾರದ ಜವಾಬ್ದಾರಿಯನ್ನು ಹಗುರಗೊಳಿಸಿವೆ .ಮಾದಳ್ಳಿ ಮಠವು ಸುಮಾರು ಎಂಟುನೂರು ವರುಷಗಳ ಇತಿಹಾಸವನ್ನು ಹೊಂದಿದ್ದು, ನಾಡಿನಲ್ಲಿ ಶ್ರದ್ಧಾ ಕ್ಷೇತ್ರದಲ್ಲಿ ಅತ್ಯುನ್ನತ ವಾದ ಸ್ಥಾನಮಾನವನ್ನು ಹೊಂದಿರುವುದರಿಂದ ಈ ಮಠಕ್ಕೆ ನನ್ನ ಕೈಲಾದ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದರು.ಮಾದಹಳ್ಳಿ ಉಕ್ಕಿನ ಕಂತೆ ಮಠಾದೀಶರಾದ ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಶಾಸಕರ ಉದಾರಗುಣವನ್ನು ಶ್ಲಾಘಿಸಿ ಶ್ರೀ ಮಠವು ಯಾವಾಗಲೂ ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸುತ್ತಲೇ ಬಂದಿದೆ. ಎಲ್ಲ ಜಾತಿ ಜನಾಂಗದ ಭಕ್ತಾದಿಗಳಿಗೆ ಇಲ್ಲಿಮುಕ್ತವಾದ ಅವಕಾಶವಿದ್ದು, ಮಠವು ಸರ್ವ ಜನಾಂಗದ ಶಾಂತಿಯ ಮಂದಿರವಾಗಿ ರೂಪುಗೊಂಡಿದೆ ಎಂದರು.ಹುಣಸೂರು ತಾಲೂಕು ವೀರಶೈವ ಮಹಾಸಭೆಯ ಅಧ್ಯಕ್ಷ ಸೋಮಶೇಖರ್, ಬಸವ ಸಮಿತಿ ಅಧ್ಯಕ್ಷ ಕೆ.ಎಚ್. ವೀರಭದ್ರಪ್ಪ, ಮಹಿಳಾ ಘಟಕದ ವಜ್ರಮ್ಮ, ಶಾಂತಮ್ಮ , ವೃಷಬೇಂದ್ರಸ್ವಾಮಿ, ಜಿಪಂ ಮಾಜಿ ಸದಸ್ಯ ಜಾಬಗೆರೆ ರಮೇಶ್ ಕುಮಾರ್, ಶಿಕ್ಷಕ ಸಂಘದ ಚನ್ನವೀರಪ್ಪ, ಕೇಂದ್ರ ಸಮಿತಿಯ ಸದಸ್ಯ ಯು.ಎಸ್. ಬಸವರಾಜು, ಶರಣಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಬಸವರಾಜು, ಶ್ರೀದರ್, ಕೂಸಪ್ಪ ಇದ್ದರು.---------------------